Monday, December 21, 2009

ಕನ್ನಡದ ಬದ್ಧತೆಯಿರುವವರನ್ನು ಆರಿಸಿ ಪಾಲಿಕೆಗೆ ಕಳಿಸಿ....

*****

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆ-ನಿಯತಕಾಲಿಕೆ-ಪುಸ್ತಕಗಳ ಮಾರಾಟ ಸ್ಥಗಿತಗೊಂಡಿರುವ ಬಗ್ಗೆ ಹಿಂದೆ ಹೇಳಿದ್ದೆ.

ಕೆಲ ದಿನಗಳ ಹಿಂದೆ, ನಿಲ್ದಾಣದ ಒಳಾಂಗಣದಲ್ಲಿ (ಸುರಕ್ಷೆ ತಪಾಸಣೆಯ ನಂತರ) ವಿಮಾನ ನಿಲ್ದಾಣ ಪ್ರಾಧಿಕಾರ ಉಚಿತವಾಗಿ ಪ್ರಯಾಣಿಕರ ಓದಿಗಾಗಿ ಇರಿಸಿದ್ದ ಪತ್ರಿಕೆಗಳ ಅಡ್ಡಣಿಗೆಯಲ್ಲಿ, ಇಂಗ್ಲೀಷ್ ಪತ್ರಿಕೆಗಳ ನಡುವೆ "ವಿಜಯ ಕರ್ನಾಟಕ" ಕಾಣಿಸಿಕೊಂಡಿತ್ತು. ಬೆಂಗಳೂರಿನಿಂದ ಪ್ರಕಟವಾಗುವ ಎಲ್ಲಾ ಇಂಗ್ಲೀಷ್ ಪತ್ರಿಕೆಗಳೂ ಇಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಿರುವ ನಿಲ್ದಾಣ ಪ್ರಾಧಿಕಾರ ಕನ್ನಡದ್ದು ಮಾತ್ರ ಏಕೆ ಒಂದೇ ಪತ್ರಿಕೆ ಮಾತ್ರ ಇರಿಸಿದೆ ಎಂದು ಅವರನ್ನು ಪ್ರಶ್ನಿಸಿದ್ದೆ. ಇವತ್ತು ಇದೇ ಜಾಗದಲ್ಲಿ ವಿ.ಕ ಪಕ್ಕ "ಪ್ರಜಾವಾಣಿ" ಸಹ ಕಂಡು ಬಂತು.



ಆದಷ್ಟು ಬೇಗ ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ಹೊಸದಿಗಂತ, ಸಂಜೆವಾಣಿ, ಈಸಂಜೆ ಹೀಗೆ ಎಲ್ಲಾ ಕನ್ನಡ ಪತ್ರಿಕೆಗಳು ಅಲ್ಲಿ ದೊರೆಯುವಂತಾಗಬೇಕು. ಇಲ್ಲಿಂದ ಪ್ರಯಾಣಿಸುವ ಕನ್ನಡ ಗ್ರಾಹಕರು ಜಾಗೃತರಾಗಿ ಕನ್ನಡ ಪತ್ರಿಕೆಗಳಿಗೆ ಬೇಡಿಕೆ-ಆಗ್ರಹ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ

*****

ಮತ್ತೊಂದು ವಿಪರ್ಯಾಸವೆಂದರೆ ಇಲ್ಲಿ ಪ್ರಕಟವಾಗುವ ಜಾಹೀರಾತುಗಳು. ಇದು ಜಾಹೀರಾತು ಹೊರಡಿಸಬಯಸುವವರು ಮತ್ತು ಅವರನ್ನು ದಾರಿ ತಪ್ಪಿಸುವ ಜಾಹೀರಾತು ಸಂಸ್ಥೆಗಳ ಧಾರ್ಷ್ಟ್ಯ ಪ್ರದರ್ಷನ ಎಂದು ಹೇಳಬಹುದಾಗಿದೆ.



ಹೇಳಿ ಈ ಜಾಹೀರಾತು ಇಂಗ್ಲೀಷ್ ಲಿಪಿ ಬಲ್ಲ ಹಿಂದಿಯವರಿಗ, ಅಥವ ಕನ್ನಡಿಗರು ಹಿಂದಿಯನ್ನು ಇಂಗ್ಲೀಷ್ ನಲ್ಲಿ ಓದಿ ನಮ್ಮ ಬಗ್ಗೆ ತಿಳಿದುಕೊಳ್ಳಲಿ ಎಂಬ ಇವರ ಉದ್ಧಟತನವ? ನಾರ್ವೇ ದೇಶದ ಮೂಲದ "ಯೂನಿನಾರ್" ಎಂಬ ಈ ಮೊಬೈಲ್ ಸಂಸ್ಥೆ ತನ್ನ ದೇಶದ ವಿಮಾನ ನಿಲ್ದಾಣದಲ್ಲಿ ಇದೇ ರೀತಿ ಜಾಹೀರಾತು ಹೊರಡಿಸಲು ಈ ಜಾಹೀರಾತು ಸಂಸ್ಥೆಗಳಿಗೆ ಅವಕಾಶ ಕೊಡುತ್ತದೆಯ? ಬೆಂಗಳೂರಿಗೆ ಬಂದು ಹೋಗುವ ಪರಭಾಷಿಕರಿಗಿಂತ ನಾರ್ವೇ ವಿಮಾನ ನಿಲ್ದಾಣಗಳಲ್ಲಿ ಬಂದು ಹೋಗುವ ಹೆಚ್ಚಿನ ನಾರ್ವೇತರರನ್ನು ನಾನು ನೋಡಿದ್ದೇನೆ!

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಾರೇ ಜಾಹೀರಾತು ಹೊರಡಿಸಲಿ ಅದು ಕನ್ನಡಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಬೇಕಾಗಿರುವ ಜಾಹೀರಾತಾಗಿರಬೇಕು. ಇವರ ಜಾಹೀರಾತನ್ನು ಕನ್ನಡದಲ್ಲಿ "ಇದು ನನ್ನ ನಂಬರ್" ಅಂತ ಮುಂಬೈನ 'ಛತ್ರಪತಿ ಶಿವಾಜಿ' ಅಥವ ಚೆನ್ನೈ ನ 'ಅಣ್ಣಾ' ವಿಮಾನ ನಿಲ್ದಾಣದಲ್ಲಿ ಮಾಡಿಸಿ ಅಂತ ಹೇಳ್ತಿಲ್ಲ. ಅಲ್ಲಿ ಕ್ರಮವಾಗಿ ಮರಾಠಿ ಮತ್ತು ತಮಿಳನಲ್ಲಿ ಮಾಡಿಸಬೇಕಾದ್ದು ಜಾಹೀರಾತು ಸಂಸ್ಥೆಗಳ ಹೊಣೆಗಾರಿಕೆ.

ಅಲ್ಲಲ್ಲಿಯ ಸ್ಥಳೀಯ ಭಾಷೆ, ಜನಾಂಗಕ್ಕೆ ಆಧ್ಯತೆ ಎಂಬುದು ಪ್ರಚಲಿದಲ್ಲಿರುವಂತೆ, ಕನ್ನಡ ನಾಡಿನ ನೆಲ, ಜಲ, ಸಂಪನ್ಮೂಲ, ಉದ್ದಿಮೆಗಳು, ಉದ್ಯೋಗಗಳು, ವ್ಯವಸ್ಥೆಗಳು... ಇರುವುದು ಕನ್ನಡಿಗರ ಏಳಿಗೆಗಾಗಿ ಮತ್ತು ಸೌಕರ್ಯಕ್ಕಾಗಿ, ಹಾಗಾಗಿ ಕರ್ನಾಟಕದಲ್ಲಿನ ಯಾವುದೇ ಹೊಸ ವ್ಯವಹಾರದಲ್ಲಿ ಕನ್ನಡ ಅನುಷ್ಠಾನವಾಗಬೇಕೆಂಬುದು ಕನ್ನಡಿಗನ ಸಹಜ ಬೇಡಿಕೆಗೆ ಪೂರಕವಾಗುತ್ತದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಆಧ್ಯತೆ ಒದಗಿಸುವ ಮೂಲಕ, ವ್ಯವಹಾರಸ್ಥರು ಕನ್ನಡಿಗನ ಮನ್ನಣೆಗೆ ಪಾತ್ರವಾಗುತ್ತಾರೆ. (ಹಾಗೆಯೆ ಇತರ ರಾಜ್ಯಗಳಲ್ಲಿ ಆಯಾ ರಾಜ್ಯ ಭಾಷೆಗಳಿಗೆ ಪ್ರಧಾನತೆ ಒದಗಿಸಿ ಅಲ್ಲಿನ ಸ್ಥಳೀಯರ ಮನ ಗೆಲ್ಲುವುದು ವ್ಯವಹಾರದ ಒಂದು ದಾರಿ).

ಜಾಹೀರಾತುಗಳಲ್ಲಿ ಕನ್ನಡ ಕಡ್ಡಾಯಗೊಳಿಸಿರುವ ಬಗ್ಗೆ ನಮ್ಮ ಸರ್ಕಾರದ ಆದೇಶವಿದೆ. ನಮ್ಮ ಸರ್ಕಾರದ ಎಲ್ಲಾ ಮಂತ್ರಿವರೇಣ್ಯರು, ಆಡಳಿತಗಾರರು ಇಲ್ಲಿ ಓಡಾಡುತ್ತಾರೆ. ಇಲ್ಲಿನ ಒಳಾಂಗಣದಲ್ಲಿನ ಒಂದೇ ಒಂದು ಜಾಹೀರಾತಿನಲ್ಲಿ ಕನ್ನಡವಿಲ್ಲ!. ತಲೆಯೆತ್ತಿ ಒಮ್ಮೆ ಇಂತಹುವುಗಳನ್ನು ಅವರು ನೋಡಿ ಕ್ರಮ ಎಂದು ತೆಗೆದುಕೊಳ್ಳುವರೋ ಎಂಬುದೆ ಪ್ರಶ್ನೆಯಾಗಿದೆ. ಅಥವ ಇಂತಹುವಗಳನ್ನು ನೋಡಿ ಸರಿಪಡಿಸುವಂತಹವರನ್ನು ಮಾತ್ರ ಆರಿಸಿ ಕಳುಹಿಸುವ ಜವಾಬ್ದಾರಿ ಸಹ ನಮ್ಮ ಮೇಲಿದೆ.

ಇನ್ನೇನು ದೊಡ್ಡ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಹತ್ತಿರದಲ್ಲಿದೆ. ಬೆಂಗಳೂರಿನಲ್ಲಿ ಇರುವ ಎಲ್ಲಾ ಜಾಹೀರಾತುಗಳಲ್ಲಿ, ನಾಮಫಲಕಗಳಲ್ಲಿ, ಎಲ್ಲಾ ರೀತಿಯಲ್ಲಿ ಕನ್ನಡಕ್ಕೆ ಮಾನ್ಯತೆ ದೊರಕಬೇಕೆ? ಹಾಗಾದ್ರೆ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಬದ್ಧತೆಯಿರುವವರನ್ನು ಆರಿಸಿ ಪಾಲಿಕೆಗೆ ಕಳಿಸಿ.

*****

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

*****

Monday, December 7, 2009

ಹೈದರಾಬಾದು ರಾಜ್ಯ ನೋಟಿನಲ್ಲಿ ಕನ್ನಡ, ಈಗಿನ ಆಡಳಿತದಲ್ಲಿ!

*****

ಗಮನಿಸಿ, "ಹಳೆಯ ಒಂದು ರೂಪಾಯಿಯ ಚಿತ್ರ".




ಆದರೆ ಇದು ಭಾರತ ಸರ್ಕಾರ ಹೊರಡಿಸಿದ್ದಲ್ಲ! ಕನ್ನಡದಲ್ಲಿ ಒಂದು ರೂಪಾಯಿ ಎಂದು ಬರೆದಿರುವುದರಿಂದ ನಮ್ಮ ಸರ್ಕಾರ ಏನಾದ್ರೂ ಮಾಡಿಸಿರಬಹುದು ಎಂದು ಎಲ್ಲರಿಗೂ ಅನ್ನಿಸಿರಬಹುದು. ಅಲ್ಲ, ಆಗಿನ ನಿಜಾಮರ ಹೈದರಾಬಾದು ರಾಜ್ಯದ ಆಡಳಿತದಲ್ಲಿ ಚಲಾವಣೆಯಲ್ಲಿದ್ದ ಒಂದು ರೂಪಾಯಿಯ ಚಿತ್ರ. ಹೌದು ಆ ಪ್ರದೇಶದಲ್ಲಿ ವ್ಯವಹರಿಸುವವ ಅನುಕೂಲಕ್ಕಾಗಿ ಅಂದು ಆ ಪ್ರದೇಶದಲ್ಲಿ ಪ್ರಚಲಿತವಿದ್ದ ಭಾಷೆಗಳಲ್ಲೇ ನೋಟಿನ ಮೇಲೆ ಬರೆಸಿದ್ದರು. ರಾಯಚೂರು, ಗುಲ್ಬರ್ಗ, ಬೀದರ್ ಹೀಗೆ ಅಚ್ಚ ಕನ್ನಡದ ಪ್ರದೇಶಗಳು ಆಗ ಹೈದರಾಬಾದು ರಾಜ್ಯದ ಆಳ್ವಿಕೆಯಲ್ಲಿದ್ದು ಅಲ್ಲಿ ನೆಲೆಸಿದ್ದ ಕನ್ನಡಿಗರ ಅನುಕೂಲಕ್ಕಾಗಿ ನೋಟಿನ ಮೇಲೆ ಕನ್ನಡವನ್ನು ಸಹ ಬಳಸಿದ್ದರು.

ಮತ್ತೊಂದು ಚಿತ್ರ ಗಮನಿಸಿ.




ಇದು ೧೯೩೦, ಮೈಸೂರು ಸಂಸ್ಥಾನದಲ್ಲಿನ ಪ್ರದೇಶಗಳಲ್ಲಿನ ನೋಂದಣಿ ಕೆಲಸಗಳಿಗಾಗಿ ಪ್ರಚಲಿತದಲ್ಲಿದ್ದ ಛಾಪಾ ಕಾಗದ. ಆಗ ಛಾಪಾ ಕಾಗದದ ಮೇಲಿನ ಬರಹ, ನೋಂದಣಿ ಕಚೇರಿಗಳಲ್ಲಿನ ಮೊಹರು ಎಲ್ಲೆಡೆ ಕನ್ನಡ ವ್ಯಾಪಕವಾಗಿ ಬಳಸಲ್ಪಡುತ್ತಿತ್ತು.

ಇವೆಲ್ಲಾ ಮುಗಿದು ಭಾರತ ದೇಶ ಸ್ಥಾಪನೆಯಾಯ್ತು. ಭಾಷಾವಾರು ಪ್ರಾಂತ್ಯಗಳಾಗಿ ಪ್ರದೇಶಗಳನ್ನು ವಿಂಗಡಿಸಲಾಯ್ತು. ಬಹುತೇಕ ಕನ್ನಡ ಮಾತನಾಡುವವರೆಲ್ಲ ಮೈಸೂರು ರಾಜ್ಯ ಹೆಸರಿನಲ್ಲಿ ಒಂದಾದರು. ಆಮೇಲೆ ಮೈಸೂರು ಕರ್ನಾಟಕವೂ ಆಯ್ತು. ಇಲ್ಲಿನ ಆಡಳಿತದ ಎಲ್ಲಾ ಹಂತಗಳಲ್ಲಿ ಕಡ್ಡಾಯ ಕನ್ನಡ ಬಳಕೆಯ ಕಾನೂನು, ಮತ್ತೊಂದು ಮಗದೊಂದು ಆಯ್ತು. ಆದರೆ ನಂತರದಲ್ಲಿ ಕನ್ನಡಿಗರು ಉಪಯೋಗಿಸಬೇಕಾಗಿ ಬಂದ ಛಾಪಾ ಪತ್ರದ ಕಥೆ ಏನಾಯ್ತು?



ನಂತರ ಅದು ಇದೂ ಹಗರಣಗಳು ನಡೆದು ಇದನ್ನು ಈಗ ಬ್ಯಾಂಕುಗಳ ಮೂಲಕ ವಿತರಿಸುವ ಕೆಲಸ ಶುರುವಾಗಿದೆ.

ಮೊನ್ನೆ ಗೆಳೆಯ ವಿವೇಕ್ ತಮ್ಮ ನೋಂದಣಿ ಕೆಲಸವೊಂದರ ಸಲುವಾಗಿ ಪಡೆದ ಛಾಪಾ ಕಾಗದದಲ್ಲಿ ಬಂದೊದಗಿರುವ ಪರಸ್ಥಿತಿ ಬಗ್ಗೆ ಗಮನಿಸಲು ಅದರ ಪ್ರತಿ ಕಳುಹಿಸಿದ್ದರು.




ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮೂಲಕ ವಿತರಿಸಲ್ಪಟ್ಟ, ಕರ್ನಾಟಕ ಸರ್ಕಾರದ ಹೆಸರಿರುವ, ಆದರೆ ಒಂದೇ ಒಂದು ಕನ್ನಡ ಅಕ್ಷರವಿಲ್ಲದ ಛಾಪಾ ಪತ್ರ ಇದಾಗಿದೆ.


ಇದು ಕೇವಲ ಛಾಪಾ ಕಾಗದದ ಕಥೆ ಮಾತ್ರವಲ್ಲ. ಕನ್ನಡಿಗ ಜನ ಸಾಮಾನ್ಯರು ಇವತ್ತು ಬ್ಯಾಂಕು, ವಿಮಾ ಸಂಸ್ಥೆ, ಹೋದರೆ ಅರ್ಜಿ, ನಮೂನೆ ಕನ್ನಡದಲ್ಲಿರುವುದಿಲ್ಲ. ಕನ್ನಡದಲ್ಲಿ ಮಾತನಾಡಿದರೆ ಸೇವೆ ನಿರಾಕರಣೆಯಾಗುತ್ತದೆ. {ಇಂತಹ ಕಡೆ ಹೋದರೆ ಕೇವಲ ಇಂಗ್ಲೀಷ್-ಹಿಂದಿಯಲ್ಲಿ ಮಾತನಾಡಬೇಕಾಗುವ ವಾತಾವರಣ ಅಲ್ಲಿರುತ್ತೆ).

ಇವತ್ತು ಕನ್ನಡದ "ಭಾರತೀಯ ಅಂಚೆ" ಹೆಸರು ಮಾಯವಾಗಿ ಅದು 'INDIA POST', ಹಿಂದಿಯ 'ಭಾರತೀಯ ಡಾಕ್' ಆಗಿ ಪರಿವರ್ತನೆಯಾಗಿದೆ.




ಬೆಂಗಳೂರಿನ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಹೆಸರಿನ ಲಾಂಛನದಿಂದ ನಿಧಾನವಾಗಿ ಕನ್ನಡ ಮಾಯವಾಗಿದೆ. ನಮ್ಮ ಕರ್ನಾಟಕ ಸರ್ಕಾರ ಕನ್ನಡ ಅನುಷ್ಠಾನ ವರ್ಷ ಅಂತ ಘೋಷಣೆ ಮಾಡತ್ತೆ! ಇದರ ಜತೆಗೆ ಕನ್ನಡ ಅಭಿವೃದ್ಢಿ ಎಂಬ ಪ್ರಾಧಿಕಾರವೊಂದು ಕನ್ನಡಿಗರ ರಕ್ಷಣೆಗಿದೆ! ಆದರೆ ಎಲ್ಲೆಡೆ ಕನ್ನಡ ಅನುಷ್ಠಾನ ಮಾಡುವ ಇಚ್ಛಾಶಕ್ತಿ ಮಾತ್ರ ಇವರ್ಯಾರಲ್ಲೂ ಕಂಡು ಬರುತ್ತಿಲ್ಲ.

*****

ಜಿ. ಎಸ್. ಮೇಲ್ಕೋಟೆ: ಮೇಲಿನ ಒಂದು ರೂಪಾಯಿ ಚಿತ್ರದಲ್ಲಿನ ಸಹಿ ನೋಡಿ. ನಿಜಾಮರ ಹೈದರಾಬಾದು ರಾಜ್ಯ ಆಡಳಿತದಲ್ಲಿ ತೊಡಗಿಸಿಕೊಂಡಿದ್ದ ಒಬ್ಬ ಕನ್ನಡಿಗ. ಆ ಸಮಯದಲ್ಲಿ ಅಲ್ಲಿ ಪ್ರಚಲಿತವಿದ್ದ (ಕನ್ನಡವನ್ನೂ ಸೇರಿ) ಭಾಷೆಗಳನ್ನು ನೋಟಿನಲ್ಲಿ ಸೇರಿಸಲು ಬಹುಷ: ಸಲಹೆ ನೀಡಿದ್ದು ಇವರೆ ಇರಬಹುದು! ಹೈದರಾಬಾದಿನ ಕನ್ನಡ ಸಾಹಿತ್ಯ ಕೂಟವನ್ನು ಕಟ್ಟಿ ಬೆಳೆಸಿದವರು. ನಂತರದಲ್ಲಿ ಇವರು ಹೈದರಾಬಾದ್ನಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿ ಭಾರತ ಸರ್ಕಾರದಲ್ಲೂ ಸೇವೆ ಸಲ್ಲಿಸಿದ್ದವರು.

*****

ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

****

Sunday, November 29, 2009

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆ!

*****

*****
೨೦೦೮ರ ಮೇ ತಿಂಗಳಿನಲ್ಲಿ ಬೆಂಗಳೂರಿನ ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶುರುವಾದಾಗ ಅಲ್ಲಿನ ಕನ್ನಡ ವಾತಾವರಣದಲ್ಲಿನ ಕೊರತೆಗಳಲ್ಲಿ, ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳು ಅಲಭ್ಯವಾದದ್ದು ಸಹ ಒಂದು. ನಿಲ್ದಾಣದಲ್ಲಿ ಚೆಕ್ ಇನ್ ಸಮಯದಲ್ಲಿ ವಿಮಾನ ಸಂಸ್ಥೆಯವರು (ಜೆಟ್, ಕಿಂಗ್ ಫಿಷರ್, ಎಮಿರೇಟ್ಸ್, ಸಿಂಗಪೂರ್ ಏರ್ ಲೈನ್ಸ್ ... ಹೀಗೆ) ಉಚಿತವಾಗಿ ಆ ದಿನದ ವಾರ್ತಾ ಪತ್ರಿಕೆ ಒದಗಿಸುವ ಪರಿಪಾಠವಿದೆ. ಎರಡು ಮಾತಿಲ್ಲ ಇವರು ಒದಗಿಸುವ ಪತ್ರಿಕೆಗಳೆಲ್ಲ ಆ ದಿನದ ಇಂಗ್ಲೀಷ್ ದೈನಿಕಗಳು. ಹಾಗೆಯೆ ಒಳಾಂಗಣದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದವರು ಪತ್ರಿಕೆಗಳನ್ನು ಅಲ್ಲಲ್ಲಿ ಉಚಿತವಾಗಿ ದೊರಕುವ ವ್ಯವಸ್ಥೆ ಮಾಡಿದ್ದಾರೆ. ವಿಮಾನ ಸಂಸ್ಥೆಯವರು ಹಾಗು ವಿಮಾನ ನಿಲ್ದಾಣ ಪ್ರಾಧಿಕಾರ ಈ ಪತ್ರಿಕೆಗಳನ್ನು ಕೊಂಡು ಪ್ರಯಾಣಿಕರಿಗೆ ಒದಗಿಸುತ್ತಿದ್ದಾರೋ ಅಥವ ವಾರ್ತಾ ದೈನಿಕ ಸಂಸ್ಥೆಗಳವರು ಮಾರಾಟ ಉತ್ತೇಜಕ ಯೋಜನೆಯಡಿಯಲ್ಲಿ ಉಚಿತವಾಗಿ ಇದನ್ನು ವಿಮಾನ ಸಂಸ್ಥೆಗಳಿಗೆ ಒದಗಿಸುತ್ತಿದ್ದಾರೋ ವಿವರಗಳು ಗೊತ್ತಿಲ್ಲ. ಹಾಗೊಂದು ವೇಳೆ ವಿಮಾನ ಯಾನ ಸಂಸ್ಥೆಯವರು ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರ ಕೇವಲ ಇಂಗ್ಲೀಷ್ ಪತ್ರಿಕೆಗಳನ್ನು ಕೊಂಡು ಪ್ರಯಾಣಿಕರಿಗೆ ಉಚಿತವಾಗಿ ಕೊಡುತ್ತಿದ್ದರೆ ಇವರು ಕನ್ನಡ ಗ್ರಾಹಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಅಭಿಪ್ರಾಯಕ್ಕೆ ಬರಬಹುದಾಗಿದೆ.

****

ಬೆಂಗಳೂರಿನಿಂದ ಇತರ ರಾಜ್ಯದ ನಗರಗಳಿಗೆ-ಹೊರದೇಶಕ್ಕೆ ಹೋಗುವ ವಿಮಾನಗಳು ಹಾಗಿರಲಿ, ಇವತ್ತಿಗೂ ಬೆಂಗಳೂರು-ಮಂಗಳೂರು, ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ವಿಮಾನದಲ್ಲಿ ಕನ್ನಡ ಪತ್ರಿಕೆಗಳು, ಕನ್ನಡದಲ್ಲಿ ಗ್ರಾಹಕ ಸೇವೆ (ವಿಮಾನದಲ್ಲಿನ ಘೋಷಣೆ, ಸುರಕ್ಷತೆ ಮಾಹಿತಿ, ಇತ್ಯಾದಿ) ದೊರಕುದಿರುವುದು ವಿಪರ್ಯಾಸವಾಗಿದೆ. ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರ ೨೦೦೮-೨೦೦೯ನೇ ಸಾಲಿನಲ್ಲಿ ಕೈಗೊಂಡ ಕಾರ್ಯಕ್ರಮದ ಪ್ರಗತಿಯಲ್ಲಿ! ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವಂತೆ ಕೋರಿ ಪತ್ರ ಬರೆಯಲಾಗಿದೆ ಎಂದಿದೆ. ಆದರೆ ಯಾವ ರೀತಿ ಇಲ್ಲಿ ಕನ್ನಡ ಅನುಷ್ಠಾನವಾಗಿದೆ ಎಂಬ ಮಾಹಿತಿ ತರಿಸಿಕೊಂಡು ವರದಿ ಮಾಡುವ ಬಗ್ಗೆ ಯೋಚಿಸಿದಂತೆ ಕಂಡು ಬಂದಿಲ್ಲ.

****

ಮೊಟ್ಟ ಮೊದಲಿಗೆ ಇಲ್ಲಿ ಕನ್ನಡ ಪತ್ರಿಕೆ ದೊರೆಯುವಂತೆ ಮಾಡಿದ್ದು ಕನ್ನಡಪ್ರಭ ಬಳಗ. ನಿಲ್ದಾಣದ ಒಳಾಂಗಣದಲ್ಲಿ "ಲೈಪ್ ಸ್ಟೈಲ್" ಎಂಬ ಪುಸ್ತಕಗಳ ಮಳಿಗೆಯಲ್ಲಿ ಕನ್ನಡಪ್ರಭ ಮಾರಾಟವಾಗುತ್ತಿತ್ತು.




ನಂತರದಲ್ಲಿ ಪ್ರಜಾವಾಣಿ, ಉದಯವಾಣಿ, ಸುಧಾ, ಮಯೂರ, ಚಂಪಕ, ಗೃಹಶೋಭ ಹೀಗೆ ಕನ್ನಡ ಪತ್ರಿಕೆಗಳು ಅಲ್ಲಿನ ಸ್ಟಾಂಡ್ ನಲ್ಲಿ ಕಂಡು ಬಂದವು. ಈ ವರ್ಷದ ಅಕ್ಟೋಬರ್ ನವರೆಗೆ ನಾನು ಕಂಡಂತೆ ಈ ಪತ್ರಿಕೆಗಳು ಅಲ್ಲಿ ಲಭ್ಯವಿದ್ದವು. ಈ ನವಂಬರ್ ನಲ್ಲಿ ನಾಲ್ಕೈದು ಸಲ ನಾನು ಇಲ್ಲಿಂದ ಪ್ರಯಾಣಿಸುವಾಗ ಕಂಡದ್ದು ಕನ್ನಡ ಪತ್ರಿಕೆಗಳ ಮಾರಾಟ ಇಲ್ಲಿ ಮಾಯವಾಗಿರುವುದು. ಕೇಳಿದಾಗ ತಿಳಿದದ್ದು ಅಂಗಡಿಯವರು ಕನ್ನಡ ಪತ್ರಿಕೆ ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರಂತೆ. ಇದು ಈ ವರ್ಷದ ರಾಜ್ಯೋತ್ಸವಕ್ಕೆ ಕನ್ನಡ ಪ್ರಯಾಣಿಕರಿಗೆ ದೊರೆತಿರುವ ಕೊಡುಗೆ! ಅದರೆ ಇಂಗ್ಲೀಷ ಜತೆಗೆ ಈಗಲೂ ಇಲ್ಲಿ ತಮಿಳು, ತೆಲುಗು, ಮಲಯಾಳಿ, ಹಿಂದಿ ಪತ್ರಿಕೆಗಳು ಮಾರಾಟಕ್ಕೆ ಲಭ್ಯವಿದೆ.

****

ಮತ್ತೊಮ್ಮೆ ಮೊನ್ನೆ ೧೭ ನೇ ನವಂಬರ್ ೨೦೦೯ ರಂದು ಇಲ್ಲಿಂದ ಪ್ರಯಾಣಿಸುವಾಗ ನಿಲ್ದಾಣದ ಒಳಾಂಗಣದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರ ಉಚಿತವಾಗಿ ಪ್ರಯಾಣಿಕರ ಓದಿಗಾಗಿ ಇರಿಸಿದ್ದ ಪತ್ರಿಕೆಗಳ ಅಡ್ಡಣಿಗೆಯಲ್ಲಿ, ಇಂಗ್ಲೀಷ್ ಪತ್ರಿಕೆಗಳ ನಡುವೆ ಮತ್ತೊಮ್ಮೆ ಕನ್ನಡ ಪತ್ರಿಕೆಯೊಂದು ಕಂಡು ಬಂದದ್ದು "ಲವಲVK"! ಮೂಡಿಸಿತು. ಸುಮಾರು ಪ್ರಯಾಣಿಕರು ವಿ.ಕ. ಕೈಲಿ ಹಿಡಿದು ಒದುತ್ತಿದ್ದುದು ಸಹ ಕಂಡು ಬಂತು. ಆದರೆ ಸಹಜವಾಗಿ ಮತ್ತೊಂದು ಪ್ರಶ್ನೆ ಎದ್ದಿತು. ಬೆಂಗಳೂರಿನಿಂದ ಪ್ರಕಟವಾಗುವ ಎಲ್ಲಾ ಇಂಗ್ಲೀಷ್ ಪತ್ರಿಕೆಗಳೂ ಇಲ್ಲಿ ಉಚಿತವಾಗಿ ಲಭ್ಯವಾಗುವಂತೆ ಮಾಡಿರುವ ನಿಲ್ದಾಣ ಪ್ರಾಧಿಕಾರ ಕನ್ನಡದ್ದು ಮಾತ್ರ ಏಕೆ ಒಂದೇ ಪತ್ರಿಕೆ ಮಾತ್ರ ಇರಿಸಿದೆ?

****

ಪ್ರತಿನಿತ್ಯ ಅನೇಕ ಕನ್ನಡಿಗರು ಸಹ ಈ ನಿಲ್ದಾಣದಿಂದ ಪ್ರಯಾಣ ಮಾಡುತ್ತಾರೆ. ಅವರೆಲ್ಲರೂ ಈ ಕುರಿತು ಕನ್ನಡ ಗ್ರಾಹಕ ಸೇವೆ ದೃಷ್ಟಿಯಿಂದ ಯೋಚಿಸಬೇಕಾದ್ದು ಅಗತ್ಯವಿದೆ. ಯಾವುದೇ ವಿಮಾನದಲ್ಲಿ ನಾವು ಪ್ರಯಾಣಿಸಿದಾಗ [ಬೆಂಗಳೂರಿನಿಂದ ಹೊರಡುವ / ಬೆಂಗಳೂರಿಗೆ ಬರುವ]ಕನ್ನಡ ಪತ್ರಿಕೆ ಕೇಳಬೇಕು. ಅವರ ಗ್ರಾಹಕ ಮರುಮಾಹಿತಿ ಪತ್ರದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ದೊರಕದಿರುವ ಬಗ್ಗೆ ದೂರು ದಾಖಲಿಸಬೇಕು. ಈ ರೀತಿ ಕನ್ನಡ ಪ್ರಯಾಣಿಕರಿಂದ ಸಹ ನಿಲ್ದಾಣದಲ್ಲಿ / ವಿಮಾನದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ದನಿಗೂಡಬೇಕಿದೆ . ಆಗ್ರಹಿಸುವುದರ ಮೂಲಕ ಕನ್ನಡ ಪತ್ರಿಕೆಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸುವ ಅಗತ್ಯದ ಜವಾಬ್ದಾರಿಯೂ ನಮ್ಮ ಮೇಲೆ ಇದೆ!


ಕಲ್ಯಾಣ ರಾಮನ್ ಚಂದ್ರಶೇಖರನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

Tuesday, November 24, 2009

ನಾವು ಮೊದಲಿಗೆ ಕನ್ನಡಿಗರೋ! ಅಥವ ಭಾರತೀಯರೋ!

****

"ನಾನು ಮೊದಲು ಭಾರತೀಯ, ಆನಂತರ ಮರಾಠಿಗ, ನಾನು ಮರಾಠಿಗನಾಗಿರುವುದಕ್ಕೆ ಹೆಮ್ಮೆಯಿದೆ, ಜತೆಗೆ ಮುಂಬೈ ಕೇವಲ ಮರಾಠಿಗರದು ಮಾತ್ರವಲ್ಲ ಎಲ್ಲರಿಗೂ ಸೇರಿದ್ದು". ಇತ್ತೀಚೆಗೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತನ್ನ ಕ್ರಿಕೆಟ್ ಜೀವನದ ೨೦ನೇ ವರ್ಷ ಪೂರೈಸಿದ ಸಂದರ್ಭದಲ್ಲಿ ನೀಡಿದ ಹೇಳಿಕೆ!

ಶಿವಸೇನೆಯ ಪ್ರಮುಖ ಬಾಳ ಠಾಕ್ರೆ "ಸಚಿನ್ ನ ಮೇಲಿನ ಹೇಳಿಕೆ ಮರಾಠಿಗರ ಮನಸ್ಸು ನೋಯಿಸಿದೆ, ಈ ರೀತಿಯ ಹೇಳಿಕೆಯ ಮೂಲಕ ಸಚಿನ್ ಮರಾಠಿ ಪಿಚ್ ನಲ್ಲಿ ರನ್ ಔಟ್ ಆಗಿದ್ದಾರೆ" ಎಂಬ ವ್ಯಂಗ್ಯಭರಿತ-ತೀಕ್ಷ್ಣ ಪ್ರತಿಕ್ರಿಯೆ ಇಡೀ ದೇಶಭಕ್ತರ! ಕೆಂಗಣ್ಣಿಗೆ ಗುರಿಯಾಗಿ 'ಠಾಕ್ರೆಗೆ ದೇಶಪ್ರೇಮಕ್ಕಿಂತ ಭಾಷಾ ಪ್ರೇಮ ಮುಖ್ಯವಾಗಿದೆ', 'ಠಾಕ್ರೆಯ ಭಾಷಾಂದತೆಯಿಂದ ರಾಷ್ಟ್ರೀಯತೆಗೆ ಅಪಾಯ', ಠಾಕ್ರೆ ಅಧಿಕ ಪ್ರಸಂಗಿ, ರಾಜಕೀಯ ಮರುಹುಟ್ಟಿಗಾಗಿ ಠಾಕ್ರೆಯ ಹುಚ್ಚು ಕುತಂತ್ರ.......ಹೀಗೆ ಇನ್ನೂ ಹಲವಾರು ರೀತಿಯಲ್ಲಿ ಠಾಕ್ರೆ ಎಲ್ಲರಿಂದಲೂ ಇನ್ನೂ ಬೈಸಿಕೊಳ್ತಾನೆ ಇದಾರೆ.

ಸಚಿನ್ ತೆಂಡೂಲ್ಕರ್ ಹುಟ್ಟಿದ್ದು-ಬೆಳೆದದ್ದು ಕ್ರಿಕೆಟ್ ಆಟ ಪ್ರಾರಂಭಿಸಿದ್ದು ಮುಂಬೈನಲ್ಲಿ, ನಂತರ ಪಶ್ಚಿಮ ಭಾರತ, ಶೇಷ ಭಾರತ, ಭಾರತ ನಂತರ "ಪ್ರಪಂಚದ ಇಲವೆನ್" ನಲ್ಲೂ ಆಡಿ, ಇಡೀ ಪ್ರಪಂಚದಲ್ಲೆ ಮನೆಮಾತಾಗಿರುವುದು ಗೊತ್ತಿರುವುದೆ. ತನ್ನ ೧೬ನೆಯ ವಯಸ್ಸಿನಲ್ಲಿಯೇ ಅವಕಾಶ ದೊರೆತದ್ದು ಮತ್ತು ತನ್ನ ಕ್ರಿಕೆಟ್ ಜೀವನದ ೨೦ ನೆಯ ವರ್ಷದ ನಂತರವೂ ಇನ್ನೂ 'ಚಿರಂಜೀವಿಯಾಗಿ' ಕ್ರಿಕೆಟ್ ಆಟ ಮುಂದುವರೆಸಲು ಸಚಿನ್ ಗೆ ಸಾಧ್ಯವಾಗಿರುವ ಕಾರಣಗಳಲ್ಲಿ, ಭಾರತ ಕ್ರಿಕೆಟ್ ನಲ್ಲಿ ಬೇರೂರಿರುವ "ಮರಾಠಿ" ಲಾಬಿ ಸಹ ಮುಖ್ಯವಾದದ್ದು. ಹಾಗಾಗಿ ಸಚಿನ್ ಮರಾಠಿಗನೆ. ಅದೇ ಅವನ ಬೇರು, ಅನನ್ಯತೆ, ಅಭಿನ್ನತೆ, ಸ್ವಸ್ವರೂಪ, ಗುರುತು ಮತ್ತು ಚಹರೆ ಎಲ್ಲಾ. ಅವನು ಮರಾಠಿಗ ಎಂದು ಹೇಳಿಕೊಳ್ಳುವುದೇ ತಾನೊಬ್ಬ ಭಾರತೀಯ ಎಂದು ಘೋಷಿಸಿಕೊಂಡಂತೆ. ಅದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿರಲಿಲ್ಲ. ಭಾರತದಲ್ಲೇ ನಾನು ಭಾರತೀಯ ಎಂದು ಹೇಳಿಕೊಳ್ಳುವುದು, ಎಲ್ಲಿಯವನು ಎಂಬ ಪ್ರಶ್ನೆ ಹುಟ್ಟುಹಾಕುತ್ತದೆಯಲ್ಲವೆ. ಮುಂಬೈಗೆ ಆಡಲು ಶುರುಮಾಡಿದ ಮೇಲಲ್ವೆ ಸಚಿನ್ ಭಾರತ ತಂಡಕ್ಕೆ ಬಂದದ್ದು. ಮಹಾರಾಷ್ಟ್ರ - ಮಂಬೈ ನಡುವೆ ರಣಜಿ ಪಂದ್ಯ ನಡೆಯುವಾಗ ಮುಂಬೈಯನ್ನು ಪ್ರತಿನಿಧಿಸುವ ಸಚಿನ್, ಮಹಾರಾಷ್ಟ್ರವನ್ನು ಸೋಲಿಸಲು ಆಟ ಆಡ್ತಾನೆ ಹೊರತು ನಾನು ಮರಾಠಿಗನಾಗಿ ಮಹಾರಾಷ್ಟ್ರಾನ ಸೋಲಿಸೋದು ಹೇಗೆ ಅಂತ ಸುಮ್ಮನೆ ವಿಕೆಟ್ ಬೀಸಿ ಹೊರಹೋಗುವುದಿಲ್ಲವಲ್ಲ. ಒಬ್ಬ ಆಟಗಾರನಾಗಿ ಸಚಿನ್, ಹೇಳಿಕೊಳ್ಳಬೇಕಾದ್ದು ಆಟಗಾರನಿಗಿರಬೇಕಾದ ಮನೋಭಾವ ಮಾತ್ರ. ಹಾಗಾಗಿ ತಾನು "ಮೊದಲು ಭಾರತೀಯ" ಅಂತ ಹೇಳಿಕೊಳ್ಳದೆ "ನಾನು ಇಡೀ ಪ್ರಪಂಚದ ಕ್ರಿಕೆಟ್ ಆಟದ ಸಮುದಾಯಕ್ಕೆ ಸೇರಿದವನು. ಪ್ರಪಂಚದ ಇಡೀ ಕ್ರಿಕೆಟ್ ಸಮುದಾಯ ಒಂದೇ" ಎಂಬ ಮಾತು ಸಚಿನ್ ಹೇಳಿದ್ದಿದ್ದರೆ, ಬಹುಷಃ ಠಾಕ್ರೆ ಸಾಮ್ನಾದಲ್ಲಿ ಸುಮ್ನೆ ಇದ್ದು ಬಿಡುತ್ತಿದ್ದರೇನೋ! ನಮ್ಮ ದೇಶಭಕ್ತರುಗಳು! ಸಹ, ದೇಶ ಕಟ್ಟುವ ತಮ್ಮ ಬಿಡುವಿಲ್ಲದ ಸಮಯವನ್ನು ಸುಮ್ಮನೆ ಠಾಕ್ರೆ ವಿರುದ್ಧ ಹರಿಹಾಯುವುದನ್ನು ತಪ್ಪಿಸುವಂತಾಗಿರುತ್ತಿತ್ತೇನೋ?

****
ಇನ್ನು ಸಚಿನ್ ನ ಮತ್ತೊಂದು ಹೇಳಿಕೆ 'ಮುಂಬೈ ಎಲ್ಲರಿಗೂ ಸೇರಿದ್ದು'. ಈ ರೀತಿಯ ಹೇಳಿಕೆ ಮರಾಠಿ ಪ್ರಿಯರಿಗೆ (ಭಾಷಾವಾರು ಪ್ರಾಂತ್ಯಗಳಿಂದ ಕೂಡಿ, ಒಂದು ಒಕ್ಕೂಟದ ದೇಶವಾದ ಭಾರತದಲ್ಲಿನ ಮಹಾರಾಷ್ಟ್ರದ ನೆಲದ ಮಕ್ಕಳಿಗೆ) ಖಂಡಿತ ಸಂತೋಷ ತರುವ ವಿಷಯವಲ್ಲ. ನಮ್ಮಲ್ಲಿ ಖ್ಯಾತಿವಂತರು ಈ ರೀತಿಯ ಅರ್ಥವಿಲ್ಲದ ಅರ್ಧ ಹೇಳಿಕೆ ಕೊಡುವಲ್ಲಿ ನಿಸ್ಸೀಮರಾಗಿಬಿಟ್ಟಿದ್ದಾರೆ. ಸಚಿನ್ ಮುಂದುವರೆದು "ಯಾರು ಎಲ್ಲಿ ಬೇಕಾದರೂ ಹೋಗಿ ನೆಲೆಸಿ, ಎಲ್ಲಿ ನೆಲೆಸುವಿರೋ (ನಿಮ್ಮ ಅಭಿವ್ಯಕ್ತಿಯನ್ನುಳಿಸಿಕೊಂಡು) ಅಲ್ಲಿನವರಾಗಿ. ಅಂದರೆ, "ಯಾರು ಬೇಕಾದರೂ ಮುಂಬೈಗೆ ಬನ್ನಿ, ಬಂದು ನಿಮ್ಮದೆ ದ್ವೀಪ ಸಮೂಹ ಮಾಡಿಕೊಳ್ಳಬೇಡಿ. ಮುಂಬೈಗೆ ಬಂದ ಮೇಲೆ ಮರಾಠಿ ಸಾಗರದಲ್ಲಿ ಬೆರೆತು ಮರಾಠಿ ಐಕ್ಯತೆಯಿಂದ ಭಾರತ ದೇಶದ ಒಕ್ಕೂಟದ ಒಗ್ಗಟ್ಟಿಗೆ ಶ್ರಮಿಸಿ" ಎಂಬ ಹೇಳಿಕೆ ಇತ್ತಿದ್ದರೆ ಸಚಿನ್ 'ಸೋಗಿನ ಬುದ್ದಿ ಜೀವಿಯಲ್ಲ' ಎಂಬ ನಿಲುವಿಗೆ ಬರಬಹುದಿತ್ತು.

****
ವಿಪರ್ಯಾಸ ನೋಡಿ ಹೀಗಿದೆ:

"ಹಲವು ಹಿರಿಯರು ಸ್ವಹಿತ ಲೆಕ್ಕಿಸದೆ, ತ್ಯಾಗ, ಹೋರಾಟದ ನಂತರವೇ ಭಾಷೆಯ ಆಧಾರದ ಮೇಲೆ ಭಾಷಾವಾರು ರಾಜ್ಯಗಳಾಗಿ ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದದ್ದು. ಹಾಗಾಗಿ ಭಾರತ ಹಲವು ವೈವಿಧ್ಯಗಳ-ವೈಶಿಶ್ಟ್ಯಗಳ ದೇಶ, ಇಲ್ಲಿನ ದೇಶವಾಸಿಗಳಿಗೆ, ಯಾರು ಎಲ್ಲಿ ಬೇಕಾದರು ಹೋಗಿ ನೆಲಸುವ ಅವಕಾಶ ಇದೆ. ಯಾರು ಬೇಕಾದ್ರೂ ಎಲ್ಲಿಗೇ ಹೋಗಿ ನೆಲೆಸಿ, ಎಲ್ಲಿ ಹೋಗಿ ನೆಲೆಸುತ್ತೀರೋ ಅಲ್ಲಿಯವರಾಗಿ, ಅಲ್ಲಿನ ಆಚಾರ-ವಿಚಾರ-ಭಾಷೆ-ಸಂಸ್ಕೃತಿಯಲ್ಲಿ ಬೆರೆಯಿರಿ. " ಎಂದು ಹೇಳುವವನು ಮತ್ತು ಅನಿಯಂತ್ರಿತ ವಲಸೆ ತಡೆ ಹಿಡಿದು ಸ್ಥಳೀಯ ವೈಶಿಷ್ಟ್ಯ ಕಾಪಾಡಿ, ಸ್ಥಳೀಯರಿಗೆ, ನೆಲದ ಮಕ್ಕಳಿಗೆ, ಪ್ರದೇಶದ ಭಾಷೆಗೆ ಹೆಚ್ಚಿನ ಅವಕಾಶ ದೊರಕಿಸಿ. ಆ ಮೂಲಕ ಆ ಪ್ರಾಂತ್ಯದ ಬಲಪಡಿಸುವಿಕೆ - ಒಗ್ಗಟ್ಟು ಸಾಧ್ಯ. ಇದು ಒಟ್ಟು ಭಾರತ ದೇಶದ ಒಗ್ಗಟ್ಟನ್ನು ಬಲಪಡಿಸಿದಂತೆ" ಎಂದು ಹೇಳುವವನು ಇವತ್ತು ಭಾಷಾಂಧ-ಪ್ರಾಂತ್ಯಾಂಧ ಮತ್ತು ದೇಶದ್ರೋಹಿಯೆನ್ನಿಸಿಕೊಳ್ಳುತ್ತಿದ್ದಾನೆ.

ಯಾವನು ಎಲ್ಲಿ ಬೇಕಾದ್ರೂ ಹೋಗಬಹುದು, ಅವನಿಗಿಷ್ಟ ಬಂದಂಗೆ ನಡಕೋಬಹುದು. ಇದು ಭಾರತ ದೇಶದ ಸಂವಿಧಾನ ಕೊಟ್ಟಿರೋ ಹಕ್ಕು . ವಲಸಿಗರ ಅನುಕೂಲಕ್ಕೆ, ಅವರ ಉದ್ಧಾರಕ್ಕೆ ಮುಂಬೈ, ಬೆಂಗಳೂರು ಹೀಗೆ ಇತರ ದೊಡ್ಡ ಪಟ್ಟಣಗಳನ್ನು ಪ್ರತ್ಯೇಕ ನಗರ ರಾಜ್ಯಗಳನ್ನಾಗಿ ಪರಿವರ್ತಿಸಿ ಬಿಡೋಣ ಇಲ್ಲವೇ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಿ ಎಂದು ಕರೆ ನೀಡುವವನು ಇವತ್ತು ದೇಶಪ್ರೇಮಿಯಾಗಿ ಕಂಡು ಬರುತ್ತಿದ್ದಾರೆ.

****


ಕಿತಾಪತಿಯ ಜನ ಕರ್ಣಾಟಕತ್ವ, ಮಹಾರಾಷ್ಟ್ರತ್ವ, ಆಂದ್ರತ್ವಗಳಿಗೂ ನಮ್ಮ ಭಾರತೀಯತ್ವಕ್ಕೂ ವಿರೋಧ ಭಾವದ ಆರೋಪಣೆ ಮಾಡುತ್ತಾರೆ. "ನಮ್ಮ ಕರ್ನಾಟಕತ್ವ ಎಂದೆಂದಿಗೂ ಭಾರತೀಯತ್ವಕ್ಕೆ ವಿರುದ್ಧವಾದುದಲ್ಲ, ನಾವು ಕರ್ನಾಟಕಕ್ಕೆ ಜಯಘೋಷಮಾಡುವುದು ಭಾರತ ಮಾತೆಗೆ ಜಯಘೋಷ ಮಾಡಿದಂತೆ" ಎಂದು ಹೇಳಿದವರು ನಮ್ಮ ರಾಷ್ಟ್ರಕವಿ ಕುವೆಂಪು.


ನಾವೇ ಏರ್ಪಡಿಸಿಕೊಂಡ ಪ್ರದೇಶವೊಂದರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಾದ, ಸಂಘರ್ಷ, ಚಿಂತನೆ ಎಲ್ಲವೂ ಸಾಮಾನ್ಯ ಆದರೆ ಅದೆಲ್ಲವೂ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರಬೇಕು. ಎಲ್ಲಿ ಆ ಪ್ರದೇಶದ ಸ್ಥಳೀಯರ ಹಿತಚಿಂತನೆಗಳು ಕಡೆಗಣಿಸಲ್ಪಡುತ್ತವೋ, ಸ್ಥಳಿಯೇತರರ ಕೈ ಮೇಲಾಗುವುದಕ್ಕೆ ರೀತಿನಿಯಮಗಳು ಬದಲಾಗುತ್ತವೋ ಆಗ ಆ ಪ್ರದೇಶದ ಒಗ್ಗಟ್ಟು ಹೇಗೆ ಮುಂದುವರೆಯಲು ಸಾಧ್ಯ. ಈ ರೀತಿಯ ಒಗ್ಗಟ್ಟು ಮುರಿಯುವ ಘಟನೆಗಳು ನಾಳೆ ಆಯಾ ಪ್ರದೇಶಗಳ ಪ್ರತ್ಯೇಕ ರಾಷ್ಟ್ರಗಳ ನಿರ್ಮಾಣಕ್ಕೆ ಸಂಭವನೀಯ ಕಾರಣಗಾಳಾಗುವುದರಲ್ಲಿ ಸಂದೇಹಗಳಿಲ್ಲ ಎಂಬ ಮಾತುಗಳನ್ನು ಮೊನ್ನೆ ನಡೆದ ಕನ್ನಡ ಕಾರ್ಯಕ್ರಮವೊಂದರಲ್ಲಿ 'ಚಂಪಾ' ಹೇಳುತ್ತಿದ್ದರು.

ಪ್ರಾಂತೀಯತೆ ಎಂದರೆ ಪ್ರಾಂತದ ದುರಭಿಮಾನವಲ್ಲ. ಪ್ರಾಂತೀಯತೆಯೇ ಸರ್ವಸ್ವವಲ್ಲವೆಂಬುದು ಕರ್ನಾಟಕರಿಗೆ ಗೊತ್ತಿದೆ. ಅನ್ಯರು ಕಲಿಸುವದು ಬೇಡ. ಕರ್ನಾಟಕರು ಇಂದಿನ ವರೆಗೆ ಎಂದೂ ಅಧಿಕೃತವಾಗಿ ರಾಷ್ಟ್ರೀಯತ್ವಕ್ಕೆ ವಿರುದ್ಧವಾಗಿ ಹೋಗಿಲ್ಲ, ಹೋಗುವುದಿಲ್ಲ. ಪ್ರಾಂತೀಯತೆಯನ್ನು ಜಾತೀಯತೆಗೆ ಹೋಲಿಸುವುದು ತಪ್ಪು.ಕರ್ನಾಟಕಕ್ಕೆ ಭಾರತದಂತೆ ಸ್ವಾಧೀನ ಕರ್ತೃತ್ವವು ಬೇಡ. ಭಾರತಾಧೀನ ಕರ್ತೃತ್ವ ಬೇಕಿದೆ. ಸರ್ವತಂತ್ರತ್ವವು ಬೇಡ. ದತ್ತ ಸ್ವಾತಂತ್ರ್ಯವು ಬೇಕು. ನಾನು ಮೊದಲು ಭಾರತೀಯನು, ಆನಂತರ ಕರ್ನಾಟಕನು ಎಂಬುದು ಸರಿಯಲ್ಲ. ಇವುಗಳಲ್ಲಿ ಮೊದಲು, ಹಿಂದಗಡೆಗಳಿಲ್ಲ. ಎರಡೂ ಭಾವನೆಗಳು ಪರಸ್ಪರ ವಿರುದ್ಧಗಳಲ್ಲ. ವೃಷ್ಟಿತ್ವವೂ ಸಮಷ್ಟಿತ್ವವೂ ಏಕಸಮಯಾವಛೇದದಿಂದ ಬೇಕು. ಎಂಬ ನಿಲುವು ತಳೆದಿದ್ದವರು ಕರ್ನಾಟಕದ ಏಕೀಕರಣದ ರೂವಾರಿ ಆಲೂರು ವೆಂಕಟರಾಯರು



"ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತ್ರು ವೆಂಬುದನ್ನು ಮರೆಯಬಾರದು. ಈ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡುಬರಬಹುದು. ವಿಧಿಯಿಲ್ಲ, ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ" ಎಂದು ರಾಷ್ಟ್ರೀಯತೆಯ ಬಗ್ಗೆ ಪ್ರತಿಪಾದಿಸಿದವರು ಅ.ನ.ಕೃಷ್ಣರಾಯರು

****



ನಿಜವಾದ ರಾಷ್ಟ್ರೀಯತೆಯಂದರೆನೆಂದು ನೆನಪು ಮಾಡುವ ಕುವೆಂಪು-ಚಂಪಾ-ಆಲೂರು-ಅನಕೃ ರವರಂತಹ ಮಾತುಗಳಿಗೆ ಇಂದು ಬೆಲೆಯಿಲ್ಲದೆ ಸೋಗಿನ ರಾಷ್ಟ್ರೀಯ ಪ್ರತಿಪಾದನಾವಾದಿಗಳಿಗೆ ಎಲ್ಲೆಡೆ ಮನ್ನಣೆ ದೊರೆಯುತ್ತಿರುವುದು ವಿಷಾದದ ಸಂಗತಿಯಾಗಿದೆ.

ಚಂದ್ರಶೇಖರನ್ ಕಲ್ಯಾಣ ರಾಮನ್
****

Sunday, November 1, 2009

"ಸಹಿ"ಗನ್ನಡದಿಂದ ಗ್ರಾಹಕ ಸೇವೆಯಲ್ಲಿ ಕನ್ನಡ!

*****



ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸದಿಂದ, ಬ್ಯಾಂಕೊಂದರಲ್ಲಿ (ಕರ್ನಾಟಕದಲ್ಲಿ!) ವ್ಯವಹರಿಸುವಾಗ ಅನುಭವಿಸಿದ ಕಿರಿಕಿರಿಯ ಅನುಭವವನ್ನು "ಕನ್ನಡ, ಕನ್ನಡ ಹಾ ಸಹಿಗನ್ನಡ" ಲೇಖನದ ಮೂಲಕ ('ಹಾಯಿದೋಣಿ' ಅಂಕಣ, ಸಾಪ್ತಾಹಿಕ ಪುರವಣಿ, ಪ್ರಜಾವಾಣಿ, ೧ನೇ ನವಂಬರ್ ೨೦೦೯) ಶ್ರೀಯುತ ಲಕ್ಷ್ಮಣ ಕೊಡಸೆಯವರು ಕನ್ನಡಿಗರ ಹಕ್ಕಾಗಬೇಕಾಗಿರುವ "ಕನ್ನಡದಲ್ಲಿ ಗ್ರಾಹಕ ಸೇವೆ"ಯ ಬಗ್ಗೆ ಕನ್ನಡಿಗರು ತೋರಿರುವ ನಿರ್ಲಕ್ಷ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬ ಘೋಷಣೆಗೆ ಆಕರ್ಷಣೆಗೊಳ್ಳುವುದು, ಕನ್ನಡ ಭಾಷೆಯನ್ನುಳಿಸಲು ಸರ್ಕಾರವೇ ಕ್ರಮ ತೆಗೆದುಕೊಳ್ಳಬೇಕೆಂದುಕೊಳ್ಳುವುದು, ಇತರ ಭಾಷಿಕರಿಗೆ ಹೋಲಿಸಿಕೊಂಡು ನಾವು ನಿರಭಿಮಾನಿಗಳೆಂದುಕೊಳ್ಳುವ ಈ ಯಾವುದು ನಮ್ಮ ಕನ್ನಡ ಭಾಷೆಯ ಉನ್ನತಿಗೆ ಪರಿಹಾರವಲ್ಲ. ಕನ್ನಡಕ್ಕೆ ಶಕ್ತಿ ತುಂಬುವ ಕೆಲಸದಲ್ಲಿ ನಮ್ಮ-ನಿಮ್ಮಂತ ಶ್ರೀ ಸಾಮಾನ್ಯನ ಪಾತ್ರ ಬಹಳ ಹಿರಿದಾದದ್ದು ಎಂಬ ಮಾತುಗಳನ್ನು ಕೊಡಸೆಯವರು ಈ ಮೂಲಕ ತಿಳಿಹೇಳಿದ್ದಾರೆ.

ಸಹಿ ಎಂಬುದು ವ್ಯಕ್ತಿಯೊಬ್ಬನ ವೈಯುಕ್ತಿಕ ಸಂಕೇತ, ತನ್ನ ಅಭಿ ವ್ಯಕ್ತಿಯ ಲಾಂಛನ ಎಂಬುದು ನೂರಕ್ಕೆ ನೂರು ಸತ್ಯ. ಅಂತೆಯೇ ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾಗಿ ಹೊರ ಹೊಮ್ಮಿರುವ ಭಾರತದ, ಕರ್ನಾಟಕ ಪ್ರಾಂತ್ಯದ ಭಾಷೆ ಕನ್ನಡ ಎಂಬುದು ಸಹ ಅಷ್ಟೆ ಸತ್ಯವಾದದ್ದು. ಕರ್ನಾಟಕದಲ್ಲಿ ಕನ್ನಡದ ಬಳಕೆಗೆ, ಕನ್ನಡಿಗರ ಅಭಿವೃದ್ಧಿಗೆ ಸಂವಿಧಾನ ನಮಗೆ ಸವಲತ್ತು ಒದಗಿಸಿದೆ. ಇದರಂತೆ ಕರ್ನಾಟಕದಲ್ಲಿನ ಎಲ್ಲಾ ವ್ಯವಹಾರಸ್ಥರು ಕನ್ನಡ ಅರಿತವರಾಗಿ ತಮ್ಮ ಎಲ್ಲಾ ವ್ಯವಹಾರದಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳಬೇಕಾಗಿರುವುದು ಅವರ ಮೂಲ ಧರ್ಮವಾಗಬೇಕಾದದ್ದು ಸಹಜವಾದದ್ದು. ಮುಖ್ಯವಾಗಿ ನಾವು ಎಲ್ಲರೊಡನೆ ಕನ್ನಡದಲ್ಲಿ ವ್ಯವಹರಿಸುವಂತಾದರೆ ಮಾತ್ರ ನಮ್ಮ ಹಕ್ಕಿಗೂ ಬೆಲೆ ಬರುತ್ತದಲ್ಲವೆ? ಇಲ್ಲಿ ನಾವು ಗಮನಿಸಬೇಕಾಗಿರುವುದು, ನಮ್ಮ ದಿನ ನಿತ್ಯದ ವ್ಯವಹಾರಗಳಲ್ಲಿ ಕನ್ನಡದಲ್ಲೇ ವ್ಯವಹರಿಸುವುದರಿಂದ ಸಣ್ಣ ರೀತಿಯಲ್ಲಿ ನಾವು ಒಂದು ಆಂದೋಲವನ್ನೇ ಹುಟ್ಟು ಹಾಕಬಹುದಾಗಿದೆ.

ಹೌದು ಕರ್ನಾಟಕದಲ್ಲಿ, 'ಕನ್ನಡದಲ್ಲಿ ಗ್ರಾಹಕ ಸೇವೆ' ಕುರಿತಾಗಿ ನಾನು ಇಲ್ಲಿ ಹೇಳ್ತಾ ಇದೀನಿ. ಬ್ಯಾಂಕಿನಲ್ಲಿ ಕನ್ನಡ ಇಲ್ಲ ಅಂದ್ರೆ, ಅವರು ಕನ್ನಡದಲ್ಲಿ ಸೇವೆ ಕೊಡ್ದೆ ಇರೋದು ಒಂದು ಕಾರಣವಾದರೆ, ನಾವು ಕನ್ನಡ ಉಪಯೋಗಿಸದೆ ಇರೋದು ಇನ್ನೊಂದು ಕಾರಣ. ಅದಕ್ಕಗಿ ನಾವು ಹೀಗೆ ಮಾಡಬಹುದಲ್ಲವೇ.

೧] ಕೇವಲ ಸಹಿ ಮಾತ್ರವಲ್ಲ! ಇನ್ನು ಮುಂದೆ ನಾವು ನಮ್ಮ ಬ್ಯಾಂಕು ಚೆಕ್ಕುಗಳನ್ನು ಕನ್ನಡದಲ್ಲೇ ಬರೆಯೋಣ
೨] ಬ್ಯಾಂಕಿನ ಎಟಿಎಂ ಉಪಯೋಗಿಸುವಾಗ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳೋಣ
೩] ಬ್ಯಾಂಕಿನೊಡನೆ ಯಾವುದೇ ವ್ಯವಹಾರವಿರಲಿ ಪತ್ರ ವ್ಯವಹಾರ ಕನ್ನಡದಲ್ಲೇ ಮಾಡೋಣ
೪] ಬ್ಯಾಂಕಿನ ಕರೆ ಕೇಂದ್ರಗಳಿಂದ ಕರೆ ಬಂದಾಗ ಅಥವ ನಾವು ಅವರಿಗೆ ಕರೆ ಮಾಡಿದಾಗ ಕನ್ನಡದಲ್ಲಿ ಮಾತನಾಡಲು ಆಗ್ರಹಿಸೋಣ
೫] ಬ್ಯಾಂಕಿನಲ್ಲಿ ಖಾತೆ ತೆರೆಯುವಾಗ, ಬ್ಯಾಂಕಿಗೆ ಹಣ ತುಂಬುವಾಗ, ಹಣ ತೆಗೆಯುವಾಗ ಕನ್ನಡದ ಅರ್ಜಿ ನಮೂನೆಗಳಿಗೆ ಆಗ್ರಹಿಸೋಣ. ಅವರು ಕೊಡುವ ನಮೂನೆಗಳಲ್ಲಿ ಕನ್ನಡದಲ್ಲೇ ಎಲ್ಲ ವಿವರಗಳನ್ನು ನಮೂದಿಸೋಣ.
ಇದು ಬ್ಯಾಂಕಿನವರಿಗೆ ಕನ್ನಡದ ಅನಿವಾರ್ಯತೆಯನ್ನು ಹುಟ್ಟು ಹಾಕುತ್ತದೆ. ಕನ್ನಡಿಗರಿಗೆ ಕೆಲಸ ದೊರೆಯುತ್ತದೆ. ಕನ್ನಡ ಬರದ ಕೆಲಸಗಾರರು ಕನ್ನಡ ಕಲಿಯಬೇಕಾದ ಅನಿವಾರ್ಯತೆಯನ್ನು ಉಂಟು ಮಾಡುತ್ತದೆ.

ಇದು ಕೇವಲ ಬ್ಯಾಂಕ್ ಗೆ ಮಾತ್ರ ಸೀಮಿತವಲ್ಲ. ನಾವು ಗ್ರಾಹಕ ಸೇವೆ ಪಡೆಯೋ ಎಲ್ಲೆಡೆ (ರೈಲು, ಬಸ್ಸು ಟಿಕೆಟ್ಟು ಖರೀದಿಸುವಾಗ, ವಿಮಾ ಕಂಪನಿಗಳೊಡನೆ ವ್ಯವಹರಿಸುವಾಗ, ಮೊಬೈಲ್ ಕಂಪನಿಗಳ ಕರೆ ಕೇಂದ್ರದವರೊಡನೆ ಮಾತನಾಡುವಾಗ, ಅಂಗಡಿ-ಮುಂಗಟ್ಟು-ಮಾಲ್ ಗಳಲ್ಲಿ ವ್ಯವಹರಿಸುವಾಗ) ಕನ್ನಡವನ್ನು ಈ ರೀತಿ ನಾವು ಉಪಯೋಗಿಸುವ ಹಕ್ಕು ನಮಗಿದೆ.


ಇದು ಅಭಿಮಾನ ಮತ್ತು ನಮ್ಮ ಅಂತಂಗದ ಧ್ವನಿಯಾಗಿ ಹೊರಹೊಮ್ಮುವಂತಾಗಬೇಕು ಎಂಬುದು ಕೊಡಸೆಯವರ ಅಭಿಲಾಷೆ.

ಎಲ್ಲರಿಗೂ "ಕರ್ನಾಟಕ ರಾಜ್ಯೋತ್ಸವ" ಶುಭಾಶಯಗಳು.

ಚಂದ್ರಶೇಖರನ್ ಕಲ್ಯಾಣ ರಾಮನ್
ಹಳದಿ-ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

*****

Wednesday, October 28, 2009

ಯಾರು "ಗ್ರಾಹಕ ಕೈಪಿಡಿ" ಕನ್ನಡದಲ್ಲಿ ಮಾಡಿಸಿದ್ದಾರೆ?

***

ಕೆಲ ದಿನಗಳ ಹಿಂದೆ ಬಜಾಜ್ ಸಂಸ್ಥೆಯ "ಇಸ್ತ್ರಿ ಪೆಟ್ಟಿಗೆ ಖರೀದಿಸಿದೆ". ಮನೆಗೆ ಬಂದು ಡಬ್ಬ ತೆರೆದಾಗ ಅದರಲ್ಲಿ ಕೈಪಿಡಿಯೊಂದಿತ್ತು. ತೆರೆದು ನೋಡಿದಾಗ ಬೇಜಾರಾಯ್ತು. ಮಾಹಿತಿ ಕನ್ನಡೇತರ ಭಾಷೆಯಲ್ಲಿದೆ.
ಹಾಗೆಯೆ ಕೈಪಿಡಿ ಗಮನಿಸಿದಾಗ, ಬಜಾಜ್ ಸಂಸ್ಥೆಯ ಬೆಂಗಳೂರು ಶಾಖೆಯ ಮಿಂಚೆ ವಿಳಾಸ ಕಂಡು ಬಂತು.
ಮೊನ್ನೆ ೨೬ ನೆ ತಾರೀಖು ಅವರಿಗೆ ಈ ರೀತಿ ಮಿಂಚಿಸಿದೆ.
*****
ನಾನು 18/10/2009 ರಂದು ಬೆಂಗಳೂರಿನ ಪೈ ಇಂಟರ್ ನ್ಯಾಷನಲ್ ಅಂಗಡಿಯಲ್ಲಿ ಬಜಾಜ್ಎಲೆಕ್ಟ್ರಿಕಲ್ಸ್ ತಯಾರಿಕೆಯ ಪಾಪ್ಯುಲರ್ "ಇಸ್ತ್ರಿ ಪೆಟ್ಟಿಗೆ" ಖರೀದಿಸಿದೆ. ವಿಪರ್ಯಾಸವೆಂದರೆ ಇಸ್ತ್ರಿ ಪೆಟ್ಟಿಗೆಯ ಜತೆಗೆ ವಿತರಿಸಿರುವ "ಉಪಯೋಗ ಮತ್ತುಸುರಕ್ಷತೆ" ಯ ಕೈಪಿಡಿ ಕನ್ನಡೇತರ ಭಾಷೆಯಲ್ಲಿದೆ. (ಲಗತ್ತಿಸಿರುವ ಚಿತ್ರ ನೋಡಿ)

ಬೆಂಗಳೂರು ಮತ್ತು ಕರ್ನಾಟಕ ದೇಶದ ನಾಡ ಭಾಷೆ ಕನ್ನಡ. ಇಲ್ಲಿ ನಿಮ್ಮ ಸಂಸ್ಥೆಯ ಮೂಲಕತಯಾರಿಸಿ ವಿತರಿಸುವ ಎಲ್ಲಾ ಗ್ರಾಹಕ ಉಪಯೋಗಿ ವಸ್ತುಗಳ ಬಗೆಗಿನ ಮಾಹಿತಿ, ವಿವರಣೆ,ಜಾಹೀರಾತು ಆಧ್ಯತೆಯಾಗಿ ಕನ್ನಡ ಭಾಷೆಯಲ್ಲಿರುವಂತೆ ಗಮನಿಸಬೇಕಾದ್ದು ನಿಮ್ಮ ಮೂಲಕರ್ತವ್ಯ.

ಕೂಡಲೇ ಕೆಳಗಿನ ವಿಳಾಸಕ್ಕೆ ಇಸ್ತ್ರಿ ಪೆಟ್ಟಿಗೆ "ಉಪಯೋಗ ಮತ್ತು ಸುರಕ್ಷೆ" ಕನ್ನಡಕೈಪಿಡಿ ಕಳುಹಿಸಿಕೊಡಬೇಕಾಗಿ ವಿನಂತಿ.
*****
ನಂತರ ೦೮೦-೪೨೬೬೨೨೩೧ ದೂರವಾಣಿಯಿಂದ ನನಗೆ ಕರೆಯೊಂದು ಬಂತು. ಕರೆ ಮಾಡಿದಾತ "ನನ್ನ ಹೆಸರು ವಿಜಯ್, ಬಜಾಜ್ ಬೆಂಗಳೂರು ಅಫೀಸ್ ನಿಂದ ಕರೆ ಮಾಡ್ತಿದ್ದೀನಿ" ಎಂದು ಪರಿಚಯಿಸಿಕೊಂಡು, ನನ್ನ ಮಿಂಚೆ ಕುರಿತು ಸಮಜಾಯಿಷಿ ಕೊಡಲು ಪ್ರಯತ್ನಿಸಿದರು. ಮಾತನಾಡುತ್ತ ವಿಜಯ್ ಹೇಳಿದ್ದು "ಕನ್ನಡದಲ್ಲಿ ಕೈಪಿಡಿ ಮಾಡಿಸಿಲ್ಲ, ಪೂರ್ತಿ ಭಾರತ! ಗಮನದಿಲ್ಲಿಟ್ಟುಕೊಂಡು ಎರಡು ಭಾಷೆಯಲ್ಲಿ ಕೈಪಿಡಿ ಮಾಡಿದ್ದೇವೆ......

ನಾನು "ನಮ್ಮ ಮನೆಯಲ್ಲಿ ಬಜಾಜ್ ಸಂಸ್ಥೆ ಇಸ್ತ್ರಿ ಪೆಟ್ಟಿಗೆಯ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲು ನಮಗೆ ಅವಶ್ಯವಿರುವ ಭಾಷೆ ಕನ್ನಡ" ಕನ್ನಡೇತರ ಭಾಷೆಯ ಕೈಪಿಡಿ ನಮಗೆ ಉಪಯೋಗವಿಲ್ಲ. ಇಡೀ ಭಾರತ! ಗಮನದಲ್ಲಿರಿಸಿ ನೀವು ಕೈಪಿಡಿ ತಯಾರಿಸಿರುವುದಾದರೆ ೨೦ಕ್ಕೂ ಹೆಚ್ಚಿನ ಭಾಷೆ ನಿಮ್ಮ ಕೈಪಿಡಿಯಲ್ಲಿ ಅಳವಡಿಸಬೇಕಿತ್ತು... ಹೀಗೆ ಕರ್ನಾಟಕದಲ್ಲಿ ಅವರ ವ್ಯವಹಾರದಲ್ಲಿ ಕನ್ನಡದ ಅವಶ್ಯಕತೆ ಏಕೀರಬೇಕು. ಅಂತೆಯೆ ತಮಿಳುನಾಡಿನಲ್ಲಿ ಬಜಾಜ್ ತಮಿಳನ್ನೇ ಏಕೆ ಉಪಯೋಗಿಸಬೇಕು ಎಂದು ಮನವರಿಕೆ ಮಾಡಿಸಲು ಪ್ರಯತ್ನಿಸಿದೆ! ಕೊನೆಗೆ ವಿಜಯ್, ಈ ಕುರಿತಾಗಿ ಬಜಾಜ್ ಮುಖ್ಯ ಕಚೇರಿಗೆ ತಿಳಿಸಿ ಕನ್ನಡದಲ್ಲಿ ಕೈಪಿಡಿ ಮಾಡಿಸಿ ಕೊಡುವಬಗ್ಗೆ ಭರವಸೆ ನೀಡಿದ್ದಾರೆ!

ವಿಜಯ್ ಕೊನೆಯದಾಗಿ ಒಂದು ಪ್ರಶ್ನೆ ನನ್ನನ್ನೇ ಕೇಳಿದರು. ಈ ರೀತಿ ವಸ್ತುಗಳನ್ನು ತಯಾರಿಸಿರುವವರು ಯಾರು ಕೈಪಿಡಿ ಕನ್ನಡದಲ್ಲಿ ಮಾಡಿಸಿದ್ದಾರೆ ಎಂದು? "ಯಾರು ಮಾಡಿಸಿದ್ದಾರೆ ಎಂಬ ಮಾಹಿತಿ ನನ್ನಲ್ಲಿಲ್ಲ, ಯಾರ್ಯಾರು ಮಾಡಿಸಿಲ್ಲ ಎಂದು ನನಗೆ ಕಂಡು ಬಂದಾಗ ಕನ್ನಡದಲ್ಲಿ ಮಾಡಿಸಿ ಎಂದು ನಾನು ಕೇಳುತ್ತೇನೆ. ನೀವು ಮಾಡಿಸಿಲ್ಲ ಈಗ ನೀವು ಮಾಡಿಕೊಡಿ ಎಂದೆ.

ಇದನ್ನೂ ಓದುತ್ತಿರುವವರೆಲ್ಲಾ ಇನ್ನು ಮುಂದೆ ತಾವು ಖರೀದಿಸುವ ಯಾವುದೇ ವಸ್ತು ಇರಲಿ (ಟಾಟಾ ಸ್ಕೈ, ಸಾಮ್ಸಂಗ್ ಟೀವಿ, ಓನಿಡಾ ಒಗೆಯೋ ಯಂತ್ರ, ಫಿಲಿಪ್ಸ್ ರೇಡಿಯೋ...............ಹೀಗೆ) ಕನ್ನಡದಲ್ಲಿ ಇದರ ಮಾಹಿತಿ, ವಿವರಣೆ, ಕೈಪಿಡಿ ವಿತರಿಸಿ ಎಂದು ಕೇಳಲೇ ಬೇಕಲ್ಲವೆ?

ಕೆಳಗಿನ ಚಿತ್ರ ನೋಡಿ.

ಯೂರೋಪ್ ನಲ್ಲಿ ತಯಾರಾದ ಜೀವ ಕವಚವೊಂದರ ಕುರಿತಾದ ವಿವರಣೆ. ಇಡೀ ಪ್ರಪಂಚಕ್ಕೆ ತಿಳಿಯತ್ತಲ್ಲ ಅಂತ ಅವರು ಒಂದು ಭಾಷೆಯಲ್ಲಿ ಅದರ ವಿವರಣೆ ನೀಡಿ ಸುಮ್ಮನಿರಬಹುದಿತ್ತು. ಆದರೆ ಜೀವದ ಬೆಲೆ ಅವರಿಗೆ ಏನೆಂದು ಗೊತ್ತು ಮತ್ತು ವಸ್ತುವಿನ ಬಳಕೆ ಸಮರ್ಪಕವಾಗಿ ಆಗಬೇಕೆಂಬ ಕಾಳಜಿ ಅವರಿಗಿದ್ದುದರಂದ ಅವರು ತಮ್ಮ ಉತ್ಪನ್ನ ವಿತರಿಸುವೆಡೆಯಲ್ಲಿ ಬಳಕೆಯಲ್ಲಿರುವ ಭಾಷೆಗಳಲ್ಲಿ ವಿವರಣೆ ನೀಡಿದ್ದಾರೆ.

ತಮ್ಮ ಉತ್ಪನ್ನಗಳ ಹೆಚ್ಚಿನ ಬಿಕರಿಗೆ ಇದೊಂದು ದಾರಿ ಸಹ ಅಂತ ಇವರು ತಿಳಿದುಕೊಂಡಿದ್ದಾರೆ. ನಮ್ಮ ಭಾರತದ ಸಂಸ್ಥೆಗಳು ಇಲ್ಲದ್ದನ್ನು ನಮ್ಮ ಮೇಲೆ ಹೇರಲು ಮುಂದಾಗಿದ್ದಾರೆ.

ಚಂದ್ರಶೇಖರನ್ ಕಲ್ಯಾಣ ರಾಮನ್,
ಹಳದಿ - ಕೆಂಪಿನ ಚಿಂತನೆ ಕಪ್ಪು ಬಿಳುಪಿನಲ್ಲಿ

***

Thursday, October 15, 2009

ಇತರ ಭಾಷಿಕರಿಗೆ ದೀಪಾವಳಿ ಶುಭಾಶಯ, ಕನ್ನಡಿಗರಿಗೆ ಮಾತ್ರ "ದಿವಾಳಿ" ಯ ಶಾಪ!

*****
ಇವತ್ತಿನ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ಭಾರತೀಯರೆಲ್ಲರಿಗೂ ದೀಪಾವಳಿ ಶುಭಾಶಯ ತಿಳಿಸಿದೆ. ಲಗತ್ತಿಸಿರುವ ಚಿತ್ರ ಗಮನಿಸಿ.


ಲಕ್ಷ್ಮಿಯ ಬಲಗೈ ಯಿಂದ ಭಾರತೀಯ ಭಾಷೆಗಳಲ್ಲಿ ಶುಭಾಶಯದ ಹೊಳೆ ಹರಿದಿದೆ. ತಮಿಳಿನಲ್ಲಿ ದೀಪಾವಳಿ ವಾಳ್ತುಕ್ಕಳ್, ತೆಲುಗಿನಲ್ಲಿ ಹ್ಯಾಪಿ ದೀಪಾವಳಿ, ಗುಜರಾತಿ, ಬಂಗಾಳಿ, ಹಿಂದಿ ಹೀಗೆ ಇನ್ನಿತರ ಭಾಷೆಗಳಲ್ಲಿ ಶುಭ ದೀಪಾವಳಿ ಎಂದು ಶುಭಾಶಯ ತಿಳಿಸುತ್ತಿದೆ.

ಕನ್ನಡಿಗರಿಗೆ ಕೊಟ್ಟಿರುವ ಶಾಪ ಏನು ಗೊತ್ತ! ಲಕ್ಷ್ಮಿಯ ಎಡಕ್ಕಿರುವ ಆನೆ ಸೊಂಡಿಲ ಪಕ್ಕ ನೋಡಿ. "ಹಾ ಪಿ ದಿವಾಳಿ".
ಹ್ಯಾಪಿಗೇನೋ ಅರ್ಥ ಗೊತ್ತಿರುವುದೆ (ಆ 'ಹ್ಯಾಪಿ' ನೂ ಸಹ ಇವರು ಸರಿಯಾಗಿ ನಮೂದಿಸಿಲ್ಲ. 'ಹಾ' ಕೆಳಗಿನ 'ಯ' ಕಾರ ಎಗರಿ ಹೋಗಿದೆ).

"ದಿವಾಳಿ" ಅಂದ್ರೆ ಏನು ಅಂತ ನಿಮಗೆ ಗೊತ್ತಿರಬಹುದು! ಒಮ್ಮೆ ಪದಕೋಶದ ಪುಟ ಸಹ ನೋಡಿ.


ಈ ಜಾಹೀರಾತಿನಿಂದ ಸಾಬೀತಾಗುತ್ತದೆ. "ದೀಪಾವಳಿ" ನ "ದೀಪಾವಳಿ" ಅಂತಾನೆ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲಿ ಹೇಳೋದು ಅಂತ. ಕನ್ನಡದಲ್ಲೂ ನಾವು "ದೀಪಾವಳಿ" ಅಂತಾನೆ ಹೇಳ್ತಿದ್ದಿದ್ದು. ಈ "ದಿವಾಳಿ" ಹಾವಳಿ ಕನ್ನಡಿಗರ ಮೇಲೆ ಹೇಗೆ ಯಾವಾಗ ಎಲ್ಲಿಂದ ಶುರು ಆಯ್ತು ಅನ್ನುವುದೆ ಪ್ರಶ್ನೆ?

ರಾಜ್ಯಾದ್ಯಂತ ನೆರೆ ಉಂಟಾಗಿ ಬೀದಿಗೆ ಬಿದ್ದಿರುವ ಕನ್ನಡಿಗರಿಗೆ ಈ ರೀತಿಯಾಗಿ "ದಿವಾಳಿ" ಪಟ್ಟ ಕಟ್ಟುತ್ತಿದ್ದಾರೆಯೆ?
ಖಂಡಿತಾ ನಾವು ದಿವಾಳಿಯಾಗುವುದು ಬೇಡ. ದೀಪವನ್ನು ಬೆಳಗಿಸಿ ದೀಪಾವಳಿ ಆಚರಿಸೋಣ. ಸಮಸ್ತ ಕನ್ನಡಿಗರ ಬಾಳಿನಲ್ಲಿ ಈ ದೀಪಾವಳಿ ಹೊಸ ಬೆಳಕನ್ನು ಮೂಡಿಸುವಂತಾಗಲಿ...
**
ಚಂದ್ರಶೇಖರನ್ ಕಲ್ಯಾಣ ರಾಮನ್
*****

Sunday, October 4, 2009

ದಿವಾಳಿಯಾಗು ಅನ್ನಿಸಿಕೊಳ್ಳಬೇಡಿ! "ದೀಪಾವಳಿಗೆ ಶುಭಾಶಯ" ತಿಳಿಸಲು ಹೇಳಿ......

*****
ಆಗಲೆ " ದಿವಾಳಿ " (DIVALI, DEEWALI, DEEVAALI) ಆಗೆಂದು ಒಂದೊಂದಾಗಿ ಹಾರೈಕೆಗಳು ಬರುತ್ತಿವೆ. ಟಿವಿಗಳಲ್ಲಿ, ಪತ್ರಿಕೆಗಳಲ್ಲಿ (ಕನ್ನಡದವು ಸೇರಿದಂತೆ) ಮಾರಾಟಗಾರರು ತಮ್ಮ ಅಂಗಡಿ, ಮಳಿಗೆಗಳಲ್ಲಿ ಬಂದು ವಸ್ತುಗಳನ್ನು ಕೊಂಡು 'ದಿವಾಳಿ'ಯಾಗಲು ಜಾಹೀರಾತು (ಈ ವರ್ಷದ ನಿಮ್ಮ "ದಿವಾಳಿ" ಆಚರಿಸಲು ನಮ್ಮ ಅಂಗಡಿಯಲ್ಲಿ ಸಾಮಾನು ಖರೀದಿಸಿ ಎನ್ನುತ್ತ) ಮೂಲಕ ಕರೆ ನೀಡುತ್ತಿದ್ದಾರೆ.

ಹೌದು ನಾವು ದೀಪ ಬೆಳಗಿಸಿ ನಮ್ಮೂರಲ್ಲಿ ಆಚರಿಸುವ ದೀಪಾವಳಿಯ ಹೆಸರು ನಿಧಾನವಾಗಿ ಬದಲಾಗುತ್ತಿದೆ. ಎಲ್ಲೆಡೆ ಅದು ದಿವಾಲಿ, ದಿವಾಳಿ ಯಾಗಿ ಭಿತ್ತರವಾಗುತ್ತಿದೆ. ಭಾರತದ ಇತರೆಡೆಗಳಲ್ಲಿ ಮುಖ್ಯವಾಗಿ ಉತ್ತರಭಾರತದಲ್ಲಿ ದೀಪಾವಳಿಗೆ ದಿವಾಲಿ ಎಂದು ಕರೆಯುವ ಪದ್ಧತಿ ಇರಬಹುದು! ಅಥವ ಅಲ್ಲಿಯೂ ದೀಪಾವಳಿ ಇದ್ದದ್ದು ದಿವಾಳಿ ಎಂದು ಬದಲಾಗಿದೆಯ? ಗೊತ್ತಿಲ್ಲ! ಇನ್ಯಾರೋ ಹಾಗೆ ಕರೆಯಲು ಹೊರಟಿದ್ದಾರೆ, ಅದು ಸರಿಯ? ತಪ್ಪ ? ಹಾಗೆ ಕರೆಯುತ್ತಿರುವ ಪದದ ಅರ್ಥ ಏನಾಗಿರಬಹುದು ಅಂತ ಯೋಚಿಚದೆ, ನಾವು ಸಹ ಇತರರಂತೆ ಹಾಗೆಯೆ ಶುಭಾಶಯ ವಿನಿಮಯ ಮಾಡಿಕೊಳ್ಳಲು ಮುಂದಾಗಿದ್ದೇವೆ.

ಇದರಂತೆಯೆ ನಮ್ಮ ಸಂಕ್ರಾಂತಿ ಸಹ. ಸಂಕ್ರಾಂತಿ ಅಂದ್ರೆ ಇವತ್ತು ಅನೇಕರು ಅದೇನೆಂದು ಕೇಳುವ ಪರಿಸ್ಥಿತಿ ಇದೆ. ಅದು ಪೊಂಗಲ್ ಆಗಿ ಹೆಚ್ಚಾಗಿ ಪ್ರಚಲಿತವಾಗುತ್ತಿದೆ. ನಮ್ಮ 'ದಸರಾ' ಸಹ 'ದುಶಿರಾ' ಅಂತ ಕಣ್ಣ ಮುಂದೆಯೇ ಬದಲಾವಣೆ ಆಗುತ್ತಿದೆ. ನಿಧಾನವಾಗಿ-ಒಂದೊಂದಾಗಿ ನಮ್ಮ ತನವನ್ನು, ನಮ್ಮ ಆಚರಣೆಯನ್ನು ಇತರರಿಗೆ ಬಿಟ್ಟುಕೊಟ್ಟು , ತಾನೂ ಅವರ ಜತೆ ಸೇರಿ ಕುಣಿದು-ತಿಪ್ಪರಲಾಗ ಹಾಕಿ ಶ್ರೀಮಂತವಾದ ನಮ್ಮ ಸಂಸ್ಕೃತಿಯನ್ನು ನಾವೆ ಬರಿದು ಮಾಡಿಕೊಂಡು ಮೂಲೆಗುಂಪಾಗುತ್ತಿದ್ದೇವೆ ಅನ್ನಿಸುತ್ತಿಲ್ಲವೆ? ಈ ಅನಿಸಿಕೆಯನ್ನು ಸಮರ್ಥಿಸುವವರಿಗಿಂತ ಯಾಕಪ್ಪ ಹೀಗೆ ಸಂಕುಚಿತವಾಗಿ ಬರೆದಿದ್ದೀಯ ಅಂತ ಹೇಳುವವರೆ ಬಹುಷ: ಹೆಚ್ಚಾಗಿ ಪ್ರತಿಕ್ರಿಯಿಸಬಹುದೇನೊ. ನಾವು ಎಲ್ಲರಲ್ಲೂ-ಎಲ್ಲದರಲ್ಲೂ ಬೆರೆತು (ನಮ್ಮದು ಮಾತ್ರ ಪಕ್ಕಕ್ಕಿಟ್ಟು) ಭಾವಕ್ಯತೆ ಪ್ರದರ್ಶಿಸುವುದರಲ್ಲಿ ಮೊದಲಿಗರಲ್ಲವೇ?

ಕಳೆದ ೨೭ ವರ್ಷಗಳಿಂದ ಬೆಂಗಳೂರಿನ ಅಚ್ಚ ಕನ್ನಡಿಗರೆ ಹೆಚ್ಚಾಗಿ ನೆಲಸಿರುವ ಪ್ರದೇಶವೊಂದರಲ್ಲಿ ನಮ್ಮನೆಯಿರೋದು. ನಾನು ಅಲ್ಲಿ ನಿರಂತರವಾಗಿ ನೆಲಸಿರದಿದ್ದರೂ ಅಲ್ಲಿನ ಆಗುಹೋಗುಗಳನ್ನು ಗಮನಿಸಿದ್ದೇನೆ - ಕಿವಿಗೊಟ್ಟಿದ್ದೇನೆ. ಇಷ್ಟು ವರ್ಷಗಳಲ್ಲಿ ಇಲ್ಲಿನ ಅಕ್ಕ-ಪಕ್ಕ , ಸುತ್ತ -ಮುತ್ತ ಒಂದು ಹನುಮಂತನ, ಒಂದು ಗಣೇಷ ಅಥವ ಒಂದು ಅಣ್ಣಮ್ಮ ದೇವಸ್ಥಾನ ಪ್ರಾರಂಭವಾದದ್ದು ನನ್ನ ಕಣ್ಣಿಗೆ ಬಿದ್ದಿಲ್ಲ. ಎಲ್ಲರಿಗೂ ಎದ್ದು ಕಾಣುವಂತೆ ಇಲ್ಲಿ ಮೊದಲಿಗೆ ಹುಟ್ಟುಕೊಂಡಿದ್ದು ಅಯ್ಯಪ್ಪ ದೇವಸ್ಥಾನ, ನಂತರ ಪಕ್ಕದಲ್ಲಿ ಓಂ ಶಕ್ತಿ ದೇವಸ್ಥಾನ. ನಾನು ಕಂಡ ಹಾಗೆ ನಮ್ಮ ಬಡಾವಣೆಯಲ್ಲಿ ದಸರ ಸಮಯದಲ್ಲಿ ಮನೆಗಳಲ್ಲಿ ಗೊಂಬೆಗಳನ್ನು ಇಟ್ಟು ಹಬ್ಬ ಆಚರಿಸಿಕೊಳ್ಳುವುದು ಇವರೆಗೂ ನಡೆದು ಬಂದಿರುವ ಪದ್ಧತಿ. ಆದರೆ ಈ ವರ್ಷ ಹೊಸ ಪಿಡುಗೊಂದು ಈ ಪ್ರದೇಶದಲ್ಲಿ ಹೆಡೆಯೊಡೆದಿತ್ತು.



ಗರ್ಬಾ (ಗರ್ಭ=ಬಸುರಿ ಅಲ್ಲ) / ಧಾಂಡಿಯ ಎಂಬ ಅರ್ಥವಿಲ್ಲದ ನೃತ್ಯ ದಸರಾದ ಮೊದಲ ದಿನ ಪ್ರಾರಂಭವಾಗಿ ಮುಗಿದದ್ದು ವಿಜಯದಶಮಿಯ ಹಿಂದಿನ ದಿನ. ಇದನ್ನು ಆಯೋಜಿಸಿದ್ದವರಿಗೆ ಕನ್ನಡಿಗರ ಸಹಯೋಗವೂ ಇತ್ತು ಎಂದು ಹೇಳಲೇಬೇಕಾಗಿಲ್ಲ! ಬಹುಷ: ಒಮ್ಮೆಯಾದರೂ ಈ ಪರಿ ಖರ್ಚು ಮಾಡಿ ಇವರು ಇಲ್ಲಿ ನಮ್ಮ ರಾಜ್ಯೋತ್ಸವ ಆಚರಿಸಿದ್ದು ನೆನಪಿಲ್ಲ. ರಾತ್ರಿ ೮ ಘಂಟೆಗೆ ಶುರುವಾಗುತ್ತಿದ್ದ ಇದು ಮುಗಿಯುತ್ತಿದ್ದುದು ರಾತ್ರಿ ೧೨ ರ ನಂತರವೇ. ರಾತ್ರಿ ೮ -೯ ರ ಒಳಗೆ ನಿರ್ಜನವಾಗುವ, ಸರಿಸುಮಾರು ಅದೆ ಸಮಯಕ್ಕೆ ನಿದ್ರೆಗೆ ಜಾರುತ್ತಿದ್ದ, ಬಹುತೇಕ ಹಿರಿಯ ನಾಗರೀಕರೆ ವಾಸಿಸುವ ಸುತ್ತಮುತ್ತಲಿನ ಈ ಪ್ರದೇಶದಲ್ಲಿ ಆ ದಿನಗಳಲ್ಲಿ ಕರ್ಕಷವಾದ ಧ್ವನಿಯೊಂದು ಎಡಬಿಡದೆ ಹಿಂದಿ ಹಾಡುಗಳನ್ನು ಒರಲುತ್ತಿತ್ತು. ಆ ಧ್ವನಿ ಮೈಕಾಸುರನ ಸಹಾಯದಿಂದ ೧೦೦ ಪಟ್ಟು ದ್ವಿಗುಣಗೊಂಡು, ಆರ್ಭಟ ತಡೆಯಲಾಗದೆ ಇಡೀ ಬಡಾವಣೆಯೇ ಬೆಚ್ಚಿ ಬಿದ್ದಿತ್ತು. ವಿಚಾರಿಸಿದಾಗ ತಿಳಿದು ಬಂದದ್ದು ಇವರು ನಡೆಸುತ್ತಿರುವುದು ಗರ್ಭಾ ಅಥವ ದಾಂಡಿಯ ಎಂಬ "ಗುಜರಾತಿಗಳ ಹಬ್ಬ"

ಗರ್ಬಾ ಅಥವ ದಾಂಡಿಯ ದಸರಾ ಸಮಯದಲ್ಲಿ ಗುಜರಾತಿಗಳು (ನಾವು ಮನೆಯಲ್ಲಿ ಗೊಂಬೆ ಪ್ರದರ್ಶನ ಮಾಡುವಂತೆ) ಪ್ರತಿ ರಾತ್ರಿ ತಮ್ಮ ತಮ್ಮ ಬಡಾವಣೆಗಳಲ್ಲಿ ಆಚರಿಸುವ ಒಂದು ನೃತ್ಯದ ಸ್ನೇಹಕೂಟ. ಆ ಸಮಯದಲ್ಲಿ ಅವರ ಮನೆಗಳಲ್ಲಿ ಮಕ್ಕಳು-ದೊಡ್ಡವರು-ಅಜ್ಜ-ಅಜ್ಜಿಯರಾದಿಯಾಗಿ ಎಲ್ಲರೂ ಇದರಲ್ಲಿ ಭಾಗವಹಿಸುತ್ತಿದ್ದರು. ಅಲ್ಲಿ ಅದು ಯಾರಿಗೂ ಕಿರಿಕಿರಿ ಮಾಡುವುದಿಲ್ಲ. ಏಕೆಂದ್ರೆ ಅಲ್ಲಿ ಎಲ್ಲರೂ ಭಾಗವಹಿಸುತ್ತಾರೆ. ಬೆಳಿಗ್ಗೆ ತಮ್ಮ ಕೆಲಸಗಳನ್ನು ಮುಗಿಸಿ, ರಾತ್ರಿ ಊಟ ಮುಗಿಸಿ, ಸಾಮೂಹಿಕವಾಗಿ ಆಚರಿಸಿಕೊಳ್ಳುತ್ತಾರೆ. ಅದು ಅವರ ಸಂಪ್ರದಾಯ ಅವರು ಅಲ್ಲಿ ಆಚರಿಸಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ. ಅದನ್ನು ಇಲ್ಲಿ ಕೇವಲ ಒಬ್ಬಿಬ್ಬರ ಶೋಕಿಗಾಗಿ ಬಡಾವಣೆ-ಬಡಾವಣೆಗೆ ಚಿತ್ರಹಿಂಸೆ ನೀಡಿ ನಿದ್ರೆಗೆಡಿಸಿದ್ದು ಯಾಕೆ ಎಂಬುದೇ ಪ್ರಶ್ನೆ.

ಹೋಗಿ ವಿಚಾರಿಸಿದಾಗ ಯಾರೂ ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ? ಎಲ್ಲರೂ ದೇವಿ 'ತೀರ್ಥ' ವನ್ನು ಸೇವಿಸಿ ಪಾವನವಾಗಿದ್ದರು. ಹಾಡುಗಾರ "ಛೋಲಿ ಕೆ ಪೀಚೆ ಕ್ಯಾ ಹೈ" ಅಂತ ವಿಚಾರಿಸ್ತಿದ್ದ. "ಮೈ ಹೂ ಡಾನ್ ಮೈ ಹೂ ಡಾನ್", "ಮೆ ಕಲನಾಯಕ್ ಹೂ" ಅಂತ ಹೂಂಕರಿಸುತ್ತಿದ್ದ. ಕೊನೆಗೂ ಅದೆಲ್ಲಿದ್ದರೋ! ಪೋಲಿಸಣ್ಣರು ಬಂದ ಮೇಲೆಯೇ (ಯಾರೋ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು) ಇವರ ಆಟಕ್ಕೆ ಕಡಿವಾಣ ಬಿದ್ದದ್ದು. ಈ ಸಲದ ವ್ಯವಹಾರ ಮುಗಿಸಿ ಹೋಗುವ ಮುನ್ನ ಮತ್ತೆ ಮುಂದಿನ ವರ್ಷ ಬರ್ತೀವಿ ಅಂತ ಸಹ ಅವರು ಕಿರುಚಿ ಹೋಗಿದ್ದಾರೆ. ಇಲ್ಲಿಗೆ ಬಂದು ಗಮನಿಸಿ-ಭಾಗವಹಿಸಿ ಹೋದ ಸಾಂಸ್ಕೃತಿಕ ಸಹೃದಯರು! 'ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲ ಅನ್ನುವಂತೆ' ಇಂತಹ 'ಸಾಂಸ್ಕೃತಿಕ' ಹಾವಳಿಗಳನ್ನು ನಿಧಾನವಾಗಿ ಬೆಂಗಳೂರಿನಲ್ಲೆಲ್ಲಾ ಹರಡಿಸುವುದರಲ್ಲಿ ಸಂದೇಹವೇ ಇಲ್ಲ.

ಮತ್ತೊಮ್ಮೆ ಇದು ಮರುಕಳಿಸಲು ವರ್ಷದ ಸಮಯವಿದೆ. ಹೇಗೆ ನಿಯಂತ್ರಿಸಬಹುದು ಯೋಚಿಸಲು ಸಮಯವಿದೆ. ಆದರೆ ದೀಪಾವಳಿ ಮಾತ್ರ ಇನ್ನೇನು ಹತ್ತಿರದಲ್ಲೆ ಇದೆ. ಯಾರಿಗೂ 'ದಿವಾಳಿ' ಯಾಗುವ ಶುಭಾಶಯ! ತಿಳಿಸದಿರೋಣ. "ದೀಪ ಬೆಳಗಿಸಿ ದೀಪಾವಳಿ ಆಚರಿಸಿ" ಎಂದು ಹೇಳೋಣವೆ?

ಚಂದ್ರಶೇಖರನ್ ಕಲ್ಯಾಣ ರಾಮನ್
ಹಳದಿ-ಕೆಂಪಿನ ಚಿಂತನೆ ಕಪ್ಪು-ಬಿಳುಪಿನಲ್ಲಿ!

*****

Saturday, September 26, 2009

ಮಹಾರಾಷ್ಟ್ರದಲ್ಲಿ ಮರಾಠತೆಗೆ ಪ್ರಾಧಾನ್ಯತೆ ದೊರಕಿಸುವುದೇ ನಮ್ಮ ಆಧ್ಯತೆ......

****
ಬರುವ ಅಕ್ಟೋಬರ್ ೧೩ ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಗೆ ಉಮೇದುವಾರರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನೆನ್ನೆಗೆ ಮುಗಿದಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಪ್ರಬಲವಾಗಿ ಬೇರೂರುವ ಲಕ್ಷಣ ತೋರುತ್ತಿರುವ ಪಕ್ಷವೊಂದನ್ನು ಹೊರತು ಪಡಿಸಿ! ಮಿಕ್ಕೆಲ್ಲಾ ಪಕ್ಷಗಳು, ಅದರ ಮುಖಂಡರು, ಅವರ ಸ್ಪರ್ಧಿಗಳಿಂದ ಅಲ್ಲಿನ ಎಲ್ಲಾ ಮತದಾರರನ್ನು (ಸ್ಥಳೀಯ ಮರಾಠರು ಮತ್ತು ಮರಾಠೇತರ ವಲಸಿಗರ) ಯಾವುದೇ ರೀತಿಯಲ್ಲಾದರೂ ಒಲಿಸಿಕೊಂಡು, ಹೇಗಾದರೂ ಮಾಡಿ ತಮ್ಮ ಪಕ್ಷಕ್ಕೆ ಮತ ಪಡೆದುಕೊಂಡು ಅಧಿಕಾರಕ್ಕೆ ಬರುವ ಕಸರತ್ತು ನಡೆದಿದೆ.

ಹೌದು, ರಾಜ್ ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಮ.ನ.ಸೇ.) ಮಿಕ್ಕೆಲ್ಲಾ ಪಕ್ಷಗಳಿಗಿಂತ ಭಿನ್ನವಾಗಿ ಕೇವಲ ಸ್ಥಳೀಯ ಮರಾಠಿಗರು ಮತ್ತು ಅವರ ಮತಗಳ ಮೇಲೆ ಮಾತ್ರ ವಿಶ್ವಾಸವಿರಿಸಿ ಚುನಾವಣ ಕಣಕ್ಕಿಳಿದಿದೆ. ಬಹಳ ದಿನಗಳ ನಂತರ ರಾಜ್ ಠಾಕ್ರೆ, ರಾಷ್ಟ್ರೀಯ! ಇಂಗ್ಲೀಷ್ ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ಭಾಗ ೧ ಮತ್ತು ಭಾಗ ೨(ಸಂದರ್ಶಕ ಇಂಗ್ಲೀಷ್ ನಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಮರಾಠಿಯಲ್ಲೆ ಉತ್ತರಿಸುತ್ತ) ಮಾತನಾಡುತ್ತ ತಮ್ಮ ಪಕ್ಷ ಮತ್ತು ಅದರ ನಿಲವು ಹೇಗೆ ಸ್ಥಳೀಯತೆ ಮತ್ತು ಮರಾಠಿಗರ ಹಿತ ಚಿಂತನೆಗೆ ಮಾತ್ರ ಬದ್ಧವಾಗಿದೆಯೆಂಬುದನ್ನು ಖಡಾಖಂಡಿತವಾಗಿ ಸಮರ್ಥಿಸಿಕೊಂಡರು.

ಭಾಷಾವಾರು ಪ್ರಾಂತ್ಯವಾಗಿ ವಿಂಗಡನೆಯಾಗಿರುವ ಭಾರತದಲ್ಲಿ ಅನೇಕತೆಯಲ್ಲಿ ಏಕತೆ ಉಳಿಯಬೇಕಾದರೆ, ಭಾರತ ನಿಜವಾಗಿ ಸಬಲ-ಸದೃಡವಾಗಬೇಕಾದರೆ ಆಯಾ ಪ್ರಾಂತ್ಯಗಳು ಎಲ್ಲಾ ರೀತಿಯಲ್ಲಿ ಬಲಗೊಳ್ಳಬೇಕು. ಅಂತೆಯೇ ಮಹಾರಾಷ್ಟ್ರದಲ್ಲಿ ಸರ್ವ ರೀತಿಯಲ್ಲಿ ಮರಾಠತೆ ಸ್ಥಾಪಿತವಾಗಿ ಅದು ಮಹಾರಾಷ್ಟ್ರವಾಗಿ ಉಳಿಯುವುದೇ ನಿಜವಾದ ರಾಷ್ಟ್ರೀಯತೆ ಮತ್ತು ಭಾರತವೆಂಬ ಹಲವು ಸ್ವತಂತ್ರ್ಯ ಪ್ರಾಂತ್ಯಗಳನ್ನೊಳಗೊಂಡ ರಾಷ್ಟ್ರವನ್ನು ರಚಿಸಿರುವುದರಲ್ಲಿನ ಸಾರ್ಥಕತೆ ಹಾಗು ಆ ದೊಡ್ಡ ಶಕ್ತಿಯನ್ನು ಮತ್ತಷ್ಟು ಬಲ ಪಡಿಸುವ ಸಾಧನ ಎಂಬ ಸ್ಪಷ್ಟತೆ ಅವರ ಮಾತುಗಳಲ್ಲಿದೆ. ಅವರ ಮಾತುಗಳಲ್ಲಿ ಇತರರಂತೆ ಬೂಟಾಟಿಕೆಯ ರಾಷ್ಟ್ರೀಯತೆಯ ಪ್ರತಿಪಾದನೆಯಿಲ್ಲ. ಆ ರೀತಿ ಬೂಟಾಟಿಕೆ ಪ್ರತಿಪಾದನೆ ಮಾಡಿ ಓಟುಗಳನ್ನು ಪಡೆದು ಚುನಾವಣೆ ಗೆಲ್ಲುವ ಇರಾದೆ ಅವರ ಮಾತುಗಳಲ್ಲಿ ಕಾಣಸಿಗುವುದಿಲ್ಲ. ಮರಾಠಿ ಮತದ ಬಲ ಏನೆಂದು ಸಾಬೀತು ಮಾಡುವ ಛಲ ಅವರಿಂದ ಹೊರಹೊಮ್ಮಿರುವುದನ್ನು ಕಾಣಬಹುದಾಗಿದೆ.

ಒಂದು ರಾಜ್ಯದ-ಪ್ರದೇಶದ, ಆಗು-ಹೋಗುಗಳನ್ನು ನಿರ್ದರಿಸುವವರು ಅಲ್ಲಿಯ ಸ್ಥಳೀಯರಾಗಿರಬೇಕು, ಆದರೆ ಮಹಾರಾಷ್ಟ್ರ ರಾಜ್ಯ ಸರ್ಕಾರ ರಚಿಸಲು ಇಂದು ವಲಸಿಗರ ಮತಗಳು ನಿರ್ಣಾಯಕವಾಗುವ ಹಂತ ತಲುಪಿದೆ. ಕೆಲಸ, ವ್ಯಾಪಾರ ಮತ್ತೊಂದನ್ನು ಅರಸಿ ಬರುವ ವಲಸಿಗರು ಎಂದೆಂದಿಗೂ ವಲಸಿಗರಾಗೆ ಉಳಿಯುತ್ತಿರುವುದು ಸಮಸ್ಯೆ. ಪರಿಹಾರವಾಗಿ ಕೆಲಸ ಅರಸಿ ಮಹಾರಾಷ್ಟ್ರಕ್ಕೆ ಬರುವವರಿಗೆ ರಹದಾರಿ ಪತ್ರ ಕ್ರಮ ಅನುಸರಿಸುವುದರ ಅವಶ್ಯಕತೆಯ ಬಗ್ಗೆ ಸಹ ರಾಜ್ ಮಾತನಾಡಿದ್ದಾರೆ. ಭಾರತದಿಂದ ಮಹಾರಾಷ್ಟ್ರ ಪ್ರತ್ಯೇಕವಾಗಬೇಕೆಂಬ ವಾದ ನಮ್ಮದಲ್ಲ, ಮಹಾರಾಷ್ಟ್ರದಲ್ಲಿ ಮರಾಠಾತತೆಗೆ ಪ್ರಾಧಾನ್ಯತೆ ದೊರಕಿಸುವ, ಮರಾಠಿಗರ ಹಕ್ಕಿನ ಪರವಾದ ಹೋರಾಟ ನಮ್ಮದು ಎಂಬುದು ರಾಜ್ ಮಾತುಗಳಲ್ಲಿ ಕೇಳಿಬರುತ್ತದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಗಣನೀಯವಾಗಿ ಮ.ನ.ಸೇ.ಯನ್ನು ಬೆಂಬಲಿಸಿರುವುದು ಈ ಮರಾಠಿ ಮತಗಳೆ ಎಂದು ರಾಜ್ ವಿಶ್ವಾಸದಿಂದ ಸಮರ್ಥಿಸಿಕೊಳ್ಳುತ್ತ, ನಮ್ಮ "ಮಹಾರಾಷ್ಟ್ರದಲ್ಲಿ ಮರಾಠತೆ" ಯಲ್ಲಿ ನಂಬಿಕೆಯಿಟ್ಟವರು, ವಲಸಿಗರಾಗಿದ್ದವರು ನೈಜ ರಾಷ್ಟ್ರೀಯತೆಯೆಂದರೆನೆಂದು ಅರಿತವರು ನನ್ನ ಪಕ್ಷಕ್ಕೆ ಮತ ಹಾಕುತ್ತಾರೆ ಮತ್ತು ಇಂತಹ ಮತಗಳು ಮಾತ್ರ ನನಗೆ ಸಾಕು ಎಂಬ ಎಂಬ ಅವರ ಆತ್ಮ ವಿಶ್ವಾಸದಿಂದ ಕೂಡಿದ, ಕೇವಲ ಮರಾಠಿ ಬಲದ 'ನವ ಮಹಾರಾಷ್ತ್ರ' ವನ್ನು ಕಟ್ಟುವ ಗಟ್ಟಿತನವನ್ನು ಅವರ ಹೇಳಿಕೆಗಳಿಂದ ಅರಿಯಬಹುದಾಗಿದೆ.
*****
ನಮ್ಮ ಕರ್ನಾಟಕವನ್ನು ಸಹ ಇದುವರೆಗೆ ಆಳಿದವರು, ಈಗ ಆಧಿಕಾರದಲ್ಲಿರುವವರು ನಮ್ಮ ನಾಡಿನ ಹಿತಕಾಯುವ ಕಾಯಕವೇ ಇಲ್ಲಿ ಅಧಿಕಾರ ವಹಿಸಿಕೊಂಡು ಆಡಳಿತ ನಡೆಸುವವರ ಆಧ್ಯ ಕರ್ತವ್ಯ ಎಂದು ಮನಗಾಣದೆ, ಸುಭದ್ರ-ಸಮೃದ್ಧ ಕನ್ನಡ ನಾಡು ಕಟ್ಟುವೆಡೆ ಗಮನ ಹರಿಸದೆ, ಕೇಂದ್ರದದವರ ಅಡಿಯಾಳು, ಆಡಿಸಿಕೊಳ್ಳುವ ಗೊಂಬೆಗಳಾಗಿ, ಪೊಳ್ಳು ರಾಷ್ಟ್ರೀಯತೆಯ ಸೋಗಿನಲ್ಲಿ ಮುಳುಗಿ ಹೋಗಿ, ತಮ್ಮತನ ಮತ್ತು ಬದ್ಧತೆಯನ್ನು ಮರೆತು ಎಲ್ಲಾ ರೀತಿಯಲ್ಲೂ ಕನ್ನಡ-ಕನ್ನಡಿಗ-ಕರ್ನಾಟಕ ದ ಹಿತಚಿಂತನೆಯನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ.

ಕನ್ನಡಿಗರಿಗಾಗಿ, ಕನ್ನಡಕ್ಕೋಸ್ಕರ, ಕನ್ನಡಿಗರದೇ ಆದ ಎಡ-ಬಲ-ಕೇಂದ್ರದ ಹಂಗಿಲ್ಲದ ಕೇವಲ ಕನ್ನಡತ್ವದ ಸಿದ್ದಾಂತ ಪ್ರತಿಪಾದಿಸುವ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇಂದು ಹೆಚ್ಚಾಗಿದೆ. ಸಧ್ಯಕ್ಕೆ ಕನ್ನಡದ ಎಲ್ಲಾ ಸಮಸ್ಯೆಗಳಿಗೆ ಹೆಗಲು ಕೊಟ್ಟು, ಎಲ್ಲೆಡೆ ಜನಾಂದೋಲನ ಮೂಡಿಸುವಲ್ಲಿ ಸಫಲರಾಗಿ, ಕನ್ನಡಿಗರ ಆಶಾಕಿರಣವಾಗಿ ಬೇರೂರುತ್ತಿರುವ ಕ.ರ.ವೇ. ಯಂತಹ ಸಂಘಟನೆಗಳು ಈ ನಾಡಿನ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳಗುವಲ್ಲಿ ಸಹ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳಬೇಕಿದೆ. ಕನ್ನಡ ನಾಡು-ನುಡಿ ಪರವಾದ ಪ್ರಾಮಾಣಿಕ ಯುವ ಸಂಘಟನೆಯನ್ನು ಬೆಂಬಲ ಕೊಟ್ಟು ಬೆಳೆಸುವತ್ತ ಇಡೀ ಕನ್ನಡ ಸಮುದಾಯ ಕಂಕಣ ತೊಡಬೇಕಿದೆ.

****

Friday, September 18, 2009

ಕನ್ನಡಿಗ ಆಸೆಯ ಕಣ್ಣುಗಳಿಂದ ಇನ್ನೂ ಎದುರು ನೋಡುತ್ತಿದ್ದಾನೆ!

***

ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ ಎ ಎಲ್) ತನ್ನ ಬೆಂಗಳೂರು ಸಂಕೀರ್ಣದಲ್ಲಿ ನೂರಕ್ಕೂ ಹೆಚ್ಚಾಗಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತು ನೀಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇವರ ಅಂತರ್ಜಾಲ ತಾಣ (www.hal-india.com)ದಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೨೩.೯.೨೦೦೯ ಎಂದು ತಿಳಿಸಲಾಗಿದೆ. ಯಾವುದೇ ಹೊಸ ಯೋಜನೆಗಳು ಒಂದು ಪ್ರದೇಶದಲ್ಲಿ ಕಾರ್ಯರೂಪಗೊಂಡಾಗ ಅಲ್ಲಿ ದೊರಕಬಹುದಾದಂತ ಕೆಲಸ-ಅವಕಾಶಗಳಿಗಾಗಿ ಸ್ಥಳೀಯ ಉದ್ಯೋಗಾಕಾಂಕ್ಷಿ ಕಾತರ ಮತ್ತು ನೀರೀಕ್ಷೆಗಳಿಂದ ಎದುರು ನೋಡುವುದು ಸಹಜವಾದದ್ದು. ಒಂದು ರಾಜ್ಯದ ಜನರ ಏಳಿಗೆ ಆಗುವುದು, ಅಲ್ಲಿನ ನಿರುದ್ಯೋಗ ಸಮಸ್ಯೆ ಕಡಿಮೆ ಆಗುವುದರಿಂದ ಮತ್ತು ಅಲ್ಲಿನ ಜನ ದುಡಿಮೆ ಮಾಡಲು ತೊಡಗಿದಾಗ. ಇಂಥ ಏಳಿಗೆಗೆ ಸಾಧನವಾಗಿ ಪ್ರತಿ ರಾಜ್ಯಗಳಲ್ಲೂ ಉಂಟಾಗುವ ಹೊಸ ಉದ್ದಿಮೆಗಳಲ್ಲಿ ಮತ್ತು ಹಾಲಿ ಇರುವ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಕೆಲಸದವಕಾಶ ಹೆಚ್ಚಿಸಿಸುವುದು ಅತ್ಯಗತ್ಯವಾದದ್ದು. ಸರ್ಕಾರಗಳು ಉದ್ದಿಮೆಗಾರಿಕೆಗೆ ಉತ್ತೇಜನ ನೀಡುವ ಬಹು ಪ್ರಮುಖ ಕಾರಣ ಜನಗಳಿಗೆ ಉದ್ಯೋಗ ಸೃಷ್ಟಿ ಆಗುವ ಕಾರಣಕ್ಕಾಗಿಯೇ ಮತ್ತು ಅದು ಆಯಾ ರಾಜ್ಯದ ಜನರ ಅನುಕೂಲಗಳಿಗೆ ಪರಿವರ್ತನೆಯಾಗಬೇಕಾದ್ದು ಬಹು ಮುಖ್ಯವಾದದ್ದು. ಇವು ರಾಜ್ಯಗಳನ್ನು ಸುಭದ್ರಗೊಳಿಸಿ ಒಕ್ಕೂಟವನ್ನು ಬಲಪಡಿಸುವ ಬಹುದೊಡ್ಡ ಸಾಧನ.

ಆದರೆ ಹೆಚ್ ಎ ಎಲ್ ತನ್ನ ಬೆಂಗಳೂರು ಸಂಕೀರ್ಣಕ್ಕಾಗಿ ಈಗ ಬಿಡುಗಡೆ ಮಾಡಿರುವ ನೇಮಕಾತಿ ಅರ್ಹತೆಯ ಸೂಚನೆಗಳಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ರಾಜ್ಯದವರಾಗಿರಬೇಕು, ಕಡ್ಡಾಯ ಕನ್ನಡ ಭಾಷೆಯ ಅರಿವಿರಬೇಕು ಎಂದು ಎಲ್ಲೂ ನಮೂದಾಗಿಲ್ಲದಿರುವುದನ್ನು ಕಾಣಬಹುದಾಗಿದೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಹೆಚ್ ಎ ಎಲ್ ಸಂಸ್ಥೆಯ ಬೆಂಗಳೂರಿನ ಇದೇ ಸಂಕೀರ್ಣದಲ್ಲಿ ಆಗಿರುವ ೮೦೦ ಕ್ಕೂ ಹೆಚ್ಚಿನ ಇಂಜಿನಿಯರ್ ಹುದ್ದೆಗಳ ನೇಮಕಾತಿಯಲ್ಲಿ ಕೆಲಸ ಪಡೆದ ಕನ್ನಡಿಗರ ಸಂಖ್ಯೆ ಬೆರಳಣಿಕೆಯಷ್ಟಿರಿವುದು ನಮ್ಮದೇ ಊರುಗಳಲ್ಲಿ ಕನ್ನಡಿಗನಿಗೆ ಉದ್ಯೋಗದಲ್ಲಿ ಆಧ್ಯತೆ ಇಲ್ಲದಿರುವುದು ಕಂಡು ಬರುತ್ತದೆ. ಈ ಸಮಸ್ಯೆ ಕೇವಲ ಕರ್ನಾಟಕ್ಕ ಮಾತ್ರ ಸೀಮಿತವಾಗಿರುವುದನ್ನು ಸಹ ಹೆಚ್ ಎ ಎಲ್ ನ ಅಂತರ್ಜಾಲ ತಾಣವೇ ನಮಗೆ ತಿಳಿಸುತ್ತದೆ! ಇತ್ತೀಚೆಗೆ ಒರಿಸ್ಸಾದ ಕೊರಪುಟ್ ನಲ್ಲಿರುವ ಹೆಚ್ ಎ ಎಲ್ ಘಟಕದಲ್ಲಿನ ಖಾಲಿ ಹುದ್ದೆಗೆ ನಡೆದ ನೇಮಕಾತಿಯಲ್ಲಿ ಬಹುತೇಕ ಸ್ಥಳೀಯರೆ ಆಯ್ಕೆಯಾಗಿರುವುದು ಈ ಮೂಲಕ ಮನವರಿಕೆಯಾಗುತ್ತದೆ.

ಕೆಲದಿನಗಳ ಹಿಂದೆ ಕೇಂದ್ರ ರೈಲ್ವೇ ಸಚಿವರು ಸ್ಥಳೀಯರಿಗೆ ಇಂತಿಷ್ಟು ಹುದ್ದೆಗಳನ್ನು ಮೀಸಲು ನೀಡುವುದನ್ನು ಇಲಾಖೆ ಪರಿಶೀಲಿಸುತ್ತಿದೆ ಎಂದು ತಿಳಿಸಿದ್ದಾರೆ ಮತ್ತು ಲಿಖಿತ ಪರೀಕ್ಷೆಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸುವುದರ ಬಗ್ಗೆ ತೀರ್ಮಾನಿಸಲಾಗುವುದರ ಬಗ್ಗೆ ವರದಿಯಾಗಿದೆ. ಹೆಚ್ ಎ ಎಲ್ ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರದ ಸಾರ್ವಜನಿಕ ಸಂಸ್ಥೆಗಳು ಸಹ ಈ ಮೇಲ್ಪಂಕ್ತಿಯನ್ನು ಅನುಸರಿರಿಸುವುದು ಭಾಷಾವಾರು ಒಕ್ಕೂಟದ ಆಧಾರದಲ್ಲಿ ರಚಿತವಾಗಿರುವ ಭಾರತದ ಸಂವಿಧಾನಾವನ್ನು ಗೌರವಿಸುವ ಜವಾಬ್ದಾರಿಗಳಲ್ಲಿ ಒಂದಾಗಿದೆ. ಕೇಂದ್ರ ಸರ್ಕಾರದ ಆಯಾ ರಾಜ್ಯದ ಘಟಕಗಳಿಗೆ ಬೇಕಾದ ಮಾನವ ಸಂಪನ್ಮೂಲಗಳನ್ನು ಆಯಾ ರಾಜ್ಯಗಳಿಂದಲೇ ಪೂರೈಕೆ ಮಾಡಿಕೊಳ್ಳುವಂತಹ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವುದರಿಂದ ಅನವಶ್ಯಕ ವಲಸೆಯಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ.

ಕರ್ನಾಟಕ ಸರ್ಕಾರ, ಕಾರ್ಮಿಕ ಇಲಾಖೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಳೆದ ಕೆಲವು ವರ್ಷಗಳಲ್ಲಿ ಕರ್ನಾಟಕದಲ್ಲಿನ (ಮುಖ್ಯವಾಗಿ ಬೆಂಗಳೂರು ನಗರದಲ್ಲಿ) ಕೇಂದ್ರ ಸರ್ಕಾರದ ಸಾವರ್ಜನಿಕ ಸಂಸ್ಥಗಳಲ್ಲಿ, ಖಾಸಗೀ ಕ್ಶೇತ್ರಗಳಲ್ಲಿ ನೇಮಕವಾಗಿರುವ ಉದ್ಯೋಗಿಗಳ ಸಂಖ್ಯೆ ಮತ್ತು ಇದರಲ್ಲಿ ಕನ್ನಡಿಗರು ಎಷ್ಟು ಎಂಬ ಮಾಹಿತಿ ಹೆಕ್ಕಿ ತೆಗೆದು ಕನ್ನಡಿಗರ ಮುಂದಿರಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಸ್ಥಳೀಯರಿಗೇ ಉದ್ಯೋಗ ದೊರಕಿಸಿಕೊಡುವ "ಉದ್ಯೋಗ ನೀತಿಯನ್ನು" ಜಾರಿಗೊಳಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ. ಮತ್ತೊಂದು ವಿಷಯವೆಂದರೆ, ಕನ್ನಡ ನಿರುದ್ಯೋಗಿಗಳ ಹಿತ ಕಾಯಲು ಜಾರಿಯಾಗಬೇಕಾಗಿರುವ ಮಹಿಷಿ ವರದಿಯನ್ನು ತುಕ್ಕು ಹಿಡಿಸಿ ಮಲಗಿಸಿಡಲಾಗಿದೆ. ಅದಕ್ಕೆ ಸಾಣಿ ಹಿಡಿದು ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯಿರುವ ನಾಯಕ ಯಾರೆಂದು ಕನ್ನಡಿಗ ಆಸೆಯ ಕಣ್ಣುಗಳಿಂದ ಇನ್ನೂ ಎದುರು ನೋಡುತ್ತಿದ್ದಾನೆ.

******************************************

ಈ ಅಹವಾಲು ಬೆಂಗಳೂರಿನ 'ಹೊಸದಿಗಂತ' ಮತ್ತು 'ಉದಯವಾಣಿ' ಯಲ್ಲಿ ಪ್ರಕಟವಾಗಿದೆ.






***

Thursday, September 17, 2009

ಜಾಗೃತ ಕನ್ನಡಿಗರ ಪತ್ರಗಳು ನಿಮ್ಮ ಗಮನಕ್ಕೆ.

ಪ್ರತಿ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ನಡೆಯುವ ಭಾರತದ ಕೇಂದ್ರ ಸರ್ಕಾರಿ ಕೃಪಾಪೋಷಿತ 'ಹಿಂದಿ ಸಪ್ತಾಹ', 'ಹಿಂದಿ ದಿವಸ್' ಏಕೆ? ಇದು ಎಷ್ಟು ಸರಿ? ಹಿಂದಿ ಕಲಿಸಲು ಬಲವಂತವೇಕೆ? ತ್ರಿಭಾಷಾ ಸೂತ್ರಕ್ಕೆ ಏಕೆ ತಿಲಾಂಜಲಿ? ಎಂದು ಬೆಂಗಳೂರಿನ ಪತ್ರಿಕೆಗಳ ಮೂಲಕ ಪ್ರಶ್ನಿಸಿದ ಕೆಲವು ಜಾಗೃತ ಕನ್ನಡಿಗರ ಪತ್ರಗಳು ನಿಮ್ಮ ಗಮನಕ್ಕೆ.



















ಬಲವಂತದ ಹಿಂದಿ ಹೇರಿಕೆ ನಮಗೆ ಬೇಡ - ಹಿಂದಿ ಭಾಷಿಕರಿಗೆ ಅನ್ವಯಿಸದ ಮೂರು ಭಾಷೆ ಸೂತ್ರ ನಮಗೆ ಮಾತ್ರ ಏಕೆ? ಎಂಬ ಪ್ರಶ್ನೆ-ಧ್ವನಿ ನಿಮ್ಮೆಲ್ಲರಿಂದಲೂ ಹೊರಡಲಿ

***

Wednesday, September 16, 2009

ಹಿಂದಿ ರಾಜ್ಯದವರಿಗಿಲ್ಲದ ಮೂರು ಭಾಷೆ ಸೂತ್ರ ನಮಗೆ ಮಾತ್ರ ಏಕೆ?

ಪ್ರತಿವರ್ಷ ಸೆಪ್ಟಂಬರ್ ೧೪ ರಂದು ಭಾರತದಾದ್ಯಂತ ಕೇಂದ್ರ ಸರ್ಕಾರದ ಬೆಂಬಲದಲ್ಲಿ "ಹಿಂದಿ ದಿವಸ್" ಆಚರಿಸಲಾಗುತ್ತದೆ. ಈ ಹಿಂದಿ ದಿವಸ್ ಬರುವ ಕೆಲದಿನಗಳಿಗೆ ಮೊದಲು, ಹಿಂದಿ ಕಾರ್ಯಾಗರಗಳು, ಪರೀಕ್ಷೆಗಳು, ಸ್ಪರ್ಧೆಗಳು ಮತ್ತು ಮನರಂಜನೆಗಳನ್ನು ಆಯೋಜಿಸುವ ಮೂಲಕ ವ್ಯಾಪಕವಾಗಿ ಎಲ್ಲೆಡೆ ಹಿಂದಿ ಪ್ರಚಾರಗಳನ್ನು ಕೈಗೊಳ್ಳಲಾಗುತ್ತದೆ. ಇದಕ್ಕೆಪೂರಕವಾಗಿ ಎಲ್ಲಾ ಕೇಂದ್ರ ಸರ್ಕಾರದ ಕಚೇರಿಗಳು, ಉದ್ದಿಮೆಗಳು, ನಿಗಮ ಮಂಡಳಿಗಳು,ಬ್ಯಾಂಕುಗಳು, ವಿಮಾ ಕಚೇರಿಗಳು ವರ್ಷವಿಡೀ ಹಿಂದಿ ಪ್ರಚಾರದ ಕಾರ್ಯಗಳಲ್ಲಿ ಕಟ್ಟುನಿಟ್ಟಾಗಿ ತೊಡಗಿಸಿಕೊಳ್ಳಲು ನಾನ ರೀತಿಯ ವ್ಯವಸ್ಥೆಗಳನ್ನು ಆದೇಶಗೊಳಿಸಲಾಗಿದೆ. ಒಂದುಸಣ್ಣ ಉದಾಹರಣೆ ನೀಡಬೇಕೆಂದರೆ, ನಾವು ಈ ಮೇಲಿನ ಯಾವುದೇ ಕಚೇರಿಗಳಿಗೆ ಯಾವುದೇ ದಿನಹೋದಲ್ಲಿ, ಅಲ್ಲಿನ ಒಳಭಾಗದ ಸೂಚನಾ ಫಲಕದಲ್ಲಿ ಅವರು ದಿನಕ್ಕೊಂದು ಹಿಂದಿ ಪದವನ್ನುಪರಚಯಿಸುವ ಪದ್ಧತಿಯನ್ನು ಕಾಣಬಹುದಾಗಿದೆ. ಈ ರೀತಿ ಹಿಂದಿ ಪ್ರಚಾರಕ್ಕಾಗಿ ಸಮಯಮೀಸಲಿಡಲು ಇಲ್ಲಿ ಅವಕಾಶಗಳಿವೆ, ಈ ರೀತಿ ಹಿಂದಿ ಪ್ರಚಾರವನ್ನು ಅಚ್ಚು ಕಟ್ಟಾಗಿಮಾಡಿದವರಿಗೆ ಭಡ್ತಿಯಲ್ಲಿ ಸಹ ಮೀಸಲಿದೆ. ಕೇಂದ್ರ ಸರ್ಕಾರ ಹಲವಾರು ಕೋಟಿ ರೂಗಳನ್ನು ಈಕಾರ್ಯಕ್ಕೆ ಪ್ರತಿ ವರ್ಷ ಮೀಸಲಿಟ್ಟು ವ್ಯಯಿಸುತ್ತದೆ.

ಭಾರತ ಗಣತಂತ್ರದ ಒಕ್ಕೂಟ ವ್ಯವಸ್ಥೆಯ ಇತರ ಅಧಿಕೃತ ಭಾಷೆಗಳಿಗಿರುವ ಸ್ಥಾನಮಾನವೇಹಿಂದಿಗೂ ಸಹ ಇರುವುದು ಎಂಬುದನ್ನು ನಾವೆಲ್ಲರೂ ಗಮನಿಸಬೇಕಿದೆ. ಆದರೆ "ಹಿಂದಿ ಕೇಂದ್ರಸರ್ಕಾರದ ಆಡಳಿತ ಭಾಷೆ, ಅದು ನಮ್ಮೆಲ್ಲರ ರಾಷ್ಟ್ರ ಭಾಷೆ ಮತ್ತು ಹಿಂದಿ ಬಲ್ಲವ ಮಾತ್ರರಾಷ್ಟ್ರ ಪ್ರೇಮಿ" ಎಂಬ ಪೊಳ್ಳು ಪ್ರಚಾರವನ್ನು ಮಾಡುವುದರ ಮೂಲಕ, ಹಿಂದಿಗಿಂತಲೂ ಪ್ರಾಚೀನವೂ, ವೈವಿಧ್ಯಮಯವೂ ಆದ ಭಾರತದ ಇತರ ಭಾಷೆ ಮತ್ತು ಸಂಸ್ಕೃತಿಯನ್ನು ಕಡೆಗಣಿಸಿಕೇವಲ ಹಿಂದಿ ಭಾಷೆಗೆ ಮಾತ್ರ ಪ್ರಾಧಾನ್ಯತೆ ನೀಡಿ, ಬಲವಂತವಾಗಿ ಆ ಭಾಷೆಯದಿನಾಚರಣೆಯನ್ನು ಭಾರತದೆಲ್ಲೆಡೆ ಅಚರಿಸುತ್ತಿರುವುದು ಎಷ್ಟು ಸಮಂಜಸ?

ನಾವು ಇಂಗ್ಲೀಷನ್ನು ಇನ್ನೂ ಅಪ್ಪಿಕೊಂಡು, ಒಪ್ಪಿಕೊಂಡಿರುವುದು, ಗುಲಾಮಗಿರಿಯೆಷ್ಟೋ ಅಷ್ಟೇ ಗುಲಾಮಗಿರಿ ಹಿಂದಿಯೇತರರು ಹಿಂದಿ ಸಾಮ್ರಾಜ್ಯವಾದವನ್ನು ಬೆಳಸಲು, ಪಸರಿಸಲುಬಿಟ್ಟು ಬಿಡುವುದು. ಇಂಗ್ಲೀಷಿಗೆ ಸಧ್ಯಕ್ಕಿರುವ ಜ್ಞಾನ-ವಿಜ್ಞಾನಗಳ ಭಾಷೆ ಎಂಬಸ್ಥಾನವನ್ನು ಕನ್ನಡಿಗರು ಮಾತ್ರ ಏನೂ ನಂಬಿಲ್ಲ, ನಮ್ಮಷ್ಟೇ ಇಂಗ್ಲೀಷ್-ದಾಸರು ಹಿಂದಿಯವರೂ ಸಹ ಆಗಿದ್ದಾರೆ. ನಾವು ಹಿಂದಿ ಕಲಿತು ಉತ್ತರ ಭಾರತಕ್ಕೆ ವಲಸೆ ಹೋಗಿ ಹಿಂದಿ ರಾಜ್ಯಗಳಲ್ಲಿ, ಹಿಂದಿಯವರಾಗುತ್ತೇವೆ ಎನ್ನುವುದು ಸರಿಯಾದುದೆ. ಅದೇ ತಮಿಳುನಾಡು, ಆಂದ್ರಾ, ಓರಿಸ್ಸಾ, ಗುಜರಾತ, ಬಂಗಾಳಗಳಿಗೆ ನಾವು ವಲಸೆ ಹೋಗಿನೆಲಸಬೇಕಾಗಿ ಬಂದಾಗ ಆಯಾ ರಾಜ್ಯಗಳ ಭಾಷೆ ಕಲಿತು, ಅಲ್ಲಿಯ ಸಂಸ್ಸೃತಿಯನ್ನು ಅರಿತು ಆ ಜನರೊಡನೆ ಬೆರೆತು ಮುಖ್ಯವಾಹಿನಿಯಲ್ಲಿ ಮುನ್ನಡೆಯುವುದು ಮಾತ್ರ ಸರಿಯಾದಮಾರ್ಗವಲ್ಲವೇ? ಹಿಂದಿ ಜತೆಗೆ ನಮಗೆ ಇಂಗ್ಲೀಷ್ ಸಾಕು, ಕನ್ನಡ ಭಾಷೆ ನಮಗೆ ಬೇಡ ಎನ್ನುವ ಹಿಂದಿಯವರಿಂದ ಕನ್ನಡಿಗರ ಮೇಲೇಕೆ ಹಿಂದಿ ಹೇರಿಕೆಯಾಗುತ್ತಿದೆ? ಹಿಂದಿಭಾಷಿಕರಿಗೆ ಬೇಡದ ಈ ತ್ರಿಭಾಷ ಸೂತ್ರ ನಮಗೆ ಮಾತ್ರ ಏಕೆ ಎಂದು ನಮ್ಮೆಲ್ಲರ ಮನದಲ್ಲಿ ಸಹಜವಾಗಿ ಮೂಡಬೇಕಾಗಿರುವ ಪ್ರಶ್ನೆಯಿದಲ್ಲವೆ? ಹಿಂದಿ ಭಾಷೆಯ ಅಭಿವೃದ್ಧಿ ಮಾಡಲು,ಅದನ್ನು ಬೆಳೆಸಲು ಹಿಂದಿ ರಾಜ್ಯಗಳಾದ ದೆಹಲಿ, ಮದ್ಯಪ್ರದೇಶ, ಉತ್ತರ ಮತ್ತು ಇತರ ಪ್ರದೇಶಗಳಿವೆ. ಅವುಗಳು ಅಲ್ಲಿ ಬೆಳವಣಿಗೆಯಾಗಬೇಕಾಗಿರುವುದು ಸಹಜವೇ. ಅದರಂತೆ ಕನ್ನಡನಾಡಿನ ಸಂಸ್ಕೃತಿ, ಧರ್ಮ ಕನ್ನಡ ಭಾಷೆಯನ್ನು ಅನುವರ್ತಿಸುವಂತದ್ದು, ಕೇಂದ್ರ ಸರ್ಕಾರ ಹಿಂದಿಯನ್ನು ಪ್ರಚಾರ ಮಾಡುವುದು ಬೆಳೆಸುವುದನ್ನು ಹಿಂದಿ ರಾಜ್ಯಗಳಿಗೆ ಮಾತ್ರಮೀಸಲಿರಿಸಿ ಅದರಂತೆಯೇ ಕರ್ನಾಟಕದಲ್ಲಿ ಕನ್ನಡ, ಕೇರಳದಲ್ಲಿ ಮಲಯಾಳಂ ಗೆ ಪ್ರಚಾರನೀಡಲು ಮಾತ್ರ ಮುಂದಾಗಬೇಕಿದೆ.

ಮನುಷ್ಯ ಆಭಿಮಾನ ಜೀವಿ, ಅವನ ಜೀವನದಲ್ಲಿ ಉಂಟಾಗುವ ಮುಖ್ಯವಾದ ಪ್ರಗತಿ ಅಭಿಮಾನದಿಂದಲೇ ಸಾಧನೆಯಾಗುತ್ತದೆ. ದೇಶಾಭಿಮಾನ, ಆತ್ಮಾಭಿಮಾನ, ಕಲಾಭಿಮಾನ, ಭಾಷಾಭಿಮಾನ ಇವುಗಳೇ ಮನುಷ್ಯನ ಜೀವನದ ಉಸಿರು. ಹೀಗಾಗಿ ನಮ್ಮ ಜೀವನ ಹಾಗು ರಾಷ್ಟ್ರದ ಸಂಸ್ಕೃತಿಯ ಉನ್ನತಿಗೆ ಆಯಾ ರಾಜ್ಯದ ಭಾಷೆಗಳಿಗೆ ಸಮನಾದ ಗೌರವವನ್ನು ಸಲ್ಲಿಸುವುದನ್ನು ಈ ರಾಷ್ಟ್ರದಲ್ಲಿರುವವರೆಲ್ಲರೂ ಮುಖ್ಯವಾಗಿ ಕೇಂದ್ರ ಸರ್ಕಾರದ ಹಿಂದಿ ಪ್ರಚಾರ ಪ್ರಿಯರುಅರಿಯಬೇಕಿದೆ. ಇದೇ ನಾವು ಈ ಒಕ್ಕೂಟ ವ್ಯವಸ್ಥೆಗೆ ತೋರುವ ಅತಿದೊಡ್ಡ ಗೌರವವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ಕೃಪಾಪೋಷಿತ "ಹಿಂದಿದಿವಸ್" ಅನ್ನು ಕನ್ನಡಿಗರೆಲ್ಲರೂ ಸಾಂಕೇತಿಕವಾಗಿ ಪ್ರತಿಭಟಿಸಬೇಕಿದೆ. ನಮ್ಮ ಈ ಹಿಂದಿವಿರೋಧವನ್ನು ನಾವು ನಮ್ಮ ಕನ್ನಡ ಪ್ರೀತಿಗೆ ಸಮೀಕರಿಸಬೇಕಿದೆ. ಜತೆಗೆ ನಮ್ಮ ಭಾಷೆಯಬಗ್ಗೆ ಅಭಿಮಾನ ಮೂಡಿಸಿಕೊಳ್ಳಲು ಕನ್ನಡ ನಮ್ಮ ರಾಷ್ಟ್ರ ಭಾಷೆಎಂದು ಹೇಳುವಪರಿಪಾಠವನ್ನು ಬೆಳೆಸಿಕೊಳ್ಳಬೇಕಿದೆ.


***

Friday, September 11, 2009

ವಾಸ್ಕೋಡಗಾಮ ಚೆನ್ನೈ ರೈಲಿನಲ್ಲಿ ಹಿಂದಿ ಯಾಕೆ?

ನೆನ್ನೆ ರೈಲು ಸಂಖ್ಯೆ ೭೩೧೨ ರಲ್ಲಿ (ವಾಸ್ಕೋಡಗಾಮದಿಂದ - ಚೆನ್ನೈ) ಬೆಂಗಳೂರಿಗೆ ಪ್ರಯಾಣ ಮಾಡಿದೆ. ರಾತ್ರಿ ರೈಲು ಹುಬ್ಬಳ್ಳಿ ದಾಟಿದ ನಂತರ ಮಲಗಲು ಸಿದ್ಧತೆ ಮಾಡಿಕೊಳ್ಳುವಾಗ, ರೈಲ್ವೆಯವರು ಮಲಗಲು ಅನುಕೂಲ ಮಾಡಿಕೊಡುವ ಸಲುವಾಗಿ ಕಂಬಳಿ, ದಿಂಬು ಮತ್ತು ಹೊದಿಕೆ ಇಟ್ಟದ್ದು ಕಣ್ಣಿಗೆ ಬಿತ್ತು. ೨ ಬಿಳಿ ಹೊದಿಕೆಗಳನ್ನು ಅಚ್ಚುಕಟ್ಟಾಗಿ ಒಂದು ಕಾಗದದ ಕವಚದಲ್ಲಿ ಇಟ್ಟಿದ್ದರು.


ಆ ಕಾಗದದ ಕವಚದ ಮೇಲಿನ ಬರಹ ಕಂಡಾಗ ನಾನು ಬೆಂಗಳೂರಿನ ರೈಲು ಹತ್ತಿದ್ದೀನ ಎಂದು ಒಂದು ಕ್ಷಣ ಅನುಮಾನ ಮೂಡಿತು. ಎಚ್ಚೆತ್ತ ಮನಕ್ಕೆ ಹೊಳೆದದ್ದು ನಮ್ಮ ರೈಲು ಇಲಾಖೆಯ "ಹಿಂದಿ ಹೇರಿಕೆಯ" ಮುಂದುವರೆದ ಮತ್ತೊಂದು ದರ್ಶನ. ಆ ಕಾಗದದ ಮೇಲೆ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವು ವಿವರಗಳನ್ನು ಮುದ್ರಿಸಿದ್ದರು. ಅದು ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿತ್ತು.


ಈ ಕಾಗದದ ಕವಚವನ್ನು ಜಂಟಿಯಾಗಿ ಬೆಂಗಳೂರಿನ ನೈರುತ್ಯ ರೈಲು ವಲಯ ಮತ್ತು ಮಾಚಿದೇವ ಗ್ರಾಮೋದ್ಯೋಗ ಹಾಗು ವಿದ್ಯಾ ಸಂಸ್ಥೆಯವರು (ಈ ಸಂಸ್ಥೆಗೂ ಈ ಕವಚದ ಬರಹಕ್ಕೂ ಏನು ಸಂಬಂಧವೋ ತಿಳಿಯಲಿಲ್ಲ) ಹೊರಡಿಸಿರುವುದು ಕಂಡು ಬರುತ್ತದೆ.


ಇವತ್ತು ಬೆಂಗಳೂರಿಗೆ ಬಂದ ಮೇಲೆ ಕವಚದ ಮೇಲೆ ನಮೂದಿಸಿದ್ದ ದೂರವಾಣಿ ಸಂಖ್ಯೆಗೆ (೯೪೪೮೦೭೭೭೯೦) ಕರೆ ಮಾಡಿದೆ. ಜಿ.ಡಿ ಗೋಪಾಲ್ ಎಂಬುವವರು ಮಾತಿಗೆ ಸಿಕ್ಕರು. ಅವರು ಮಾಚಿದೇವ ಗ್ರಾಮೋದ್ಯೋಗ ಹಾಗು ವಿದ್ಯಾ ಸಂಸ್ಥೆಯವರಂತೆ, ಇದು ಯಶವಂತಪುರದಲ್ಲಿರುವ ಲಗ್ಗೆರೆಯಲ್ಲಿದೆಯಂತೆ. ಅವರಿಗೆ ನಾನು ಕೇಳಿದೆ ಪ್ರಶ್ನೆ

  • ರೈಲು ಇಲಾಕೆ ಮೂರು ಭಾಷೆ ಸೂತ್ರ ಅನುಸರಿಸಬೇಕು ಏಕೆ ಇದರಲ್ಲಿ ಕನ್ನಡ ಇಲ್ಲ
  • ರೈಲು ಇಲಾಖೆ ಮೂರು ಭಾಷೆ ಅನುಸರಿಸಬೇಕಾಗಿದ್ರೆ ಇಲ್ಲಿ ಕೊಂಕಣಿ-ಕನ್ನಡ ಮತ್ತು ತಮಿಳು ಇರಬೇಕಿತ್ತು. (ಏಕೆಂದ್ರೆ ಈ ರೈಲು ಸಂಚರಿಸುತ್ತಿರುವುದು ಗೋವ-ಕರ್ನಾಟಕ-ತಮಿಳುನಾಡು ನಡುವೆ)
ನಾನು ಮತ್ತೆ ಮಾತಾಡೋದರೊಳಗೆ ಆಸಾಮಿ ಇದನ್ನು ಡಿಪಾರ್ಟ್ ಮೆಂಟ್ ಗೆ ತಿಳಿಸ್ತೀನಿ ಅಂತ ಪೋನು ಮಡಗಿಬಿಟ್ಟರು. ಬೆಂಗಳೂರಿನ ರೈಲು ನಿಲ್ದಾಣದಲ್ಲಿ ನೀಡುವ ಟಿಕೆಟ್ಟುಗಳಲ್ಲಿ ಕನ್ನಡ ಮಾಯವಾಗಿದೆ. ರೈಲು ಡಬ್ಬಿಯ ಮೇಲೆ ಅಂಟಿಸುವ ಪ್ರಯಾಣಿಕರ ಪಟ್ಟಿ ಕನ್ನಡದಲ್ಲಿಲ್ಲ. ಇತ್ತೀಚೆಗೆ ಗಣಕ ಪರದೆಯಲ್ಲಿ ಟಿಕೆಟ್ ಗಾಗಿ "ಕಾಯುವ ಪ್ರಯಾಣಿಕರ" ಪಟ್ಟಿ ಪ್ರಕಟವಾಗುತ್ತಿದೆ. ಅದರಲ್ಲಿ ಕನ್ನಡ ಇಲ್ಲ. ಎಲ್ಲೆಡೆ ಇಂಗ್ಲೀಷ್ ಜತೆ ಹಿಂದಿ ರಾರಾಜಿಸುತ್ತಿದೆ. ಕರ್ನಾಟಕದ ಮೂರು ಮುಖ್ಯ ನಿಲ್ದಾಣಗಳಾದ ಬೆಂಗಳೂರು-ಮೈಸೂರು-ಹುಬ್ಬಳ್ಳಿಯನ್ನು ಒಳಗೊಂಡಿರುವ ನೈರುತ್ಯ ರೈಲ್ವೆ ನಿರ್ಮಾಣವಾಗಿರುವುದು ಕರ್ನಾಟಕ ಮತ್ತು ಕನ್ನಡಿಗರ ಅನುಕೂಲಕ್ಕಾಗಿ ಇಲ್ಲಿನ ಹೆಚ್ಚಿನ ರೈಲುಗಳಲ್ಲಿ ಪ್ರಯಾಣಿಸುವವರು ಕನ್ನಡಿಗರು. ರೈಲುಗಳಲ್ಲಿ ಪ್ರಯಾಣಿಸುವ ಕನ್ನಡ ಗ್ರಾಹಕರಾದ ನಾವು ಕನ್ನಡಿಗರಿಗಾಗಿ ರೈಲುಗಳಲ್ಲಿ ಆಗಿರುವ ಅನ್ಯಾಯಗಳನ್ನು ಸಂಬಂಧ ಪಟ್ಟವರ ಗಮನಕ್ಕೆ ತರಬೇಕಾಗಿರುವುದು ಸಹ ನಮ್ಮ ಕರ್ತವ್ಯವಾಗಿದೆ.


ಈಗೋ ನೋಡಿ ನಾನು ಗಮನಿಸಿದ ಜಾಹೀರಾತು ಹೀಗಿತ್ತು. ನೀವು ಸಹ ಕರೆ ಮಾಡಿ ಯಾಕೆ ಇಲ್ಲಿ ಕನ್ನಡ ಇಲ್ಲಾ ಅಂತ ಕೇಳ್ತೀರಾ?







****

Monday, September 7, 2009

ಅನಕೃ ಕಂಡಕೊಂಡಿದ್ದ ಅನೇಕತೆಯಲ್ಲಿನ ಏಕತೆ.

ಭಾರತ ಎಂಬ ನಮ್ಮ ಇಂದಿನ ಭೂ ಪ್ರದೇಶವನ್ನು ಬ್ರಿಟೀಷರ ಆಳ್ವಿಕೆಯಿಂದ ಬಿಡುಗಡೆಗೊಳಿಸಲು ಮತ್ತು ಹಲವು ಜನಾಂಗ-ಭಾಷೆ-ಸಂಸ್ಕೃತಿಗಳನ್ನು ಹೊಂದಿದ್ದ ಆ ಭೂ ಪ್ರದೇಶವನ್ನು ಅಂದು 'ಭಾರತ' ಎಂಬ ಹೆಸರಿನಲ್ಲಿ ಒಂದು ದೇಶವಾಗಿ ರೂಪಿಸಲು ಪ್ರಯತ್ನಿಸುತ್ತಿದ್ದವರು, ಈ ಮಹತ್ತರವಾದ ಕೆಲಸಕ್ಕೆ ಎಲ್ಲಾ ಜನರನ್ನು ಒಗ್ಗೂಡಿಸಲು ಏಕ ಭಾಷೆ-ಏಕ ಲಿಪಿ ಅವಶ್ಯಕ ಎಂದು ಹೇಗೆ ಅವರಿಗೆ ಮನವರಿಕೆಯಾಯಿತೋ ಗೊತ್ತಿಲ್ಲ ಆದರೆ ಅಂದಿನಿಂದ ಈ "ಹಿಂದಿ" ಭಾಷೆಯನ್ನು ಎಲ್ಲೆಡೆ ಪ್ರಚಾರ ಮಾಡುವ ಕೆಲಸ ಶುರುವಾಯಿತು. ಇದಕ್ಕೆ ಬ್ರಿಟೀಷರ ಹಿಡಿತದಲ್ಲಿದ್ದ ಈ ಭೂ ಪ್ರದೇಶದಲ್ಲ ಹೆಚ್ಚಿನ ಜನರು ಮಾತನಾಡುವ ಭಾಷೆ ಅದೆಂದು ಕಾರಣ ಕೊಟ್ಟಿರುವುದನ್ನು ನಾವು ಕಾಣಬಹುದು!

೧೯೩೦-೪೦ ರ ದಶಕದಲ್ಲಿ ಈ ಹಿಂದಿ ಪ್ರಚಾರ ಕರ್ನಾಟಕಕ್ಕೂ ಕಾಲಿಟ್ಟಾಗ, ಬಹುಷ: ಅದನ್ನು ಮೊದಲಿಗೆ ವಿರೋಧಿಸಿದವರು ಕನ್ನಡ ಕಾದಂಬರಿ ಸಾರ್ವಭೌಮ, ಕನ್ನಡ ಚಳವಳಿ ಪಿತಾಮಹ ಅನಕೃ ಎಂದು ನಮಗೆ ಇಂದು ಲಭ್ಯವಿರುವ ದಾಖಲೆಗಳಿಂದ ಕಂಡು ಬರುತ್ತದೆ. ೧೯೪೪ ರಲ್ಲಿ ಪ್ರಕಟವಾಗಿರುವ ಅನಕೃ ಅವರ "ನನ್ನನ್ನು ನಾನೆ ಕಂಡೆ" ಎಂಬ ಗ್ರಂಥದಲ್ಲಿ ಹಿಂದಿ ಹುಟ್ಟುಹಾಕಿದ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಹಿಂದಿ ಕುರಿತಾಗಿ ಸುಮಾರು ೬೫ ವರ್ಷಗಳ ಹಿಂದೆಯೇ ಅನಕೃ ಅವರು ಯಾವ ರೀತಿ ಯೋಚಿಸಿದ್ದರು ಮತ್ತು ಅವರ ದೂರದರ್ಶಿತ್ವ ಎಂತಹುದೆಂದು ಮನವರಿಕೆಯಾಗುತ್ತದೆ. ಹಿಂದಿ ಭಾಷೆ ಒಂದೆ ಭಾರತಕ್ಕೆ ಪರಿಹಾರವಲ್ಲ. ಸ್ವಾಂತಂತ್ರ್ಯ ದೊರೆತ ಮೇಲೆ ನಮಗೆ ಅಂತರರಾಷ್ಟ್ರೀಯ ಸಂಪರ್ಕ ನಿಕಟವಾಗುತ್ತದೆ. ಆಗ ಜಗತ್ತಿನ ಭಾಷೆಯ ಹೊರೆಯೂ ನಮ್ಮ ಮೇಲಾಗುತ್ತದೆ ಎಂದು ಅನಕೃ ಅಂದೇ ಮನಗಂಡಿದ್ದು ತಿಳಿದುಬರುತ್ತದೆ.

'ನನ್ನನ್ನು ನಾನೆ ಕಂಡೆ' ಪುಸ್ತಕ ಸಹ ಅಂದಿನ ಸಮಯಕ್ಕೆ ಹೊಸ ಪ್ರಯೋಗ ಎಂದೆ ಹೇಳಬಹುದಾಗಿದೆ. ಇದರಲ್ಲಿ ಅನಕೃ ಅವರು ತಮಗೆ ತಾವೆ (ಸಂದರ್ಶಕನಾಗಿ) ಪ್ರಶ್ನೆ ಹಾಕಿಕೊಳ್ಳುತ್ತ ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅನಕೃ ಈ ಕೃತಿಯನ್ನು ಸ್ವಯಂ ಸಂದರ್ಶನ ಕಲೆ ಎಂದು ಸಹ ಕರೆದಿದ್ದಾರೆ.

********

ಸಂದರ್ಶಕ: ಹಿಂದೂಸ್ಥಾನಕ್ಕೆ ಏಕ ಭಾಷೆ - ಏಕ ಲಿಪಿ ಬೇಕೆಂಬುದರ ಬಗ್ಗೆ ತಮ್ಮ ಅಭಿಪ್ರಾಯವೇನು?
ಅನಕೃ: ನಾನು ಹಲವು ಸಲ ಆ ಬಗ್ಗೆ ಬರೆದಿದ್ದೇನೆ. ಆದರೆ ನನ್ನ ಹಿಂದಿನ ವಿಚಾರಗಳು ಕೆಲವು ಸ್ವಲ್ಪ ಮಾರ್ಪಾಟು ಹೊಂದಿವೆ.
ಸಂದರ್ಶಕ: ಏಕೆ?
ಅನಕೃ: ಅನುಭವ, ವ್ಯಾಸಂಗ ಮತ್ತು ಕಾಲ ಪರಿವರ್ತನೆಗಳಿಂದ
ಸಂದರ್ಶಕ: ಹಾಗಾದರೆ ಈಗ ನೀವು ಏನು ಹೇಳುತ್ತೀರಿ
ಅನಕೃ: ಸಾಕ್ರೆಟಿಸನ ಮಾರ್ಗವನ್ನವಲಂಬಿಸಿ ಕೆಲವು ಪ್ರಶ್ನೆಗಳನ್ನು ನಾನು ಕೇಳುತ್ತೇನೆ. ಸಮಂಜಸವಾಗಿ ಉತ್ತರ ಹೇಳಬೇಕು.
ಸಂದರ್ಶಕ: ಪ್ರಯತ್ನಿಸುತ್ತೇನೆ.
ಅನಕೃ: ಏಕ ಭಾಷೆ ಯಾರಿಗೆ ಬೇಕು?
ಸಂದರ್ಶಕ: ಒಂದು ರಾಷ್ಟ್ರಕ್ಕೆ
ಅನಕೃ: ಹಿಂದೂಸ್ಥಾನವು ಈಗ ಒಂದು ರಾಷ್ಟ್ರವಾಗಿದೆಯೋ?
ಸಂದರ್ಶಕ : ಸಾಂಸ್ಕೃತಿಕ ದೃಷ್ಟಿಯಿಂದ ಆಗಿದೆ. ರಾಜಕೀಯ ದೃಷ್ಟಿಯಿಂದ ಆಗಿಲ್ಲ
ಅನಕೃ: ಇನ್ನು ಹಿಂದೂಸ್ಥಾನ ಸ್ವಾತಂತ್ರ್ಯವನ್ನು ಗಳಿಸಿಕೊಂಡು ಒಂದು ರಾಷ್ಟ್ರವಾದ ಮೇಲೆ ತಾನೆ ಈ ಪ್ರಶ್ನೆ ಏಳುವುದು?
ಸಂದರ್ಶಕ: ಹೌದು, ಆದರೆ ಅದಕ್ಕೆ ಏಕ ಭಾಷೆ ಒಂದು ಸಾಧನವಲ್ಲವೇ?
ಅನಕೃ: ಸ್ವತಂತ್ರವಾಗಿರುವ ಯಾವ ದೇಶದಲ್ಲಿ ಏಕ ಭಾಷೆ ಪ್ರಚಾರದಲ್ಲಿದೆ ಹೇಳಿ? ಅಮೇರಿಕಾ, ಸ್ವಿಟ್ಚರ್ಲೆಂಡ್, ಇಂಗ್ಲೆಂಡ್, ರಷ್ಯಾ ದೇಶಗಳಲ್ಲೆಲ್ಲಾ ಹಲವಾರು ಭಾಷೆಗಳು ಪ್ರಚಾರದಲ್ಲಿಲ್ಲವೆ? ಹಿಂದೂಸ್ಥಾನಕ್ಕೆ ಸ್ವಾತಂತ್ರ್ಯ ಸಿಕ್ಕದಂತೆ ಮಾಡುವುದಕ್ಕೆ ಆಳರಸರು ಹೂಡಿದ ಒಂದು ಕುಹಕವಿದು. ನಮ್ಮವರು ಅದೇ ಕಿನ್ನರಿಯನ್ನು ಬಾರಿಸುತ್ತ ಹೊರಟಿದ್ದಾರೆ.
ಸಂದರ್ಶಕ: ಗಾಂಧೀಜಿಯವರೇ ಇದರ ಪುರಸ್ಕೃತರಾಗಿದ್ದಾರಲ್ಲ?
ಅನಕೃ: ಗಾಂಧೀಜಿಯವರು ಹೇಳಿದ್ದೊಂದು. ಜನ ತಿಳಿದುಕೊಂಡಿದ್ದೊಂದು. ದೊಡ್ಡವರ ಮಾತು ಸಣ್ಣವರ ಮೂಲಕ ಬಂದಾಗ ಪರ್ವತಧಾರೆ ಕಿರುಗಾಲವೆಯಲ್ಲಿ ಹರಿದಂತೆ ಆಗುತ್ತದೆ. ಗಾಂಧೀಜಿಯವರು ವ್ಯವಹಾರ ದೃಷ್ಟಿಯಿಂದ ಏಕಭಾಷೆ ಬೇಕೆಂದರು. ಹಿಂದಿಯನ್ನು ಹಿಂದೂಸ್ಥಾನದ ಹತ್ತನೆಯ ನಾಲ್ಕು ಅಂಶ ಜನ ಮಾತಾಡುವುದರಿಂದ ಅದನ್ನು ರಾಷ್ಟ್ರಭಾಷೆಯನ್ನಾಗಿ ಅಳವಡಿಸಬೇಕೆಂದು ಹೇಳಿದರು.
ಸಂದರ್ಶಕ: ನ್ಯಾಯವಾಗಿಯೇ ಇದೆ. ಭಿನ್ನಾಭಿಪ್ರಾಯಕ್ಕೆ ಅವಕಾಶವೆಲ್ಲಿಂದ ಬಂತು?
ಅನಕೃ: ಬರುತ್ತದೆ. ಮೂಲ ತತ್ವದಲ್ಲಲ್ಲ. ಸೂಕ್ಷ್ಮ ಆಚರಣೆಯಲ್ಲಿ. ಗಾಂಧೀಜಿಯವರು ಹಿಂದಿಯನ್ನು ಬಲವದ್ಬಂದನದಿಂದ ಪ್ರಚಾರ ಮಾಡಬೇಕೆಂದು ಹೇಳಲಿಲ್ಲ ಅಲ್ಲವೇ?
ಸಂದರ್ಶಕ: ಹೌದು

ಅನಕೃ: ಚಕ್ರವರ್ತಿ ರಾಜಗೋಪಾಲಚಾರ್ಯರು ಕಾಂಗ್ರೆಸ್ ಮಂತ್ರಿಮಂಡಲವನ್ನು ಸ್ಥಾಪಿಸಿದ ಕೂಡಲೇ ಮದರಾಸು ಪ್ರಾಂತ್ಯದಲ್ಲಿ ಕಾನೂನಿನ ಮೊರೆಹೊಕ್ಕರು. ತಮ್ಮ ತತ್ವಕ್ಕೆ ವಿರೋಧಿಸಿದವರನ್ನು ಕಾರಾಗಾರಕ್ಕೆ ಕಳುಹಿಸಿದರು. ಬ್ರಿಟಿಷ್ ಸಾಮ್ರಾಜ್ಯವಾದಿಗಳನ್ನು ಮೀರಿಸುವಷ್ಟು ದಬ್ಬಾಳಿಕೆ ನಡೆಸಿಬಿಟ್ಟರು.
ಸಂದರ್ಶಕ: ಹೌದು ತುಂಬಾ ಅನ್ಯಾಯ ಮಾಡಿ ಅನವಶ್ಯಕವಾಗಿ ದ್ವೇಷಾಸೂಯೆಗಳನ್ನು ಜನತೆಯಲ್ಲಿ ಬಿತ್ತಿದರು.
ಅನಕೃ: ಗಾಂಧೀಜಿಯವರು ಹಿಂದೀ ಪ್ರಾಂತ್ಯಭಾಷೆಗಳನ್ನು ಪ್ರತಿಭಟಿಸಕೂಡದೆಂದು, ಅವುಗಳ ಮೇಲೆ ಅಪಪ್ರಚಾರ ಮಾಡಕೂಡದೆಂದು ಖಂಡಿತವಾಗಿ ಹೇಳಿಲ್ಲವೇ?
ಸಂದರ್ಶಕ: ಹೇಳಿದ್ದಾರೆ.
ಅನಕೃ: ಹಿಂದೀ ಪ್ರಚಾರಕರು ಏನು ಮಾಡಿದರು? ಹೋದ ಕಡೆ, ಪ್ರಾಂತ್ಯಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ತೆಗಳುತ್ತ ಬಂದರು. ಹಿಂದೀ ಪ್ರಚಾರವನ್ನು ಮರೆತು ಅವರು ಪ್ರಾಂತ್ಯ ಭಾಷೆಗಳ ಅಪ-ಪ್ರಚಾರವನ್ನು ಮಾಡಿದರು. ಸ್ಥಳೀಯ ಸಂಸ್ಥೆಗಳ ನೆರವು ಪಡೆದು ಪ್ರಾಂತ್ಯ ಭಾಷೆಗಳನ್ನು ಉಪವಾಸ ಸಾಯಿಸುತ್ತ ಬಂದರು.
ಸಂದರ್ಶಕ: ತಪ್ಪು ಸ್ಥಳೀಯ ಸಂಸ್ಥೆಗಳದೇ ವಿನಾ ಗಾಂಧೀಜಿಯವರದಲ್ಲ - ಹಿಂದೀ ಪ್ರಚಾರಕರದೂ ಅಲ್ಲ
ಅನಕೃ: ನಿಮ್ಮ ತಿಳಿವಳಿಕೆ ತಪ್ಪು. ಗಾಂಧೀ, ನೆಹರು, ಆಜಾದರ ಹೆಸರುಗಳನ್ನು ಮುಂದೆ ಮಾಡಿಕೊಂಡು ಪ್ರಚಾರಕರು ನಿಂತರು. ಕಾಂಗ್ರೆಸ್ ನ ಭಕ್ತರಾಗಿದ್ದ ಸ್ಥಳೀಯ ಸಂಸ್ಥೆಗಳ ಪ್ರವರ್ತಕರು ದೊಡ್ಡ ಹೆಸರುಗಳಿಗೆ ಮರುಳಾಗಿ ಆತ್ಮ ಘಾತಕ ಮಾಡಿಕೊಳ್ಳಲಾರಂಭಿಸಿದರು.
ಸಂದರ್ಶಕ: ಹಿಂದೀ ಪ್ರಚಾರ ಸಂಸ್ಥೆಗಳ ಮೇಲೆ ನಿಮ್ಮ ಆಕ್ಷೇಪವೇನು?
ಅನಕೃ: ಎರಡು. ಒಂದು, ಅದು ಬಂಡವಾಳಗಾರರ ಸಂಸ್ಥೆ. ಕನ್ನಡನಾಡು ಬಡವರ ದೇಶ. ಇಲ್ಲಿ ಹಣ ಕೊಟ್ಟು ಪ್ರಚಾರ ನಡೆಸುವ ಸಂಸ್ಥೆಗಳಿಲ್ಲ. ಈ ಕಾರಣದಿಂದ ಹಣದ ಸೌಲಭ್ಯವಿದೆಯಂದು ಹಿಂದೀ ಪ್ರಚಾರ ಸಂಘಗಳು ಕನ್ನಡದ ಮೇಲೆ ಧಾಳಿ ನಡೆಸಿದವು. ಎರಡು, ಪ್ರಚಾರಕರ ಉದ್ದೇಶ, Hinidi Imperialism (ಹಿಂದೀ ಸಾಮ್ರಾಜ್ಯವಾದ) ಸ್ಥಾಪಿಸುವುದು. ಗುರುದೇವ ರವೀಂದ್ರರು ಹೇಳಿದಂತೆ ಸ್ವಾಭಿಮಾನವುಳ್ಳ ಯಾವ ನಾಡಿನವನೇ ಆಗಲಿ, ಭಾಷಾಸಂಬಂಧಿ ಸಾಮ್ರಾಜ್ಯವಾದವನ್ನು ಸಹಿಸನು.
ಸಂದರ್ಶಕ: ಇದಕ್ಕೆ ಪರಿಹಾರವೇನು?
ಸಂದರ್ಶಕ: ಇದಕ್ಕೆ ಪರಿಹಾರವೇನು?
ಅನಕೃ: ರವೀಂದ್ರರೆ ಅದನ್ನು ಸೂಚಿಸಿದ್ದಾರೆ. Do not rest content with the accidental advantage of your numbers. Attract people by creating great creative literature. ( ಹಿಂದೀ ಮಾತನಾಡುವವರ ಸಂಖ್ಯೆ ತುಂಬ ಇದೆಯೆಂದು ಸಂತುಷ್ಟ್ರರಾಗಿ ಕೂಡಬೇಡಿ. ಅದೊಂದು ಆಕಸ್ಮಿಕ ಅನುಕೂಲ ಲಾಭ ಮಾತ್ರ. ನೀವು ಉಚ್ಚಕೋಟಿಯ ಸೃಷ್ಟಿಕಾರಕ ಸಾಹಿತ್ಯವನ್ನು ರಚಿಸಿ ಜನರನ್ನು ಆಕರ್ಷಿಸಿರಿ). ಹಿಂದೀ ಪ್ರಚಾರಕರು ಕೇವಲ ಭಾಷಾ ಪ್ರಚಾರವಲ್ಲ. ಜನತೆಯಲ್ಲಿ ಸಾಹಿತ್ಯ ಸಂಸ್ಕೃತಿಯ ಪ್ರಸಾರವನ್ನು ಕೈಗೊಳ್ಳಬೇಕು
ಸಂದರ್ಶಕ: ಆ ಬಗ್ಗೆ ನಿಮ್ಮ ವಿರೋಧವಿಲ್ಲವೇ?
ಅನಕೃ: ನಾನು ಅದನ್ನು ಹೃತ್ಪೂರ್ವಕ ಸ್ವಾಗತಿಸುತ್ತೇನೆ. ಹಿಂದೀ ಬಗ್ಗೆ ನಾನೆಷ್ಟು ವಿರೋಧವನ್ನು ವ್ಯಕ್ತಪಡಿಸಿದ್ದೇನೆಯೋ ಅದರ ಹತ್ತರಷ್ಟು ಸಾಂಸ್ಕೃತಿಕ ಭಾಂಧವ್ಯಕ್ಕಾಗಿ ಹೆಣಗಾಡುತ್ತಿದ್ದೇನೆ. ಹಿಂದಿಯ ಕಥೆ ಕಾದಂಬರಿಗಳು ಕನ್ನಡಕ್ಕೆ ಅನುವಾದಿಸಲು ಶ್ರಮಿಸಿದ್ದೇನೆ. ಹಾಗೆ ಹಿಂದೀ ಜನಗಳಿಗೆ ಕನ್ನಡದ ಬಗ್ಗೆ ಅರಿವುಂಟುಮಾಡಲೆತ್ನಿಸಿದ್ದೇನೆ. ಭಾರತದಲ್ಲಿ ಮೂಡಿಬರುವ ಈ ಅನೈಕಮತ್ಯಕ್ಕೆ ಸಾಕಷ್ಟು ಪರಸ್ಪರ ಬಳಕೆ, ಪರಿಚಯಗಳಿಲ್ಲದಿರುವುದೇ ಕಾರಣವೆಂದು ನನ್ನ ಮತ. ಪ್ರಸಾರ ದೃಷ್ಟಿಯಿಂದ ಕೆಲಸ ಮಾಡುತ್ತಿರುವವರು ತಾವು ದಿಗ್ವಿಜಯ ಮಾಡುತ್ತಿದ್ದೇವೆಂದು ಭಾವಿಸಿರುತ್ತಾರೆ. ಇದು ತಪ್ಪು. ನಮ್ಮ ದುರ್ದೈವ ನೋಡಿ ಫ್ರೆಂಚ್, ಇಂಗ್ಲಿಷ್, ರಷ್ಯನ್, ಇಟಾಲಿಯನ್, ಕವಿಗಳು, ಕತೆಗಾರರು, ವಿಮರ್ಷಕರು ಇವರ ಬಗ್ಗೆ ಸಾಕಷ್ಟು ಗೊತ್ತಿದೆ. ಹೆಚ್ಚು ತಿಳಿಯಲು ಬಯಸಿದರೆ ಅಪಾರವಾದ ಅನುಕೂಲವಿದೆ. ನಮ್ಮ ದೇಶ ಭಾಷೆಗಳ ಬಗ್ಗೆ ಎಂತಹ ದಾರಿದ್ರ್ಯ ಮೂಡಿದೆ ನೋಡಿ. ನೆರೆ ಪ್ರಾಂತ್ಯಗಳಾದ ತಮಿಳು, ತೆಲುಗಿನ ಬಗ್ಗೆ ಕೂಡ ನಮಗೇನೂ ಗೊತ್ತಿಲ್ಲ. ಹಿಂದೀ, ಬಂಗಾಳಿ, ಗುಜರಾತಿ, ಅಸಾಮಿ ಹೆಸರುಗಳನ್ನು ಮಾತ್ರ ಕೇಳಿಬಲ್ಲೆವು.
ಸಂದರ್ಶಕ: ಈ ಅಜ್ಞಾನಾಂಧಕಾರವನ್ನು ಹೋಗಲಾಡಿಸುವುದು ಹೇಗೆ?
ಅನಕೃ: ಮುಂಬಯಿಯ ಪಿಇಎನ್ ಸಂಸ್ಥೆ ಮೇಲ್ಪಂಕ್ತಿ ಹಾಕಿ ತೋರಿಸಿದೆ, ಎಲ್ಲಾ ಭಾರತೀಯ ಭಾಷೆಗಳ ಸಾಹಿತ್ಯ ಪರಿಚಯ ಮಾಡಿಕೊಡುವ ಒಂದು ಉತ್ತಮ ವರ್ಗದ ಮಾಸಪತ್ರಿಕೆಯನ್ನು ನಡೆಸುತ್ತಿದೆ. ಇದುವರೆಗೆ ಅಸಾಮಿ, ಬಂಗಾಳಿ ಭಾಷಾ ಸಾಹಿತ್ಯ ಇತಿಹಾಸಗಳನ್ನು ಪ್ರಕಟಿಸಿದೆ. ಮುಂದೆ ಬೇರೆ ಬೇರೆ ಭಾಷೆಗಳ ಸಾಹಿತ್ಯೇತಿಹಾಸಗಳನ್ನು ಪ್ರಕಟಿಸುತ್ತದೆ. ಪ್ರತಿಯೊಂದು ಭಾರತೀಯ ಭಾಷೆಯಲ್ಲಿಯೂ ಇಂತಹ ಪ್ರಯತ್ನವಾಗಬೇಕು.
ಸಂದರ್ಶಕ: ಪರಿಷತ್ತು ಈ ಕಾರ್ಯವನ್ನೇಕೆ ಕೈಗೊಳ್ಳಬಾರದು?
ಅನಕೃ: ಪರಿಷತ್ತು ಕೈಗೊಳ್ಳಬೇಕಾದ ಅನೇಕ ಕಾರ್ಯಗಳಲ್ಲಿ ಇದೊಂದು. ಈ ಸಂಸ್ಥೆಗೆ ಮೊದಲು ಆಕ್ಸಿಜನ್ ಗ್ಯಾಸ್ ಕೊಟ್ಟು ಬದುಕಿಸಿ ಅನಂತರ ಮಂದಿನ ವಿಷಯವನ್ನು ಯೋಚಿಸಬೇಕಿದೆ
ಸಂದರ್ಶಕ: ಹಿಂದಿಯ ಬಗ್ಗೆ ಇಂದು ಪರಿಷತ್ತು ತೆಳೆದಿರುವ ಧೋರಣೆಯೇನು?

ಅನಕೃ: ಹರಿಯುವ ದೋಣಿಯಲ್ಲಿ ತೇಲುವುದು.(Drifting). ಹಿಂದೆ ಪರಿಷತ್ತು ತಾನೇ ಈ ಸಮಸ್ಯೆಯನ್ನು ಹುಟ್ಟಿಹಾಕಿತು. ಆಗ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಶ್ರೀ ಡಿ.ವಿ.ಗುಂಡಪ್ಪನವರೂ, ಪರಿಷತ್ಪತ್ರಿಕೆಯ ಸಂಪಾದಕರಾಗಿದ್ದ ಪ್ರೊ. ಎ. ಆರ್. ಕೃಷ್ಣಶಾಶ್ತ್ರೀಗಳು ಗಂಡುಗಲಿಗಳಂತೆ ಕಾದಿದ್ದರು. ಪ್ರೊ. ಬಿ.ಎಂ.ಶ್ರೀಕಂಠಯ್ಯನವರು ಉಪಾಧ್ಯಕ್ಷರಾದರು. ಅವರೂ ಕೆಲಕಾಲ ಹಿಂದಿಯ ದಾಳಿಯನ್ನು ಎದುರಿಸಿ ಹೋರಾಡಿದರು. ಆದರೆ ಒಂದು ದಿನ ಶ್ರೀ ರಂ.ರಾ. ದಿವಾಕರರನ್ನು ಬಳ್ಳಾರಿ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಾಡಿದರು. ಅಂದಿನಿಂದ ಶ್ರೀ ಶ್ರೀಯವರ ಧೋರಣೆ ಬದಲಾಯಿಸಿತು. ಪರಿಷತ್ತಿನ ಸಮ್ಮೇಳನಾಧ್ಯಕ್ಷರಾಗಿದ್ದ ಶ್ರೀ ದಿವಾಕರರು ಹಿಂದೀ ಪ್ರಚಾರಕ್ಕೆ ಬಂದರು. ಸರ್ಕಾರದ ಮರೆಹೊಕ್ಕರು. ದೇಶದಲ್ಲೆಲ್ಲಾ ಸಂಚರಿಸಿ ಹಿಂದೀ ಪ್ರಚಾರ ಮಾಡುತ್ತಾರೆಂದ ಮೇಲೆ ಹಿಂದೀ ಪ್ರಚಾರಕರಿಗೆ ಏನು ಕಡಿಮೆಯಾದ ಹಾಗಾಯಿತು. ಪರಿಣಾಮ ಕರ್ಣಾಟಕ ಸಂಘಗಳು, ಹಿಂದೀ ಪ್ರಚಾರಕ ಸಂಘಗಳಾಗುತ್ತ ಬಂದವು. ಕನ್ನಡದ ಕೆಲಸಗಾರರು ಹಿಂದೀ ಪ್ರಚಾರಕರಾಗುತ್ತ ಬಂದರು. ಸ್ಥಳೀಯ ಸಂಸ್ಥೆಗಳು, ಕನ್ನಡ ವಾಚನಾಲಯ ಪುಸ್ತಕ ಭಂಡಾರಗಳಿಗೆ ಕೊಡುತ್ತಿದ್ದ ಹಣವನ್ನು ಹಿಂದಿಗೆ ಕೊಡುತ್ತ ಬಂದರು. ಶಾಲೆ ಕಾಲೇಜುಗಳಿಗೆ ಹಿಂದಿ ಕಾಲಿಟ್ಟು ಕನ್ನಡವನ್ನು ಒತ್ತರಿಸುತ್ತ ಬಂದಿತು. ಹೆಣ್ಣು ಮಕ್ಕಳು ಬಯಲು ಭ್ರಾಂತಿಯಿಂದ ಹಿಂಡು ಹಿಂಡಾಗಿ ಹಿಂದಿಯನ್ನು ಕಲಿಯುತ್ತ ಬಂದರು. ಕನ್ನಡಕ್ಕೆ ಸರ್ವತೋಮುಖವಾದ ಪೆಟ್ಟು ಬೀಳುತ್ತ ಬಂದಿತು. ಆಗ ನಾನು ಪರಿಷತ್ತಿನ ವಾರಪತ್ರಿಕೆಯ ಸಂಪಾದಕನಾಗಿದ್ದೆ. ಎಚ್ಚರಕೊಟ್ಟೆ. ದಿವಾಕರರ ದೇಶದ್ರೋಹವನ್ನು ಖಂಡಿಸಿದೆ. ಶ್ರೀ ಶ್ರೀ ಯವರು ಕುಪಿತರಾದರು. ದಿವಾಕರರಿಗೆ ನಾನು ಶರಣಾಗಬೇಕೆಂದರು-ನಾನು ಸಾಧ್ಯವಿಲ್ಲವೆಂದೆ. ನನ್ನ ಪರವಾಗಿ ತಾವು ಆ ಕೆಲಸ ಮಾಡಲು ಮುಂದುವರೆದರು. ನನ್ನ ಹೆಸರಿರುವ ಕನ್ನಡ ನುಡಿಯಲ್ಲಿ 'ಕ್ಷಮಯಾಚನೆ' ಬರಕೂಡದೆಂದು ಕನ್ನಡ ನುಡಿ ಪತ್ರಿಕೆಗೆ ನನ್ನ ಅಂತ್ಯ ಪ್ರಣಾಮವನ್ನು ಸಲ್ಲಿಸಿಬಿಟ್ಟೆ. ಅಂದಿನಿಂದ ಹಿರಿಯರ ಕಣ್ಣಿಗೆ ನಾನೊಬ್ಬ ಕ್ರಾಂತಿಪುರುಷ, ಅಶ್ಲೀಲ ವ್ಯಕ್ತಿ, ವಿವೇಕ ಶೂನ್ಯನಾದ ಬಿಸಿ ರಕ್ತದ ಒಬ್ಬ ಬಂಡಾಯಗಾರ.
ಸಂದರ್ಶಕ: ಅಂದಿಗೂ ಇಂದಿಗೂ ಪರಿಷತ್ತಿನಲ್ಲಿ ಏನೂ ಬದಲಾವಣೆಯಾಗಿಲ್ಲವೇ?
ಅನಕೃ: ಆಗಿದೆ, ವ್ಯಕ್ತಿಗಳು ಬದಲಾಯಿಸಿದ್ದಾರೆ. ಆದರೆ ಅದೇ ಮನೋಧರ್ಮ. ಅದೇ ಸಂಕುಚಿತ ಮನಸ್ಸು- ಅದೇ ನೈಚ್ಯಾನುಸಂಧಾನ.
ಸಂದರ್ಶಕ: ಸಂಕುಚಿತ ಮನಸ್ಸೆ!
ಅನಕೃ: ಹೌದು, ನಾನು ವೀರಶೈವ ಸಾಹಿತ್ಯ ಸಂಸ್ಕೃತಿ ಗ್ರಂಥ ಬರೆದದ್ದಕ್ಕೆ, ಇಂದಿನವರು ಲಿಂಗಾಯರನ್ನು ಎತ್ತಿಕಟ್ಟಿ ಪರಿಷತ್ತಿಗೆ ವಿರೋಧವಾಗಿ ನಡೆಯುತ್ತಿದ್ದೇನೆಂದು ಹೇಳುತ್ತಿದ್ದಾರೆ.
ಸಂದರ್ಶಕ: ಹಾಗಾದರೆ ಸಾಂಸ್ಕೃತಿಕ ಸಂಘಟನೆಗೆ ಕರ್ನಾಟಕದಲ್ಲಿ ಎಡೆಯೇ ಇಲ್ಲವೇ?
ಅನಕೃ: ಏಕಿಲ್ಲ- ನಮ್ಮ ನಿಮ್ಮಂತಹ ಪುರೋಗಾಮಿಗಳು ಸತ್ತು ಹೋಗಿದ್ದಾರೆಯೇ? ವೈಯುಕ್ತಿಕವಾಗಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಮಾಡೋಣ. ಬೇರೆ ಭಾಷೆಗಳಿಂದ ಧಾರಾಳವಾಗಿ ಬೆಳಕನ್ನು ತೆಗೆದುಕೊಳ್ಳೋಣ - ನಮ್ಮ ಬೆಳಕನ್ನು ಅವರಿಗೆ ಔದಾರ್ಯದಿಂದ ನೀಡೋಣ
ಸಂದರ್ಶಕ: ಹಿಂದಿಯ ಬಗ್ಗೆ ಇಂದಿನ ನಮ್ಮ ಧೋರಣೆಯೇನು?
ಅನಕೃ: ಸ್ನೇಹ ಮತ್ತು ಸೌಹಾರ್ದ. ಹಿಂದೀ ಪ್ರಚಾರಕರಲ್ಲಿಯೂ ಸಾಕಷ್ಟು ವಿಚಾರಪರಿವರ್ತನೆಯಾಗಿದೆ. ಸಂಸ್ಕೃತಿಯ ಕಡೆಗೆ ಅವರ ಲಕ್ಷ್ಯ ಹೋಗಿದೆ. ಮೈಸೂರಿನ ಕೆಲವು ಹಿಂದೀ ಪ್ರಚಾರಕ ಕೇಂದ್ರಗಳು ಕನ್ನಡ ದಿನಗಳನ್ನು ಆಚರಿಸುತ್ತಿದ್ದಾರೆ. ಕನ್ನಡ ಸಾಹಿತ್ಯ, ಸಾಹಿತಿಗಳ ಸ್ನೇಹ, ಸೌಹಾರ್ದವನ್ನು ಬಯಸುತ್ತಿದ್ದಾರೆ. ಅಪಪ್ರಚಾರವನ್ನು ಬಿಡುತ್ತಿದ್ದಾರೆ. ನಮಗೆ ಬೇಕಾದುದೂ ಇದೆ ತಾನೇ. ಕನ್ನಡಕ್ಕೆ ಧಕ್ಕೆ ತಗಲದಂತೆ ಹಿಂದೀ ಪ್ರಚಾರ ಮಾಡಿಕೊಳ್ಳಲಿ. ಹಿಂದೀ ಜನ ಕನ್ನಡಿಗರಾಗಿ ಅವರ ಕರ್ತವ್ಯ ಮೊದಲು ನಮ್ಮ ಭಾಷೆಗೆ, ಆನಂತರ ಹಿಂದಿಗೆ ಎಂಬುದನ್ನು ಗ್ರಹಿಸಲಿ. ಎಲ್ಲ ಘರ್ಷಣೆಯೂ ಕೊನೆಗಾಣುತ್ತದೆ. ಹಿಂದೀ ಪ್ರಸಾರದ ರೀತಿಯಲ್ಲಿ ಕನ್ನಡ ಪ್ರಸಾರವಾಗಬೇಕು. ಹಿಂದೂಸ್ಥಾನದ ಬೇರೆ ಬೇರೆ ಪ್ರಾಂತ್ಯಗಳಿಗೆ ಕನ್ನಡ ಪ್ರಸಾರಕರನ್ನು ಕಳುಹಿಸಿಕೊಡಬೇಕು. ಬೇರೆ ಬೇರೆ ಭಾಷೆಗಳಲ್ಲಿ ಕನ್ನಡ ಗ್ರಂಥಗಳ ಅನುವಾದ ಬರುವಂತೆ ಮಾಡಬೇಕು. ಹಿಂದೀ ಪ್ರಚಾರಕರ ನಿಷ್ಠೆ, ಕೆಚ್ಚು ಸ್ಥೈರ್ಯ, ಕರ್ತವ್ಯಪ್ರೇಮ ಕನ್ನಡ ಸೇವಕರಲ್ಲಿಯೂ ಮೂಡಿಬರಬೇಕು.
ಸಂದರ್ಶಕ: ಹಿಂದಿಯ ಏಕಭಾಷಾ-ಏಕಲಿಪಿಯ ವಾದಕ್ಕೆ ನಿಮ್ಮ ಉತ್ತರವೇನು?
ಅನಕೃ: ಅದನ್ನು ದೇಶ ಸ್ವಾತಂತ್ರ್ಯ ಬಂದ ಮೇಲೆ ಇಟ್ಟುಕೊಳ್ಳೋಣ. ಆಗ ಹಿಂದಿಯೇ ಭಾರತದ ಭಾಷೆಯಾಗುತ್ತದೆಯೋ, ಕನ್ನಡವೇ ಆಗುತ್ತದೆಯೋ, ಇಂಗ್ಲೀಷಾಗುತ್ತದೆಯೋ ಖಚಿತವಾಗಿ ಹೇಳಬಲ್ಲವರು ಯಾರು? ರಾಷ್ಟ್ರೀಯತೆ ಒಂದು ಸಾಧಿಸಿದ ಮೇಲೆ - ಅಂತರ ರಾಷ್ಟ್ರೀಯತೆಯ ಸಮಸ್ಯೆಯೇಳುತ್ತದೆ. ಆಗ ನಮ್ಮ ವ್ಯವಹಾರ ಕೇವಲ ಭರತಖಂಡಕ್ಕೆ ಮುಗಿಯುವುದಿಲ್ಲ. ಜಗತ್ತಿನ ಸಂಬಂಧ ನಿಕಟವಾಗುತ್ತದೆ. ಆಗ ಜಗತ್ತಿನ ಭಾಷೆಯನ್ನೂ ನಾವು ಅವಲಂಭಿಸಬೇಕಾಗುತ್ತದೆ.
ಸಂದರ್ಶಕ: ಎಲ್ಲಿಂದ ಎಲ್ಲಿಗೆ ಬಂದರೂ ನೀವು ಕನ್ನಡಕ್ಕೇ ಮೊದಲು ಬೆಲೆ ಕೊಡುವುದು.
ಅನಕೃ: ನಿಸ್ಸಂದೇಹವಾಗಿ. "ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತ್ರುವೆಂಬುದನ್ನು ಮರೆಯಬಾರದು. ಈ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡು ಬಂದರೂ ವಿಧಿಯಲ್ಲ. ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ. "

********

ಹಿಂದಿ ಹೇರಿಕೆ ಕುರಿತಾದ ಅನಕೃ ಅವರ ೬೫ ವರ್ಷಗಳ ಹಿಂದಿನ ಈ ಲೇಖನ ಇಂದಿಗೂ ಪ್ರಸ್ತುತವಾಗಿದೆಯಲ್ಲವೆ?. ಕೇಂದ್ರದಲ್ಲಿ ನಮ್ಮನ್ನಾಳುವವರು ಹಿಂದಿಯಂತೆಯೇ, ಕನ್ನಡವನ್ನೊಳಗೊಂಡ ಭಾರತದ ಇತರ ಭಾಷೆಗಳ ಬೆಳವಣಿಗೆಗೆ- ಪ್ರಸಾರಕ್ಕೆ ಸಹ ಮನಸ್ಸು ಮಾಡಿ ಭಾರತ ಸದಾಕಾಲ "ಅನೇಕತೆಯಲ್ಲಿ ಏಕತೆ" ಯನ್ನು ಕಾಪಾಡಿಕೊಂಡು, ಏಕತ್ರವಾದ ಸಮಗ್ರತೆಯನ್ನು ಮುನ್ನಡೆಸಿಕೊಂಡು ಹೋಗಲು ಅನಕೃ ಅವರ ಈ ಲೇಖನ ಸದಾಕಾಲದ ಜಾಗೃತಿಯ ಧ್ವನಿಯಾಗಿದೆಯಂತನಿಸುತ್ತದೆಯಲ್ಲವೇ?



*****

Thursday, September 3, 2009

ಮಲೈಚಾಮಿ ಹೇಳಿದ "ಒಪ್ಪುಕೂಟದ"ನಿಜವಾದ ಅರ್ಥ.

ಬಿಹಾರ, ಮದ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನದ ಶಾಲೆಗಳಲ್ಲಿ ಮಕ್ಕಳು ಕಲಿಯುವುದು ಎರಡು ಭಾಷೆ, ಒಂದು ಅಲ್ಲಿನ ಪ್ರದೇಶದ ಭಾಷೆ ಹಿಂದಿ ಮತ್ತು ಎರಡನೇದು ಇವತ್ತು ಜಗತ್ತು ಅನುಸರಿಸುತ್ತಿರುವ! ಭಾಷೆ ಇಂಗ್ಲೀಷು. ಹಾಗೆಯೆ ಈ ಭಾಗಗಳಿಂದ ದೆಹಲಿಯ ಸದನಕ್ಕೆ ಹೋಗುವ ಬಹುತೇಕ ಸಂಸದರು ಮಾತನಾಡುವುದು ಕೇವಲ ಹಿಂದಿ, ಕೆಲವರು ಇಂಗ್ಲೀಷನ್ನು ಸಹ ಮಾತನಾಡಬಹುದು. ಹೀಗೆ ಅವರು ಮಾತನಾಡುವ ಹಿಂದಿ, "ಭಾರತದ ರಾಷ್ಟ್ರಭಾಷೆ" ಎಂದು ಆಗಾಗ ಲೋಕಸಭೆಯಲ್ಲಿ ಗೊಂದಲ-ಗದ್ದಲವೆಬ್ಬಿಸುವುದು ಇವರ ಸಂಸತ್ತಿನ ಕಲಾಪದ ಕೆಲಸಗಳಲ್ಲೊಂದಾಗಿದೆ.

ಹಿಂದಿಯೊಂದನ್ನು ಮಾತ್ರ ಈ ದೇಶದ ಏಕೈಕ ರಾಷ್ಟ್ರ ಭಾಷೆ ಆಗದಂತೆ, ಈ ಹಿಂದಿ ಭೂತ ನಮ್ಮ ಕನ್ನಡ, ಪಕ್ಕದ ತೆಲುಗು ಹಾಗು ಭಾರತದ ಇತರ ಸ್ವತಂತ್ರ ಭಾಷೆಗಳನ್ನು ಸಂಪೂರ್ಣವಾಗಿ ತಿಂದು ಮುಗಿಸಿಬಿಡದಂತೆ ತಡೆಹಿಡಿದದ್ದು ೧೯೬೫ ರ ತಮಿಳರ ಹಿಂದಿ ವಿರುದ್ಧದ ಚಳವಳಿ. ತಮಿಳರ ಆ ಹಿಂದಿ ವಿರೋಧಿ ಚಳವಳಿಯಿಂದ ೧೯೬೭ ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ರಾಷ್ಟ್ರೀಯ ಪಕ್ಷ! ಕಾಂಗ್ರೆಸ್ ಇನ್ನೂ ಇದುವರೆವಿಗೆ ತಮಿಳು ಪರ ದ್ರಾವಿಡ ಪಕ್ಷಗಳನ್ನು ಸ್ವತಂತ್ರವಾಗಿ ಎದುರಿಸಿ-ಸೋಲಿಸಿ ರಾಜ್ಯದಲ್ಲಿ ಆಳ್ವಿಕೆ ಮಾಡಲಾಗಿಲ್ಲ. ಈ ಸ್ವಾಭಿಮಾನದ ಹೋರಾಟದ ಫಲವಾಗಿಯೇ ಅಲ್ಲಿಯ ಶಾಲೆಗಳಲ್ಲಿ ಹಿಂದಿಯನ್ನು ಕಲಿಸುವ-ಮಕ್ಕಳ ಮೇಲೆ ಮೂರು ಭಾಷೆ ಹೇರುವುದನ್ನು ತಡೆ ಹಿಡಿಯಲಾಗಿದೆ. ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಕೇವಲ ತಮಿಳು ಮಾತ್ರ ಕಲಿತು ಸಂಸತ್ತಿಗೆ ಹೋಗುವ ತಮಿಳುನಾಡಿನ ಸಂಸದರು ತಮ್ಮ ರಾಜ್ಯಕ್ಕೆ -ಜನತೆಗೆಎಲ್ಲಾ ರೀತಿಯಲ್ಲಿ ನ್ಯಾಯ ದೊರಕಿಸಿಕೊಡುವಲ್ಲಿ ಎಲ್ಲರಿಗಿಂತ ಮೂಂಚೂಣಿಯಲ್ಲಿದ್ದಾರೆ.

ಕಳೆದ ಜುಲೈ ೨೦, ೨೦೦೯ ರಂದು ದೆಹಲಿ ರಾಜ್ಯಸಭೆಯ ಕಲಾಪವೊಂದರಲ್ಲಿ ಹಿಂದಿ ಭಾಷಿಕ ಸಂಸದರು "ಹಿಂದಿ ಕಲಿತವ ಮಾತ್ರ ರಾಷ್ಟ್ರ ಪ್ರೇಮಿ" ಎಂಬ ಅತಿರೇಕದ ರಾಷ್ಟ್ರಪ್ರೇಮ ಮೆರೆದ ಮತ್ತೊಂದು ಘಟನೆಗೆ ಕಾರಣರಾಗಿದ್ದಾರೆ. ಇವರ ಉಪಟಳ ತಾಳಲಾರದೆ ಗಲಿಬಿಲಿಗೊಂಡು ತಬ್ಬಿಬ್ಬಾದ ನಮ್ಮ ಸಂಸದ ಜೈರಾಮ ರಮೇಶ್ ಅವರ ನೆರವಿಗೆ ಬಂದದ್ದು ತಮಿಳುನಾಡಿನ ದ್ರಾವಿಡ ಪಕ್ಷದ ಕೆ. ಮಲೈಚಾಮಿ. ಮಲೈಚಾಮಿ ಅಂದು ಸಂಸತ್ತಿನಲ್ಲಿ ತಮ್ಮ ಪ್ರಶ್ನೆ ಮತ್ತು ನಡವಳಿಕೆಯನ್ನು ಸಮರ್ಥಿಸಿಕೊಳ್ಳುತ್ತ ಹೇಳಿದ್ದು ಹಿಂದಿ ಭಾರತದ ಕೆಲವು ರಾಜ್ಯಗಳ ಭಾಷೆ ಮಾತ್ರ ಇದನ್ನು ನಮ್ಮ ಮೇಲೆ ಹೇರಬಹುದಾದರೆ ನಮ್ಮ ಭಾಷೆಗಳನ್ನು ಇವರ ಮೇಲೆ ನಾವ್ಯಾಕೆ ಹೇರಬಾರದು.

ಎಲ್ಲಿಯವರೆಗೆ ಹಿಂದಿ ಭಾಷಿಕ ಮಕ್ಕಳಿಗಿಲ್ಲದ ಮೂರು ಭಾಷೆ ಸೂತ್ರ ಕನ್ನಡದ ಮಕ್ಕಳಿಗೆ ಮಾತ್ರ ಹೊರೆಯಾಗಿರುವವರೆಗೆ, ಎಲ್ಲಿಯವರೆಗೆ ಒಪ್ಪುಕೂಟದ (Federal) ನಿಜವಾದ ಅರ್ಥ ಏನೆಂದು ಈ ಹಿಂದಿ ಭಾಷಿಕ ನಾಯಕರಿಗೆ ನಮ್ಮನ್ನಾಳುವವರು ಹೇಳಲು ಸಮರ್ಥರಾಗುವುದಿಲ್ಲವೋ, ಎಲ್ಲಿಯವರೆಗೆ ನಿಜವಾದ ಒಪ್ಪುಕೂಟವೆಂದರೆನೆಂದು ಅರ್ಥ ಮಾಡಿಕೊಂಡವರನ್ನು ಮತ್ತು ಅದಕ್ಕಾಗಿ ದುಡಿಯುವವರನ್ನು ಮಾತ್ರ ನಾವು ಆರಿಸಿ ನಮ್ಮ ಸಂಸತ್ತಿಗೆ ಕಳುಹಿಸುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಸುದ್ಧಿಗಳನ್ನು ನಾವು ಆಗಾಗ್ಗೆ ಕೇಳುತ್ತಲೆ ಇರಬೇಕಾಗುತ್ತದೆ.


*****

Monday, August 31, 2009

ಮಾಹಿತಿ ಹಕ್ಕು ಕಾಯಿದೆ ಮತ್ತು ಕನ್ನಡ ಅನುಷ್ಠಾನ

ದಟ್ಸ್ ಕನ್ನಡ.ಕಾಮ್ ನಲ್ಲಿ ಶ್ರೀ ಗುರುಪ್ರಸಾದ್ ಅವರ "ರಾಷ್ಟ್ರ ಭಾಷೆ ಹಿಂದಿಯೇ ಆಗಬೇಕೆ?" ಸಂವಾದ ಲೇಖನವನ್ನು ಎಲ್ಲರೂ ಗಮನಿಸಿರಬಹುದು.

ಈ ಲೇಖನದಲ್ಲಿ ಗಮನಸೆಳೆವ ಬಹುಮುಖ್ಯ ಅಂಶ

ಇತ್ತೀಚೆಗೆ ಮಾಹಿತಿ ಹಕ್ಕು ಕಾಯಿದೆ ಅನ್ವಯ ಕೇಂದ್ರ ಸರ್ಕಾರದ ಆಧೀನದಲ್ಲಿರುವ ಭಾರತೀಯ ಭಾಷಾ ಇಲಾಖೆಗೆ ಪತ್ರ ಬರೆದಾಗ ಅವರಿಂದ ಬಂದ ಉತ್ತರ "ನಮ್ಮ ದೇಶಕ್ಕೆ ರಾಷ್ಟ್ರ ಭಾಷೆ ಎಂಬುದಿಲ್ಲ, ಇರುವುದೇನಿದ್ದರೂ ಅಧಿಕೃತ ಭಾಷೆ" - ಹೀಗೆ ಮೇಲಿನ ವಿವರಣೆಯನ್ನು ಪುಷ್ಠೀಕರಿಸಿದರು. ಯಾರಿಗಾದರು ಇನ್ನೂ ಇದರ ಬಗ್ಗೆ ಸಂದೇಹವಿದ್ದರೆ RTI ಕೆಳಗೆ ಕೇಂದ್ರಕ್ಕೆ ಒಂದು ಪತ್ರ ಬರೆದು ತಿಳಿದುಕೊಳ್ಳಬಹುದಾಗಿದೆ

ಹೌದು, ಇಂದು ಮಾಹಿತಿ ಹಕ್ಕು ಕಾಯಿದೆ (RTI) ಪ್ರಬಲವಾದ 'ಅರಿವಿನ ಅಸ್ತ್ರ' ವಾಗಿ ಹೊರ ಹೊಮ್ಮಿರುವುದನ್ನು ನಾವೆಲ್ಲರೂ ಅರಿಯಬೇಕಿದೆ. ಇಂದು ಅನೇಕರು, ವೈಯುಕ್ತಿಕವಾಗಿ ಅಥವ ಸಂಘಟಿತರಾಗಿ ಈ ಕಾಯಿದೆಯನ್ನು ಚಲಾಯಿಸುತ್ತ ಸಮಾಜದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣರಾಗಿದ್ದಾರೆ. ನಾವು ಜವಾಬ್ದಾರಿಯುತ-ನೆಮ್ಮದಿ-ಹೊಂದಾಣಿಕೆ-ಹೊಣೆಗಾರಿಕೆ-ಗುಣಮಟ್ಟದ ಜೀವನ ನಡೆಸಲು ನಮಗೆ ಲಭ್ಯವಿರುವ ಮೂಲಭೂತ ಹಕ್ಕುಗಳಲ್ಲಿ ಈ ಮಾಹಿತಿ ಹಕ್ಕು ಸಹ ಒಂದಾಗಿದೆ. ನಮಗೆ ಲಭ್ಯವಾಗಬೇಕಾದ - ಮನವರಿಕೆಯಾಗಬೇಕಾದ ನಮ್ಮ ಹಕ್ಕಿನ ಬಗ್ಗೆ ಅನೇಕ ಗೊಂದಲಗಳಿರಬಹುದು. ಮಾಹಿತಿ ಹಕ್ಕು ಕಾಯಿದೆ ಈ ತೊಡಕುಗಳ ಪರಿಹಾರಕ್ಕೆ ಕ್ರಮಾವಳಿಯ ಹೆಚ್ಚೆಯಾಗಿದೆ.

ಹಿಂದಿ ನಮ್ಮ ರಾಷ್ಟ್ರ ಭಾಷೆಯೆ? ಎಂದು ನಮ್ಮಲ್ಲಿ ಅನೇಕರಿಗೆದುರಾಗುವ ಪ್ರಶ್ನೆಯಂತೆ, ಕರ್ನಾಟಕದಲ್ಲಿ ಗ್ರಾಹಕನಿಗೆ 'ಕನ್ನಡದಲ್ಲಿ ಗ್ರಾಹಕ ಸೇವೆ' ಅಡಿಯಲ್ಲಿ ನಮಗೆ,
ಬ್ಯಾಂಕು ಚೆಕ್ಕುಗಳನ್ನು ಕನ್ನಡದಲ್ಲಿ ಬರೆಯಬಹುದೆ?

ಬ್ಯಾಂಕ್ ಖಾತೆ ತೆರೆಯಲು - ಜೀವ ವಿಮೆ ಮಾಡಿಸುವಾಗ ಕನ್ನಡ ಅರ್ಜಿಯನ್ನು ಯಾಕೆ ವಿತರಿಸುತ್ತಿಲ್ಲ?

ಬೆಂಗಳೂರಿನ ಹೋಟಲ್ ತಿಂಡಿಪಟ್ಟಿ (ಮೆನು) ಕನ್ನಡದಲ್ಲಿ ಏಕಿಲ್ಲ?

ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಘೋಷಣೆಗಳು ಕನ್ನಡದಲ್ಲಿ ಏಕೆ ಮೂಡುತ್ತಿಲ್ಲ?

ಸದರಿ ವರ್ಷವನ್ನು ಕರ್ನಾಟಕ ಸರ್ಕಾರ ಕನ್ನಡ ಅನುಷ್ಠಾನ ವರ್ಷವಾಗಿ ಹೇಳಿದೆ. ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರು ನಗರ ಸಾರಿಗೆ ಯಾವ ಕಾರ್ಯಕ್ರಮ ಹಮ್ಮಿಕೊಂಡಿದೆ?

ಈ ಮೇಲಿನೆಲ್ಲವೂ ಅನುಷ್ಠಾನವಾಗುವುದಕ್ಕೆ ಯಾರು ಜವಾಬ್ದಾರರು? ಅವರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರ?


ಹೀಗೆ ಪಟ್ಟಿ ಮಾಡ ಬಹುದಾದ ನೂರಾರು ಪ್ರಶ್ನೆಗಳಿರಬಹುದು.

ಈ ಕಾಯಿದೆ ಉಪಯೋಗಿಸಿ, ಈ ಮೇಲಿನವು ಮತ್ತು ಹೀಗೆ ಕರ್ನಾಟಕದಲ್ಲಿ ಕನ್ನಡ ಅನುಷ್ಠಾನ ಕುರಿತಾಗಿ ಲಭ್ಯವಿರುವ {ಅನುಷ್ಠಾನಕ್ಕೊಳಗಾಗದ!}ಕಾನೂನು-ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆಗಳನ್ನು ಪ್ರಶ್ನಿಸಿ, ದೊರಕುವ ಉತ್ತರಗಳಿಂದ ಕ್ರಮಬದ್ಧವಾದ ಪರಿಹಾರ ರೂಪಿಸಿಕೊಳ್ಳಬಹುದಾಗಿದೆ.

ನಮ್ಮ ಅರಿವನ್ನು ಇಮ್ಮಡಿಗೊಳಿಸಲು, ನಮಗೆ ದೊರಕುತ್ತಿರುವ ಸೇವೆಯ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ನಮ್ಮ ಪ್ರಜಾಸತ್ತೆ ಒದಗಿಸಿರುವ ಈ ಅನುಕೂಲವನ್ನು ಚಲಾಯಿಸುವುದು ಸಾರ್ವಜನಿಕರಾದ ನಮ್ಮೆಲ್ಲರ ಕರ್ತವ್ಯವಾಗಿದೆ.


*****

Friday, August 21, 2009

ಬರಹ ಅಂತರಜಾಲ ನಿಘಂಟು

ಸ್ನೇಹಿತರೆ,

"ಗೌರಿ-ಗಣೇಶ ಹಬ್ಬದ ಶುಭಾಶಯಗಳು"

ಬರಹ ಅಂತರಜಾಲ ತಾಣದಲ್ಲಿ ಇದೀಗ ಪ್ರೊ. ಡಿ. ಎನ್. ಶಂಕರ ಭಟ್ ಅವರ "ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು" ನಿಘಂಟನ್ನು ಅಳವಡಿಸಲಾಗಿದೆ.

ಈ ನಿಘಂಟು ತಾಣದಲ್ಲಿ ಲಭ್ಯವಿರದ ಪದ/ನುಡಿಗಟ್ಟು ಗಳನ್ನು ಸೇರಿಸುವ ಅವಕಾಶ ಸಹ ಒದಗಿಸಲಾಗಿದೆ.

ಅಂತರ್ಜಾಲ ಮಾಧ್ಯಮದ ಮೂಲಕ ಲೇಖನಗಳನ್ನು ಬರೆಯುವ, ಮಿಂಚೆ ಕಳಿಸುವ, ಬ್ಲಾಗ್ ಮಾಡುವ ಎಲ್ಲ ರೀತಿಯ ಕನ್ನಡ ಬರಹಗಾರರಿಗೆ ಇದೊಂದು ಉಪಯುಕ್ತ ಸಾಧನವಾಗಿದೆ.


*****

Monday, August 17, 2009

ಕನ್ನಡಕ್ಕಾಗಿ ಮನವಿ ಸಲ್ಲಿಸಿ ಗಲಾಟೆಗಾರ! ಎನ್ನಿಸಿಕೊಂಡವ...

ಪರಿಚಿತರಾದ, ಹಾಸನದ ಹೆಚ್. ಎಸ್. ಅನಂತ ರಾಮಯ್ಯ ತಮ್ಮ ಮಗಳ ಮದುವೆಗೆ ಕರೆಯೋಲೆ ಕೊಡಲು ಬಂದಿದ್ದರು.

ಹಾಗೆ ಮಾತಾಡ್ತ, ನೆನ್ನೆಯ ದಿನ ಬೆಂಗಳೂರಿನ ಅಚ್ಚ ಕನ್ನಡ ಪ್ರದೇಶ! ಬಸವನಗುಡಿ, ಡಿವಿಜಿ ರಸ್ತೆಯ ಅಂಗಡಿಯೊಂದರಲ್ಲಿ (ಮಗಳ ಮದುವೆಗೆ ಬಟ್ಟೆ ಖರೀದಿಸಲು ಹೋಗಿದ್ದಾಗ) ಅವರು ಕನ್ನಡಕ್ಕಾಗಿ ಮನವಿ ಸಲ್ಲಿಸಿದ್ದಕ್ಕೆ, ಗಲಾಟೆಗಾರ! ಎನ್ನಿಸಿಕೊಂಡು ಬಂದ ವಿಷಯದ ಬಗ್ಗೆ ಪ್ರಸ್ತಾಪಿಸಿದರು. ಅವರು ಹೇಳಿದ್ದು .......
*************************
" ಸುಮಾರು ದಿವಸದ ನಂತ್ರ ಬೆಂಗಳೂರಲ್ಲಿ ಗ್ರಾಹಕನಾಗಿ ಒಂದು ಅಂಗಡಿಗೆ ಹೋದೆ. ಸಾವ್ರಾರು ರೂಪಾಯಿ ಬಟ್ಟೆ ವ್ಯಾಪಾರ ಮಾಡ್ದೆ. ಅಂಗ್ಡಿ ಅವ್ರು ನನ್ಹತ್ರ ದುಡ್ಡು ತೊಗೊಂಡು, ರಶೀದಿ ಜತೆ ಪ್ಲಾಸ್ಟಿಕ್ ಚೀಲದಲ್ಲಿ ನಾನು ಕೊಂಡ ಬಟ್ಟೆನ ಹಾಕಿ ಕೊಟ್ರು. ಪ್ಲಾಸ್ಟಿಕ್ ಚೀಲ ಗಮನಿಸಿದ ನಾನು, ಅಂಗ್ಡಿ ಯಜಮಾನಂಗೆ, ಏನ್ರಿ.. ಎಲ್ಲಾ ಸರಿ.. ನೀವು ಕೊಟ್ಟಿರೋ ಚೀಲದಲ್ಲಿ ಒಂದು ಕಡೆನಾದ್ರೂ ನಿಮ್ಮ ಅಂಗ್ಡಿ ವಿವರಾನ ಕನ್ನಡದಲ್ಲಿ ಬರ್ಸಿಲ್ವಲ್ರಿ. ಮತ್ತೆ ನೀವು ಕೊಟ್ಟಿರೋ ರಶೀದಿಲಿ ನೀವು ಯಾರೂಂತ ಕನ್ನಡದಲ್ಲಿ ಬರೆದಿಲ್ವಲ್ರಿ ಅಂತಂದೆ. ಅದಕ್ಕೆ ಯಜಮಾನನ ಜತೆ ಅಂಗ್ಡಿಲಿದ್ದವರೆಲ್ಲ ನನ್ನ ಜತೆ ವಿವಾದಕ್ಕೆ ಇಳಿದು ಬಿಟ್ರು. ನಾನು ಅವರ್ಗೆ ಹೇಳ್ದೆ. ನಿಮ್ಮ ವಿವಾದ ಸ್ವಲ್ಪ ಆಚೆಗಿಟ್ಟು ಯೋಚ್ನೆ ಮಾಡಿ. ನಾನು ಯಾರು ಗೊತ್ತ? ಒಬ್ಬ ಕನ್ನಡ ಗ್ರಾಹಕ. ನೀವು ನನ್ಗೆ ಕೊಟ್ಟ ಸೇವೆ ಸಮರ್ಪಕವಾಗಿಲ್ಲ - ಸರಿ ಮಾಡ್ಕೋಳ್ಳಿ ಅಂತ ಹೇಳೋ ಹಕ್ಕು ನನಗಿದೆ. ಕರ್ನಾಟಕದಲ್ಲಿ-ಬೆಂಗ್ಳೂರಲ್ಲಿ ನೀವು ಅಂಗ್ಡಿ ಇಟ್ಟಿರೋದ್ರಿಂದ ಕನ್ನಡದಲ್ಲಿಲ್ಲದ ನಿಮ್ಮ ಜಾಹೀರಾತು ಬಗ್ಗೆ ಹೇಳ್ದೆ. ಅದೇ ನಿಮ್ ಅಂಗ್ಡಿ ಚೆನ್ನೈ ನಲ್ಲಿದ್ದಿದ್ದ್ರೆ ಯಾಕೆ ನಿಮ್ಮ ಜಾಹೀರಾತು ತಮಿಳ್ನಲ್ಲಿಲ್ಲ ಅಂತ ಕೇಳ್ತಿದ್ನೆ ಹೊರ್ತು ಕನ್ನಡದಲ್ಲಿಲ್ವಲ್ಲ ಅಂತ ಪ್ರಸ್ನಿಸುತ್ತಿರಲಿಲ್ಲ. ಗ್ರಾಹಕನನ್ನು ಸಂತೃಪ್ತಿಗೊಳಿಸಲು ವ್ಯಾಪರಸ್ಥರು ಅಳವಡಿಸಿಕೊಳ್ಳಬೇಕಾದ ಧರ್ಮ ಇದು. ನೋಡಿದ್ರೆ ನೀವು ಮೂಲ ಕನ್ನಡದವರಲ್ಲದಂತೆ ಕಾಣಿಸ್ತಿದೆ. ನೀವು ಇಲ್ಲಿ ಅಂಗ್ಡಿ ವ್ಯಾಪಾರ ಶುರು ಮಾಡಿದ್ಮೇಲೆ ನಿಮ್ಮ ಮೊದಲ್ನೆ ಕೆಲ್ಸ ನೀವು ಕನ್ನಡತನ ಬೆಳೆಸ್ಕೊಂಡು, ಕನ್ನಡದವ್ರಾಗಿ ಕನ್ನಡಿಗರಿಗೆ ಹತ್ತಿರವಾಗ್ಬೇಕಾಗಿರೋದು. ನಿಮ್ಮ ನಿಲುವು ಹೀಗೆ ಇದ್ರೆ, ಮುಂದಿನ್ ಸಲ ನಿಮ್ಮ ಅಂಗ್ಡಿಗೆ ಬರ್ದೆ ಇರೋದು ಆಮೇಲಿನ್ ಮಾತು ಈಗ ನಾನು ಕೊಂಡ್ಕೊಂಡಿರೋದನ್ನೂ ನೀವು ವಾಪಸ್ ತಗೋಳೊ ಹಾಗೆ ಮಾಡ್ಕೋಬೇಡಿ ಅಂದೆ. ಕೊನೆಗೂ ಅವರು ಮುಂದಿನ ಸಲ್ದೋಳಗೆ ಸರಿ ಮಾಡ್ಕೋತಿವಿ ಅಂತ ಹೇಳಿದ್ದಕ್ಕೆ ಅಲ್ಲಿಂದ್ ಹೊರ್ಟೆ.

ವಿಪರ್ಯಾಸ ನೋಡ್ರಿ, ನನ್ನ ಹಕ್ಕಿನ ಬಗ್ಗೆ ಮಾತಾಡ್ವಾಗ, ಪಕ್ಕದಲ್ಲಿದ್ದ ಕನ್ನಡದವ್ರೆ ಒಬ್ರು ಯಾಕ್ರಿ ಸುಮ್ನೆ ಗಲಾಟೆ ಅಂದ್ರು. ನಾನು ಅವ್ರಿಗೆ ಇದು ನನ್ನ ಮತ್ತು ಕನ್ನಡದ ವೈಯುಕ್ತಿಕ ಹಕ್ಕಿನ ಪ್ರಶ್ನೆ ಎಂದು ಸುಮ್ನೆ ಮಾಡಬೇಕಾಯ್ತು. ಬೆಂಗ್ಳೂರಲ್ಲಿ ಕನ್ನಡಿಗರು ತಮ್ಮ ಹಕ್ಕುಗಳನ್ನು ಚಲಾಯಿಸೋದು, ಹಕ್ಕುಗಳ ಬಗ್ಗೆ ಪ್ರಶ್ನಿಸೋದೆ ಮರೆತು ಬಿಟ್ಟಿದ್ದಾರೆ. ನಾಳೆ ಇದು ನಮ್ಮ ಸಣ್ಣ ಊರುಗಳಿಗೂ ಹಬ್ಬಿ ಬಿಡುತ್ತೆ ಇವರಿಗೆಲ್ಲ ಯಾರು ಹೇಳೋರು"
*************************
ಜಾಗೃತ ಕನ್ನಡ ಗ್ರಾಹಕನ ಹಕ್ಕುಗಳನ್ನ ನೆನಪಿಸೋಣ ಅಂತ ಇದನ್ನು ತಿಳಿಸ್ಬೇಕು ಅನ್ನಿಸ್ತು. ಗ್ರಾಹಕನ ಹಕ್ಕುನ್ನು ನಾವು ಕೊಳ್ಳುವ ವಸ್ತುವಿನ ಗುಣಮಟ್ಟ, ತೂಕ, ಪ್ರಮಾಣ, ಅಳತೆ, ಮುಖಬೆಲೆ ಇವಕ್ಕೆ ಮಾತ್ರ ಸೀಮಿತ ಮಾಡಿ ವಸ್ತುವಿನ ಮಾಹಿತಿ ಮತ್ತು ಮಾಹಿತಿಯ ಭಾಷೆ ಬಗ್ಗೆ ಉದಾಸೀನ ಮಾಡಿರುವುದು ಸರಿಯಲ್ಲ. ನಾವು ಇದನ್ನು ಪ್ರಶ್ನಿಸದಿರುವುದರಿಂದಲೇ ಅನಂತ ರಾಮಯ್ಯನಂತಹವರು ಹಾಸನದಿಂದ ಬೆಂಗಳೂರಿಗೆ ಬಂದು ತಮ್ಮ ಹಕ್ಕಿನ ಬಗ್ಗೆ ತಿಳಿಸಿದಾಗ, ಗಲಾಟೆಗಾರ! ಎಂದು ಅನ್ನಿಸಿಕೊಂಡಿರುವುದು.

ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಸಿಗಬೇಕಾದ್ದು ನಮ್ಮ ಹಕ್ಕು. ಕನ್ನಡದಲ್ಲಿ ಗ್ರಾಹಕ-ಸೇವೆಗೆ ಒತ್ತಾಯಿಸಬೇಕಾದ್ದು, ಜನರಲ್ಲಿ ಈ ವಿಚಾರದ ಬಗ್ಗೆ ತಿಳಿಸಬೇಕಾದು ನಮ್ಮ ಕರ್ತವ್ಯ. ಇನ್ನೇನು ಬರೋ ಭಾನುವಾರ ಗಣೇಷನ ಹಬ್ಬ ಆಚರಿಸೋಕ್ಕೆ ನಾವು ತಯಾರಾಗ್ತಿದೀವಿ. ಹೊಸ ಬಟ್ಟೆ, ಇತರೆ ಸಾಮಾನು-ಸರಂಜಾಮು ಕೊಳ್ಳೋಕೆ ಎಲ್ಲಾ ರೀತಿಯ ಅಂಗ್ಡೀಗೂ ಹೋಗಿ ಬಂದೇ ಬರ್ತೀವಿ. ಹೀಗೆ ಹೋದಲ್ಲೆಲ್ಲ ಕನ್ನಡದಲ್ಲಿ ಗ್ರಾಹಕ ಸೇವೆಗೆ (ಅವರು ಕೊಡೊ ಪ್ಲಾಸ್ಟಿಕ್ - ಕಾಗದದ ಚೀಲ, ರಶೀತಿ ಆಗಿರ್ಬಹುದು, ಹೊರಡಿಸಿರೋ ಜಾಹೀರಾತು, ಹಾಕಿಸಿರೋ ನಾಮಫಲಕ ಇರಬಹುದು ಎಲ್ಲೆಡೆ ಕನ್ನಡ ಬಳಸಿ ಎಂದು) ಒತ್ತಾಯ ಮಾಡಬೇಕಿದೆ.

ಅಂದ ಹಾಗೆ ಈ ಅನಂತ ರಾಮಯ್ಯನವರಿಗೆ ಈಗ ಸುಮಾರು ೮೦ ವರ್ಷ. 'ಸಾವಿತ್ರಿ ತನಯ' ಎಂಬ ಹೆಸರಿನಲ್ಲಿ ಇವರು ಅನೇಕ ಸಾಹಿತ್ಯ ಲೇಖನಗಳನ್ನು ಬರೆದಿದ್ದಾರೆ. ೧೯೬೦ ರ ದಶಕದ ಅನಕೃ ನೇತೃತ್ವದ ಕನ್ನಡ ಚಳವಳಿಯಲ್ಲಿ ಸಹ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು.

ನಮಗೆ ಕನ್ನಡವನ್ನು ಹೀಗೆಯೂ ಪ್ರಸಾರ ಮಾಡಬಹುದು ಎಂದು ನೆನಪಿಸಿದ್ದಕ್ಕೆ ಅವರಿಗೆ ನಮನಗಳು.


*****

Saturday, August 15, 2009

ಕನ್ನಡತನ ಮತ್ತು ರಾಷ್ಟ್ರೀಯತೆ

ಇವತ್ತು ೬೩ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ರಾಷ್ಟ್ರೀಯತೆ ಕುರಿತಾಗಿ ಕನ್ನಡದ ಇಬ್ಬರು ಹಿರಿಯ ಚೇತನಗಳ ವ್ಯಾಖ್ಯಾನಗಳು ನೆನಪಿಗೆ ಬಂದವು.

-------------------------

  • "ಬಲಿಷ್ಠ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ ತಮ್ಮ ಪ್ರಾಂತೀಯ ವೈಶಿಷ್ಟ್ಯವನ್ನುಳಿಸಿಕೊಂಡು ಏಕತ್ರವಾದ ರಾಷ್ಟ್ರೀಯ ಭಾವನೆಯನ್ನು ಬೆಳೆಸಿಕೊಳ್ಳಬೇಕು. ದುರ್ಬಲ ಪ್ರಾಂತ್ಯ ಯಾವಾಗಲೂ ರಾಷ್ಟ್ರೀಯತೆಯ ಶತ್ರು ವೆಂಬುದನ್ನು ಮರೆಯಬಾರದು. ಈ ದೃಷ್ಟಿಯಿಂದಲೇ ನಾವು ಕನ್ನಡ-ಕನ್ನಡ ಎಂದು ಹಲಬುವುದು. ಕೆಲವರ ಕಣ್ಣಿಗೆ ನಾವು ಸಂಕುಚಿತ ಮನೋಭಾವದವರಾಗಿ ಕಂಡುಬರಬಹುದು. ವಿಧಿಯಿಲ್ಲ, ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ"

ಅ.ನ.ಕೃಷ್ಣರಾಯ (ಕೃತಿ: ನನ್ನನ್ನು ನಾನೆ ಕಂಡೆ, ೧೯೪೪)

-------------------------

  • ಪ್ರಾಂತೀಯತೆ ಎಂದರೆ ಪ್ರಾಂತದ ದುರಭಿಮಾನವಲ್ಲ. ಪ್ರಾಂತೀಯತೆಯೇ ಸರ್ವಸ್ವವಲ್ಲವೆಂಬುದು ಕರ್ನಾಟಕರಿಗೆ ಗೊತ್ತಿದೆ. ಅನ್ಯರು ಕಲಿಸುವದು ಬೇಡ. ಕರ್ನಾಟಕರು ಇಂದಿನ ವರೆಗೆ ಎಂದೂ ಅಧಿಕೃತವಾಗಿ ರಾಷ್ಟ್ರೀಯತ್ವಕ್ಕೆ ವಿರುದ್ಧವಾಗಿ ಹೋಗಿಲ್ಲ, ಹೋಗುವುದಿಲ್ಲ. ಪ್ರಾಂತೀಯತೆಯನ್ನು ಜಾತೀಯತೆಗೆ ಹೋಲಿಸುವುದು ತಪ್ಪು.ಕರ್ನಾಟಕಕ್ಕೆ ಭಾರತದಂತೆ ಸ್ವಾಧೀನ ಕರ್ತೃತ್ವವು ಬೇಡ. ಭಾರತಾಧೀನ ಕರ್ತೃತ್ವ ಬೇಕಿದೆ. ಸರ್ವತಂತ್ರತ್ವವು ಬೇಡ. ದತ್ತ ಸ್ವಾತಂತ್ರ್ಯವು ಬೇಕು. ನಾನು ಮೊದಲು ಭಾರತೀಯನು, ಆನಂತರ ಕರ್ನಾಟಕನು ಎಂಬುದು ಸರಿಯಲ್ಲ. ಇವುಗಳಲ್ಲಿ ಮೊದಲು, ಹಿಂದಗಡೆಗಳಿಲ್ಲ. ಎರಡೂ ಭಾವನೆಗಳು ಪರಸ್ಪರ ವಿರುದ್ಧಗಳಲ್ಲ. ವೃಷ್ಟಿತ್ವವೂ ಸಮಷ್ಟಿತ್ವವೂ ಏಕಸಮಯಾವಛೇದದಿಂದ ಬೇಕು.

ಆಲೂರು ವೆಂಕಟರಾಯರು ( ಕೃತಿ:ಕರ್ನಾಟಕತ್ವದ ವಿಕಾಸ)

-------------------------

ಎಲ್ಲರಿಗೂ ೬೩ನೇ "ಬಿಡುಗಡೆ ಹಬ್ಬದ" ಶುಭಾಶಯಗಳು





*****

Friday, August 14, 2009

ಗಂಟಲು ಸತ್ತ ಬುದ್ಧಿವಂತರ ಮಾರ್ಗ ಮತ್ತು ದರ್ಶನ ಬೇಕೆ?


ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಷರತ್ತು ಬದ್ಧವಾಗಿ ವಿರೋಧಿಸಿ-ಪ್ರತಿಭಟಿಸಿದ ಕನ್ನಡ ಪರ ಸಂಘಟನೆಗಳ ನಿಲುವನ್ನು ಕೆಲವರು ಇನ್ನೂ ಅವಹೇಳನ ಮಾಡುವುದನ್ನು ಮುಂದುವರೆಸಿದ್ದಾರೆ. ಶಿವಮೊಗ್ಗದ ಡಿ.ಎಸ್. ನಾಗಭೂಷಣ ಎಂಬುವವರು ಕನ್ನಡ ಪರ ಸಂಘಟನೆಗಳನ್ನು ದಿನಾಂಕ ೧೧ ನೇ ಆಗಸ್ಟ್ ೨೦೦೯ ರ ಪ್ರಜಾವಾಣಿ - ವಾಚಕರ ವಾಣಿ ವಿಭಾಗದಲ್ಲಿ "ಗಲಾಟೆ ಸಂಘಟನೆಗಳು"! ಎಂದು ನಾಮಕರಣ ಮಾಡಿದ್ದಾರೆ.

ನಾಗಭೂಷಣ ಅವರ ಹೇಳಿಕೆ ಅನುಚಿತವಾದದ್ದು ಎಂಬುದಾಗಿ ಪ್ರಜಾವಾಣಿ-ವಾಚಕರವಾಣಿಯಲ್ಲಿ ಈ ದಿನ ಪ್ರಕಟವಾಗಿರುವ ಒಂದು ಪತ್ರ ! ನಿಮ್ಮೆಲ್ಲರ ಗಮನಕ್ಕೆ.

ನಾಗಭೂಷಣ ಅವರ ಈ ರೀತಿಯ ಅಭಿಪ್ರಾಯವುಳ್ಳ, "ಮಾರ್ಗ ಮತ್ತು ದರ್ಶನ"! ನಮಗೆ ಅವಶ್ಯಕತೆಯಿಲ್ಲ ಎಂದು ಚಂಪಾ ಅವರು ನೀಡಿರುವ ಚುಚ್ಚುಮದ್ದನ್ನು ಒದುಗರೆಲ್ಲಾ ಗಮನಿಸಬೇಕಿದೆ.



*****

Wednesday, August 12, 2009

ತುಟಿ ಬಿಚ್ಚುವುದಿಲ್ಲ ಮತ್ತು ಶಾಯಿ ಖರ್ಚು ಮಾಡುವುದಿಲ್ಲ!


ಬಹುಜನ ಕನ್ನಡಪರ ಸಂಘಟನೆಗಳ ಷರತ್ತು ಬದ್ಧ ವಿರೋಧದ ನಡುವೆಯೂ, ಕರ್ನಾಟಕ ಸರ್ಕಾರ ತಾನೆ ವಿಶೇಷವಾಗಿ "ಸಜ್ಜು ಪಡಿಸಿದ ಎಲ್ಲ ವರ್ಗಗಳ ವಿಶೇಷ ಕಾರ್ಯಪಡೆ ದಳ"! ಗಳ ಬಲದಿಂದ ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸಿದೆ.

ಕನ್ನಡಪರ ಸಂಘಟನೆಗಳ ಮುಖಂಡರನ್ನು ಪ್ರತಿಮೆ ಅನಾವರಣಕ್ಕೆ ಎರಡು ದಿನಗಳಿಗೆ ಮುಂಚಿತವಾಗಿ ಬಂಧಿಸಿ, ಜೈಲಿನಲ್ಲಿರಿಸಿ ಅವರು ನಡೆಸಲು ಯೋಜಿಸಿದ್ದ ಪ್ರತಿಭಟನೆಗೆ ಅವಕಾಶವಾಗದಂತೆ ತಡೆಹಿಡಿಯಲಾಯಿತು. ಈ ಸಮಯದವೆರೆಗೂ ಅವರನ್ನು ಇನ್ನೂ ಬಿಡುಗಡೆಗೊಳಿಸಿಲ್ಲ ಎಂಬ ಸುದ್ಧಿ ಎಲ್ಲೆಡೆ ಕೇಳಿ ಬರುತ್ತಿದೆ. ಆದರೂ ನಾಳೆ ಚೆನ್ನೈ ನಗರದಲ್ಲಿ ಆಯೋಜಿಸಿರುವ ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಎಲ್ಲಾ ಕನ್ನಡ ಪರ ಹೋರಾಟಗಾರರು-ಸಂಘಟನೆಗಳು ಭಾಗವಹಿಸಬೇಕು ಎಂದು ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಆಹ್ವಾನ ನೀಡಿದ್ದಾರೆ!

ಹಳದಿ-ಕೆಂಪು ಶಾಲು ಹೊದ್ದು ಬರುವವರನ್ನು ಅಸೂಯೆಯವ, ಸಂಕುಚಿತದವ ಇನ್ನಿತ್ಯಾದಿಯಾಗಿ ಬರೆದು-ಜರೆದು-ಕರೆದು ಅವರನ್ನು ಜೈಲು ಕಂಬಿ ಎಣಿಸಲು ರವಾನಿಸಿದ ನಮ್ಮ ಸರ್ಕಾರ ತಿರುವಳ್ಳುವರ್ ಪ್ರತಿಮೆ ಅನಾವರಣದ ಸಮಯದಲ್ಲಿ ಕಂಡು ಬಂದ ಒಂದು ವಿಷಯವನ್ನು ಕಂಡೂ ಕಾಣದಂತೆ ಇದ್ದುದು ಏಕೆ ಎಂದು ಮಾತ್ರ ಆರ್ಥವಾಗಲಿಲ್ಲ?

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆಗೈದ, ಇತ್ತೀಚೆಗೆ ಶ್ರೀಲಂಕಾ ಸರ್ಕಾರದ ಕಾರ್ಯಾಚರಣೆಯಲ್ಲಿ ಮರಣ ಹೊಂದಿದ ಮತ್ತು ನಿಷೇಧವಾದ ಸಂಘಟನೆಯೊಂದರ ನಾಯಕನಾದ ಪ್ರಭಾಕರನ್ ಭಾವಚಿತ್ರವನ್ನು ಪ್ರದರ್ಶಿಸಿಕೊಂಡು ಬಂದ ಕೆಲವರು ತಿರುವಳ್ಳುವರ್ ಪ್ರತಿಮೆ ಅನಾವಾರಣದ ಸಮಯದಲ್ಲಿ ಹಾಜರಿದ್ದುದು ಕರ್ನಾಟಕ ಸರ್ಕಾರಕ್ಕಾಗಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕಾಗಿಯೆ ಹುಟ್ಟಿಕೊಂಡ "ಸಜ್ಜು ಪಡಿಸಿದ ಎಲ್ಲ ವರ್ಗಗಳ ವಿಶೇಷ ಕಾರ್ಯಪಡೆ ದಳ" ದ ಗಮನಕ್ಕೂ ಬಂದಂತಿಲ್ಲ ಏಕೆಂದರೆ ಈ ವಿಷಯವಾಗಿ ಇದುವರೆಗೂ ಇವರ್ಯಾರು ಇನ್ನೂ ತುಟಿ ಬಿಚ್ಚಲ್ಲ ಮತ್ತು ಮತ್ತು ಶಾಯಿ ಖರ್ಚು ಮಾಡಿಲ್ಲ!
ನಾಳೆ ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಅನಾವರಣಗೊಳ್ಳಲಿರುವ ಕಾರ್ಯಕ್ರಮಕ್ಕೆ ಯಾರಾದ್ರೂ ಹೋಗೋರಿದ್ರೆ ಬರೀ ಕೈಲಿ ಹೋಗಿ ಬನ್ನಿ! ಸುಮ್ನೆ ಅಣ್ಣಾವೃ-ಆಲೂರು-ಗೊರುರು-ಅನಕೃ ಫೋಟೋ ಇಟ್ಕೊಂಡೋ ಅವರ ಬಗ್ಗೆ ಘೋಷಣೆ ಕೂಗಿನೋ, ನಮ್ಮವರ ಬಾಯಲ್ಲೇ ಮುಠ್ಠಾಳ ಅನ್ನಿಸಿಕೊಂಡು ಬಂದೀರಿ ಜೋಕೆ!

Saturday, August 8, 2009

ಕರ್ನಾಟಕದಲ್ಲಿ ಹೊಸ ದ್ವಿಭಾಷ ಸೂತ್ರ!

ಆಗಸ್ಟ್ ೯, ೨೦೦೯ ರ ಬೆಂಗಳೂರು ಹಲಸೂರು ಕೆರೆ ದಂಡೆಯಲ್ಲಿ, ತಿರುವಳ್ಳುವರ್ ಪ್ರತಿಮೆ ಅನಾವರಣ ಪ್ರಕ್ರಿಯೆಯ, ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಸಹಮತ ತೋರಿಸಿರುವ ನಾಡಿನ ಹಿತಚಿಂತಕ ಕವಿಗಳು! ಸಾಹಿತಿಗಳು! ಪತ್ರಿಕೆಗಳು, ನ್ಯಾಯವಾದಿಗಳು ಹಾಗು ಇತರರ ತಂಡ ಕನ್ನಡದ ಒಂದು ಹೊಸ ಶಕ್ತಿ ಯಾಗಿ ಉದಯಿಸಿದೆ! ಇವರ ಜತೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಹ ಕೈ ಜೋಡಿಸಿರುವುದು ಇವರಿಗೆ ನೈತಿಕ ಬೆಂಬಲ ಒದಗಿಸಿದೆ!

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸರ್ಕಾರದ ಆಡಳಿತದ ಎಲ್ಲಾ ಆಯಾಮ - ವಿಭಾಗಗಳಲ್ಲಿ ಕನ್ನಡ, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ, ಜಾಹೀರಾತುಗಳಲ್ಲಿ ಕನ್ನಡ, ಇಲ್ಲಿನ ಎಲ್ಲಾ ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಬೇಕು, ಹೀಗೆ ಇವುಗಳ ಅನುಷ್ಠಾನದ ಬಗ್ಗೆ ಪುಂಖಾನುಪುಂಖವಾಗಿ ಹೇಳಿಕೆ ನೀಡುತ್ತ, ಪತ್ರಿಕೆಗಳ ಮೂಲಕ ವರದಿ ದಾಖಲಿಸುತ್ತ ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕನ್ನಡ ಜನತೆಯಲ್ಲಿ ಅವರ ಹಕ್ಕುಗಳ ಬಗ್ಗೆ ಆಶಾಭಾವನೆ ಮೂಡಿಸಿದ್ದರು. ಬಹುಷ: ಈ ಎಲ್ಲಾ ಕೆಲಸಗಳು ಈಗಾಗಲೆ ಯಶಸ್ವಿಯಾಗಿ ಅನುಷ್ಠಾನಗೊಂಡಿರಬಹುದು! ಈ ಹಿನ್ನಲೆಯಲ್ಲಿ ಇವರು ಉದಯಿಸಿರುವ ಈ ಹೊಸ ಕನ್ನಡ ಶಕ್ತಿಯನ್ನು! ಬೆಂಬಲಿಸುತ್ತ ಕರ್ನಾಟಕದಲ್ಲಿ ಹೊಸ ದ್ವಿಭಾಷಾ ಸೂತ್ರಕ್ಕೆ ನಾಂದಿ ಹಾಡಲು ಮುಂದಾಗಿರುವವರಿಗೆ ಸಹಮತಿ ತೋರಿಸಿದ್ದಾರೆ!

'ಕಾವೇರಿ'ರುವ ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರ ಕನ್ನಡ-ತಮಿಳಿನಲ್ಲಿ ಮಾತ್ರ ಆಹ್ವಾನ ಪತ್ರಿಕೆ ಮುದ್ರಿಸಿದೆ. ಕನ್ನಡದ ಜತೆಗೆ-ತಮಿಳನ್ನೊಳಗೊಂಡ ಈ ಹೊಸ ದ್ವಿಭಾಷ ಸೂತ್ರ ಏತಕ್ಕಾಗಿ ಎಂದು ನಮ್ಮ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಶರು ತಮ್ಮ ಸರ್ಕಾರದ ವತಿಯಿಂದ ನಡೆದಿರುವ ಈ ಉದ್ದೇಶಿತ! ಅಚಾತುರ್ಯದ ಬಗ್ಗೆ ತುಟಿಕ್-ಪಿಟಕ್ ಎನ್ನದೆ ಜಾಣ ಮೌನ ವಹಿಸಿರುವುದು ಈ ಕಾರಣಕ್ಕಾಗಿಯೇ ಇರಬಹುದೇನೋ?

*****

ಕನ್ನಡ ಅನುಷ್ಠಾನದ ಯಾವುದೇ ಕೆಲಸಗಳಿಗೆ ಅದೆಂತಹುದೆ ಅಡ್ಡಿ-ಆತಂಕ ಒದಗಿದರೂ, ಕನ್ನಡದ ವಿರುದ್ಧವಾಗಿ ಯಾವುದೇ ವಿರೋಧಿ ಶಕ್ತಿ ಎದುರಾಗಿ ನಿಂತರೂ, ರಾಜಕೀಯ-ರಾಜೀರಹಿತವಾಗಿ ಕನ್ನಡ ಅಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇವರುಗಳಿಗೆ ಸಿಂಹಸ್ವಪ್ನವಾಗಿರುತ್ತಾರೆ ಎಂಬ ತಿಳುವಳಿಕೆ ಕನ್ನಡಿಗರ ನಂಬಿಕೆಯಾಗಿತ್ತು. ಆದರೆ ಇಂದು ಇವರು ತಿರುವಳ್ಳುವರ್ ಪ್ರತಿಮೆ ಅನಾವರಣ ವಿಷಯ ಕುರಿತಾದ ವಿಷಯದಲ್ಲಿ ತೆಗೆದುಕೊಂಡಿರುವ ನಿಲವು ಮುಂದಿನ ಇವರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಡೆಯಿಂದಾಗಬೇಕಾದ ಕನ್ನಡ ಕೆಲಸಗಳ ಅನುಷ್ಠಾನದ ಬಗ್ಗೆ ಅನುಮಾನ ಹುಟ್ಟು ಹಾಕಿದೆ.

ಕನ್ನಡ ಆಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿರುವ ಉದ್ದೇಶವೇನು ಎಂಬುದನ್ನು ತಿಳಿಯಲು ಒಮ್ಮೆ ಎಲ್ಲರೂ ಈ ತಾಣವನ್ನು ವೀಕ್ಷಿಸಬೇಕಿದೆ. ವಿಪರ್ಯಾಸವೆಂದರೆ ಈ ತಾಣವನ್ನು ಇದರ ಈಗಿನ ಅಧ್ಯಕ್ಷರು ಒಮ್ಮೆಯಾದರೂ ಗಮನಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಕಳೆದ ಹಲವು ವರ್ಷಗಳ, ಈ ಕಚೇರಿಯ ಹೊಸ ವಿದ್ಯಮಾನಗಳ ಅದ್ಯತನ ಇದರಲ್ಲಿ ಸೇರ್ಪಡೆಯಾಗಿಲ್ಲ. ಹೊಸ ಕನ್ನಡ ಶಕ್ತಿಯೊಡಗೂಡಿ! ಅವರ ನಿಲುವುಗಳಿಗೆ ಬದ್ಧರಾಗುವಲ್ಲಿ ಮೊದಲಿಗರಾಗಿರುವ ಇವರಿಗೆ, ಇದರ ಬಗ್ಗೆ ಗಮನ ಹರಿಸುವ ಸಮಯವೆಲ್ಲಿದೆ ಅಲ್ಲವೇ?



*****

Wednesday, August 5, 2009

ಇದು ಕರ್ನಾಟಕದ ಶೇಕಡ ೯೫ ರಷ್ಟು ಜನರ ಅಭಿಪ್ರಾಯವೆ?

ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಬೆಂಗಳೂರು ನಿವಾಸಕ್ಕೆ ತೆರಳಿ ಹಲಸೂರು ಕೆರೆಯಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಆಹ್ವಾನ ನೀಡಿ ಬಂದಿದ್ದಾರೆ.

ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ನಮ್ಮ ಸಾಹಿತಿ ಬುದ್ದಿ ಜೀವಿಗಳು! ಕನ್ನಡ ಪರ ಹಿತಚಿಂತಕರು! ಕರ್ನಾಟಕದ ಬಹುತೇಕ ಎಲ್ಲಾ ಕನ್ನಡ ಮಾದ್ಯಮಗಳಲ್ಲಿ ದುಡಿಯುತ್ತಿರುವವರು, ನ್ಯಾಯವಾದಿಗಳು ಹೀಗೆ ಈ ವರ್ಗದವರ ಸರ್ಕಾರದ ಪರವಾದ 'ವೈಯುಕ್ತಿಕ' ಅಭಿಪ್ರಾಯಗಳು, ಬೆಂಬಲವನ್ನು ಪ್ರತಿಮೆ ಅನಾವರಣಕ್ಕೆ ಶೇಕಡ ೯೫ ರಷ್ಟು ಬಲ ಬಂದಿದೆ (ಕರ್ನಾಟಕದ ಜನಸಂಖ್ಯೆಯಲ್ಲಿ ಶೇಕಡ ೯೫ ರಷ್ಟು ಜನರ ಅಭಿಪ್ರಾಯ ಇದೆ ಆಗಿದೆ ಎಂಬ ಅರ್ಥದಲ್ಲಿ ) ಅಂತ ನಮ್ಮ ಮಾನ್ಯ ಗೃಹಮಂತ್ರಿಗಳು ಹೇಳಿಕೆ ಇತ್ತಿದ್ದಾರೆ. ಹಾಗೆಯೆ ಕನ್ನಡ ಪರ ಸಂಘಟನೆಗಳ ಷರತ್ತುಗಳನ್ನು ಕಣ್ಣು ಬಿಟ್ಟು ಸಹ ನೋಡದೆ. ಬಹುಜನ ಬೆಂಬಲಿತ ಕನ್ನಡಪರ ಸಂಘಟನೆಗಳ ಹೇಳಿಕೆಗಳಿಗೆ ಪ್ರಜಾಪ್ರಭುತ್ವದಲ್ಲಿ ಬೆಲೆಯೆ ಇಲ್ಲದಂತೆ ಮಾಡಿದ್ದಾರೆ.

ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಆರೋಗ್ಯ ತಪಾಸಣೆಗೆ ಚೆನ್ನೈಗೆ ಹೋಗಿದ್ದಾಗ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರನ್ನು ಬೇಟಿ ಮಾಡಬೇಕಾಗಿದ್ದ ಅಗತ್ಯವೇನಿತ್ತು ಎಂಬುದೇ ಪ್ರಶ್ನೆಯಾಗಿದೆ. ಹಾಗೆಯೆ ಇಲ್ಲಿಗೆ ವಿಶ್ರಾಂತಿಗೆ, ದೇವರ ದರ್ಶನಕ್ಕೆ, ಇನ್ಯಾವುದಕ್ಕೊ ಆಗಾಗ ಆಗಮಿಸುವ ತಮಿಳುನಾಡು ಮುಖ್ಯಮಂತ್ರಿಗಳು(ಈಗ ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕರುಣಾನಿಧಿಯನ್ನು ಒಳಗೊಂಡಂತೆ) ಸಮಯದಲ್ಲಿ ಈ ರೀತಿಯ ವಿನಿಮಯಗಳು ನಡೆದದ್ದು ಯಾರಾದ್ರು ನೋಡಿದ್ದೀರ?.

ನೆನ್ನೆ ಯಡಿಯೂರಪ್ಪನವರು ಕರುಣಾನಿಧಿ ಮನೆಗೆ ತೆರಳಿ ಹಿಂತಿರುಗುತ್ತಿದ್ದ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತ " ತಿರುವಳ್ಳುವರ್ ವಿಷಯ ಹೊರತಾಗಿ ಅಲ್ಲಿ ಬೇರೆ ಯಾವ ಪ್ರಸ್ತಾಪ ಮಾಡಲಿಲ್ಲ. ಪಾಪ ಅವರು ವಿಶ್ರಾಂತಿಗಾಗಿ ಇಲ್ಲಿಗೆ ಆಗಮಿಸಿದ್ದಾರೆ ಈ ಸಮಯದಲ್ಲಿ ಅವರೊಡನೆ ಬೇರೆ ವಿಷಯ ಚರ್ಚಿಸುವುದು ಸರಿಯೆ" ಎಂಬಂತೆ ಉತ್ತರಿಸಿದರು. ತಾನು ಚೆನ್ನೈಗೆ ಹೋಗಿರುವುದು ಆರೋಗ್ಯ ತಪಾಸಣೆಗೆ ಮಾತ್ರ, ಅಲ್ಲಿ ಕರುಣಾನಿಧಿಯನ್ನು ಭೇಟಿ ಮಾಡುವ, ರಾಜಕೀಯ ವಿಷಯ ಚರ್ಚಿಸುವ ಅಗತ್ಯವಿರಲಿಲ್ಲ ಎಂದು ನಮ್ಮ ಯಡಿಯೂರಪ್ಪನವರಿಗೆ ಅಂದು ಹೊಳೆದಿರಲಿಲ್ಲವೆ? ಮತ್ತು ಕರ್ನಾಟಕ-ತಮಿಳುನಾಡಿಗೆ ಸಂಬಂಧಿಸಿದಂತೆ ಬಗೆಹರಿಸಿಕೊಳ್ಳಲು ಇರುವ ಹಲವಾರು ವಿಷಯಗಳನ್ನು ಬದಿಗಿತ್ತು ಈ ತಿರುವಳ್ಳುವರ್ ವಿಷಯವನ್ನು ಮಾತ್ರ ಏಕೆ ಪ್ರಸ್ತಾಪ ಮಾಡಿದರು? ಈ ಪ್ರಶ್ನೆಗಳಿಗೆ ಅಂದು ಅನಾರೋಗ್ಯದಿಂದ ಬಳಲುತ್ತಿದ್ದ, ಇಂದು ಆರೋಗ್ಯವಾಗಿರುವ! ಯಡಿಯೂರಪ್ಪನವರೆ ಉತ್ತರಿಸಬೇಕಿದೆ.

ತಮಿಳುನಾಡು ಕರ್ನಾಟಕಕ್ಕೆ ತೊರಿರುವ ಮತ್ತೊಂದು ದೊಡ್ಡತನ ನೆನ್ನೆ ಪತ್ರಿಕೆಗಳಲ್ಲಿ ಪ್ರಕಟವಾಗಿದೆ! ಇದನ್ನು ಯಡಿಯೂರಪ್ಪನವರು ಕಂಡರೋ ಇಲ್ಲವೋ ಗೊತ್ತಿಲ್ಲ. ಕರುಣಾನಿಧಿಯವರನ್ನು ಅಭಿನಂದಿಸಿ ದೊಡ್ಡತನ ಮೆರೆದು ಬಂದಿದ್ದಾರೆ.

ಕರ್ನಾಟಕದಲ್ಲಿ ಈ ಕುರಿತಾಗಿ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗ, "ಕಾವೇರಿ"ರುವಾಗ, ತಮಿಳುನಾಡಿನಲ್ಲಿನ 'ಶೇಕಡ ೯೫ ವರ್ಗದದವರ'! ಅಭಿಪ್ರಾಯ ಏನಿದೆ? ಅದು ಅಲ್ಲಿನ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆಯ? ಬೆಂಗಳೂರಿನಲ್ಲಿ ನೆಲೆಸಿರುವ ತಮಿಳರಿಗೆ ಕರ್ನಾಟಕ ಹಿತಾಸಕ್ತಿ ಕುರಿತಂತೆ ಯಾವ ಅಭಿಪ್ರಾಯಗಳಿವೆ? ಅಂತ ನಮ್ಮ ಮಾಧ್ಯಮದವರು ಯಾರೂ ಇನ್ನೂ ಮುಖಪುಟದ ಸುದ್ದಿ ಮಾಡದಿರುವುದು - ಪಂಚ್ ಲೈನ್ ಹೆಡ್ಡಿಂಗ್ ಕೊಡದಿರುವುದು ಕರ್ನಾಟಕದ ಉಳಿದ ಶೇಕಡ ೫ 'ಬಹುಜನರಿಗೆ' ಬೇಸರ ತಂದಿದೆ ಎಂದು ನಿಮಗನಿಸುತ್ತಿಲ್ಲವೆ?

ಕರ್ನಾಟಕದ ಈ ಶೇಕಡ ೯೫ ಜನರ ಅಭಿಪ್ರಾಯಗಳಿಂದ ಉಳಿದ ಶೇಕಡ ೫ ಬಹುಜನರು ಇನ್ಯಾವ ರೀತಿಗಳಲ್ಲಿ ನಲುಗಬೇಕಾಗಿದೆಯೋ ಕಾದು ನೋಡೋಣವೆ!


*****

Tuesday, August 4, 2009

ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ!

೨೦೦೯ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವನ್ನಾಗಿ ಘೋಷಿಸಿ! ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತೆಮೆ ಅನಾವರಣಕ್ಕೆ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಪಣ ತೊಟ್ಟು ನಿಂತಿದೆ. ಕಳೆದೆರಡು ವಾರಗಳಿಂದ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ನಮ್ಮ ಸಾಹಿತಿ ಬುದ್ದಿ ಜೀವಿಗಳು! ಕನ್ನಡ ಪರ ಚಿಂತಕರು! ಕರ್ನಾಟಕದ ಬಹುತೇಕ ಎಲ್ಲಾ ಕನ್ನಡ ಪತ್ರಿಕೆಗಳವರು,ನ್ಯಾಯವಾದಿಗಳು ಸರ್ಕಾರದ ಈ ಯೋಚನೆಗೆ ಬೆಂಬಲ ಸೂಚಿಸಿ ಹೇಳಿಕೆಗಳನ್ನು ನೀಡುತ್ತ, ಸಮಸ್ತ ಕನ್ನಡಿಗರು ತಮ್ಮ ಸಣ್ಣತನ, ಅಸಹನೆ, ಸಂಕುಚಿತತೆ, ವಿರೋಧ, ವೈಮನಸ್ಯ ತೊರೆದು ಸರಕಾರದ ಈ ನಿಲುವಿಗೆ ಬೆಂಬಲ ತೋರಬೇಕೆಂದು ಕರೆ ನೀಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ನಾವೆಲ್ಲ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಏಕೆ ತಡೆ ಹಿಡಿಯಲಾಗಿದೆ ಎಂಬುದನ್ನು ಒಮ್ಮೆ ಹಿಂತಿರುಗಿ ನೋಡಬೇಕಿದೆ:

೧೯೯೧ರಲ್ಲಿ ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಕೆಲವು ತಮಿಳು ಹಿತಾಸಕ್ತಿದಾರರು ಮುಂದಾಗಿದ್ದಾಗ, ಕನ್ನಡಪರ ಸಂಘಟನೆಗಳ ಒಗ್ಗೂಡಿದ ಪ್ರತಿಭಟನೆಯಿಂದಾಗಿ ಅನಾವರಣ ಸ್ಥಗಿತಗೊಂಡಿತ್ತು.

ಈ ೧೮ ವರ್ಷಗಳಲ್ಲಿ ತಮಿಳರ ಪರವಾದ (ಸಂಕೇತವಾದ!) ಈ ಪ್ರತಿಮೆ ಅನಾವರಣದ ವಿರೋಧಕ್ಕೆ ಕಾಲಾನುಕಾಲವಾಗಿ ಪಟ್ಟಿ ಮಾಡಬಹುದಾದ ಕಾರಣಗಳು: ತಮಿಳರು ನಾವು ಬೆಂಗಳೂರಿನವರು ಆದರೆ ಕರ್ನಾಟಕಕ್ಕೆ ಸೇರಿದವರಲ್ಲ ಎಂಬ ಭಾವನೆ ಇಟ್ಟುಕೊಂಡಿರುವುದು, ಇಲ್ಲಿ ನೆಲೆಸಿರುವ ತಮಿಳರ ಉದ್ದೇಶ ಬೆಂಗಳೂರನ್ನು ಕೇಂದ್ರಾಡಳಿತಕ್ಕೆ ಒಳಪಡಿಸುವುದಾಗಿರುವುದು , ತಿರುವಳ್ಳುವರ್ "ರಾಷ್ಟ್ರ ಕವಿ" ಅವರ ಪ್ರತಿಮೆ ಸ್ಥಾಪನೆ ಬೇಡ ಎನ್ನುವ ಕನ್ನಡಿಗರು ಎಂತಹ ದೇಶ ಭಕ್ತರು ಎಂದು ಸಹೃದಯಿಗಳಾದ ಕನ್ನಡಿಗರನ್ನೇ ಪ್ರಶ್ನಿಸಿದ್ದು, ಅಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿ ಎಂದು ಬರಹಗಳನ್ನು ಬರೆಸಿ, ಸರ್ಕಾರವನ್ನು ಆಗ್ರಹಿಸಿ, ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಭರವಸೆ ನೀಡುವ, ಅದಕ್ಕೆ ಪ್ರಯತ್ನಿಸುವ ಸದಸ್ಯನಿಗೆ ಮಾತ್ರ ಚುನಾವಣೆಗಳಲ್ಲಿ ಮತ ಹಾಕಿ ಎಂದು ಇಲ್ಲಿನ ತಮಿಳು ಸಮುದಾಯಕ್ಕೆ ಆದೇಶ ಹೊರಡಿಸಿದ್ದು, ವೀರಪ್ಪನ್ ಒತ್ತಾಸೆಯಿಂದ ರಾಜಕುಮಾರ್ ಬಿಡುಗಡೆ ಆಗಬೇಕಾದ್ರೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಆಗಬೇಕು ಎಂಬ ಹಠ ಮಾಡಿದ್ದು. ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಕನ್ನಡಿಗರನ್ನು ಒದೆಯಬೇಕು ಎಂದು ಹೇಳಿಕೆ ನೀಡಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗದಂತೆ ತೊಡರುಗಾಲು ಹಾಕಿರುವುದು, ತಮ್ಮ ರಾಜ್ಯದ ಯೋಜನೆಗಳ ಅನುಷ್ಠಾನಕ್ಕಾಗಿ ಕರ್ನಾಟಕದ ಹಿತಾಸಕ್ತಿಯನ್ನು ಬಲಿಗೊಡುತ್ತಿರುವುದು.ಹೀಗೆ ಕನ್ನಡಿಗನ ಸ್ವಾಭಿಮಾನ ಮತ್ತು ಸಾರ್ವಭೌಮತ್ವವನ್ನು ಪದೆ ಪದೆ ಕೆಣಕಲು ಪ್ರಯತ್ನಿಸುತ್ತಿರುವುದೇ ಆಗಿದೆ.

ಮೇಲಿನ ತಮಿಳರ ಈ ಎಲ್ಲ ಸಣ್ಣತನಗಳನ್ನು ಸಹಿಸಿಕೊಂಡು ಅವರೊಡನೆ ಇನ್ನೂ ಸಹಬಾಳ್ವೆ ನಡೆಸುತ್ತಿರುವ ಕನ್ನಡಿಗನದು ಸಂಕುಚಿತ ಸ್ವಭಾವ ಎನ್ನುವುದಾದರೆ ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ ಎಂದು ಒಪ್ಪಿಕೊಳ್ಳಬಹುದಾಗಿದೆ.

ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನ ಬೇಡವೇ ಬೇಡ ಎಂದು ಅಂದು - ಮತ್ತು ಎಂದೆಂದೂ ಕನ್ನಡಿಗರು ಹೇಳಿಲ್ಲ. ಪರ್ಯಾಯವಾಗಿ ಚೆನ್ನೈನ ಪ್ರಮುಖ ಸ್ಥಳದಲ್ಲಿ ನಮ್ಮ ಸರ್ವಜ್ಞ ಕವಿಯ ಪ್ರತಿಮೆಯಿರಿಸಿ ಎಂಬ ಬೇಡಿಕೆ ಮಾತ್ರ ಕನ್ನಡಿಗರದಾಗಿತ್ತು. ಇದನ್ನು ಅವರು ಇದುವರೆವಿಗೆ ಒಪ್ಪಿಕೊಳ್ಳದೆ ನೆರವೇರಿಸದಿದ್ದದ್ದು ಕನ್ನಡಿಗರ ತಪ್ಪೇ? ಈಗ ಅವರಲ್ಲಿಗೆ ಹೋಗಿ ಅವರನ್ನು ಒಪ್ಪಿಸಿ ಬಂದಿರುವುದು ಸಹ ಕನ್ನಡದ ಮುಖ್ಯಮಂತ್ರಿಯೇ ಅಲ್ಲವೇ. ಇದನ್ನು ಕನ್ನಡಿಗರ ಸಂಕುಚಿತ ಭಾವನೆ ಎಂದರೆ ಕನ್ನಡಿಗ ಪ್ರತಿಮೆ ಪ್ರತಿಷ್ಠಾಪನೆಗೆ ವಿರೋಧಿಸುತ್ತಿದ್ದಾನೆ ಎಂದು ಒಪ್ಪಿಕೊಳ್ಳಬಹುದಿತ್ತು.

ತಮಿಳರು ಸೇರಿದಂತೆ ಇತರ ಭಾಷಿಕರನ್ನು ಕನ್ನಡಿಗರು ಇಲ್ಲಿ ಸಹೋದರರಂತೆ ಬೆಳೆಸಿದ್ದಾರೆ. ಅವರ ಎಲ್ಲಾ ಆಗುಹೋಗುಗಳಿಗೆ ಸ್ಪಂದಿಸಿದ್ದಾರೆ. ಬೆಂಗಳೂರಿನಲ್ಲಿ "ರಾಜಾಜಿ" ನಗರವಿದೆ, "ಕಾಮರಾಜ್" ರಸ್ತೆಯಿದೆ, "ರವೀಂದ್ರ" ಕಲಾಕ್ಷೇತ್ರವಿದೆ. ಕನ್ನಡಿಗರಲ್ಲದ ಅನೇಕರನ್ನು ನಮ್ಮನ್ನಾಳಲು ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿದ್ದೇವೆ. ಅಣ್ಣಮ್ಮ ಗುಡಿಗಿಂತ ಹೆಚ್ಚಾಗಿ ಅಯ್ಯಪ್ಪ ದೇವಸ್ಥಾನಕ್ಕೆ ಜಾಗ ಮಾಡಿಕೊಟ್ಟಿದ್ದೇವೆ. ಈ ದೇಶದ ಇನ್ಯಾವ ಊರಿನಲ್ಲೂ ಇರದಷ್ಟು ಪರಭಾಷ ಚಲನಚಿತ್ರಗಳು ಹಾಗು ಮನರಂಜನೆ ಬೆಂಗಳೂರು-ಕರ್ನಾಟಕದಲ್ಲಿ ಚಾಲನೆಯಲ್ಲಿದೆ. ಕನ್ನಡಿಗನ ಈ ಎಲ್ಲಾ ನಿಲುವುಗಳು ಸಂಕುಚಿತವೆನಿಸಿದರೆ ಕನ್ನಡಿಗ ಪ್ರತಿಮೆ ಸ್ಥಾಪನೆಗೆ ಸಂಕುಚಿತತೆ ವೈಮನಸ್ಯ, ಅಸಹನೆ ತೋರುತ್ತಿದ್ದಾನೆ ಎಂದು ಒಪ್ಪಿಕೊಳ್ಳಬಹುದಿತ್ತು.

ಕನ್ನಡಿಗರು ಬೆರೆಲ್ಲೋ ಹೋಗಿ ತಮ್ಮ ಅಸ್ಥಿತ್ವಕ್ಕಾಗಿ ದಬ್ಬಾಳಿಕೆ ತೋರಿದ ಕುರುಹಿಲ್ಲ. ಕೆಲವೊಮ್ಮೆ ಇಲ್ಲಿ ಶಿಷ್ಟತೆಯನ್ನು ಮೀರಿದ್ದರೂ ಅದು ಕನ್ನಡಕ್ಕೆ ಪ್ರಾಧಾನ್ಯತೆ ದೊರೆಯಲಿ ಎಂಬ ಕಳಕಳಿಯ ಭಾವನೆಯಿಂದ ಹೊರಹೊಮ್ಮಿರುವುದೇ ಆಗಿದೆ. ಇದುವರೆಗಿನ ಎಲ್ಲಾ ಕನ್ನಡಪರ ಚಳವಳಿ / ಕಾಳಜಿಯು ಸಾಮಾನ್ಯ ಕನ್ನಡಿಗನ ಜೀವನ ಶೈಲಿಗೆ ಮನ್ನಣೆ ದೊರಕಿಸಿಕೊಡುವ ಪ್ರಯತ್ನ ಮಾತ್ರ ಎಂಬುದು ಸ್ಪಷ್ಟ. ಸಹೃದಯಿಯಾದ ಕನ್ನಡಿಗರನ್ನು, ಕನ್ನಡಿಗರೆ ಆದ ಕೆಲವರು "ಸಂಕುಚಿತ ಸ್ವಭಾವದವ- ಸಣ್ಣವ - ಅಸಹನೆಯವ" ಎಂದು ಹಣೆ ಪಟ್ಟಿ ಕಟ್ಟುತ್ತಿರುವುದು ವಿಪರ್ಯಾಸವಾಗಿದೆ.

ತಿರುವಳ್ಳುವರ್ ತಮ್ಮ ಕವಿತೆಗಳಲ್ಲಿ ಹೇಳಿದ್ದಾರೆ : ತಮ್ಮ ಕರ್ತವ್ಯದಲ್ಲಿ ದೋಷವುಂಟಾಗದಂತೆ ಇನ್ನೊಬ್ಬರ ವಿಷಯದಲ್ಲಿ ಅನುಕಂಪವನ್ನು ತೋರಿಸುವವನಿಗೆ ಮತ್ತು ಕೊಟ್ಟು-ಪಡೆಯುವವನಿಗೆ ಈ ಜಗತ್ತೇ ಅಧೀನನಾಗುವುದು. ತಮಿಳು ನಾಯಕರು ತಿರುಕ್ಕುರಳ್ ಅನ್ನು ಮತ್ತೊಮ್ಮೆ ಅಧ್ಯಯನ ಮಾಡಿ ಪರರಾಜ್ಯಗಳವರೊಡನೆ ಹೇಗೆ ಅನ್ಯೋನ್ಯದಿಂದಿರಬೇಕು ಎಂಬುದನ್ನು ಇನ್ನೂ ಸರಿಯಾಗಿ ಅರಿಯಬೇಕಿದೆ. ಇಲ್ಲಿ ಕನ್ನಡಿಗರು "ಸಣ್ಣ ಮನಸ್ಸಿನವರು-ಅಸಹನೆಯವರು" ಎಂಬ ಮಾತುಗಳಿಗಿಂತ, ತಿರುವಳ್ಳುವರ್ ನ ಆರಾಧಕರಾದ ತಮಿಳರು ಮೊದಲು ಸರ್ವಜ್ಞ ಪ್ರತಿಮೆಯನ್ನು ತಮಿಳುನಾಡಿನಲ್ಲಿ ಸ್ಥಾಪಿಸಿ ಒಮ್ಮೆಯಾದರೂ ದೊಡ್ಡವರೆನಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಎನ್ನುವುದು ಮಾತ್ರ ಸತ್ಯವಾದದ್ದು. ಈ ವಿಷಯವನ್ನು ತಮಿಳುನಾಡಿನ ಬುದ್ದಿಜೀವಿಗಳು ತಮ್ಮ "ಮಕ್ಕಳ್" ಗಳಿಗೆ ತಿಳಿಸಿಕೊಡಬೇಕಾಗಿರುವುದು ಈಗ ಅಗತ್ಯವಾದದ್ದು.

ಕರ್ನಾಟಕದಲ್ಲಿ ತಿರುವಳ್ಳುವರ್ ಕುರಿತಾಗಿ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿರುವಾಗ, ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಬೆಂಗಳೂರಿನಲ್ಲಿಯೇ ಆರಾಮವಾಗಿ ಕಾಲ ಕಳೆಯುತ್ತಿದ್ದು ನಮ್ಮ ನಮ್ಮವರೆ ಕಿತ್ತಾಡುವುದನ್ನು ನೋಡಿ ಪುಳಕಿತಗೊಂಡಿರುವುದು ಸತ್ಯ. ತಮಿಳರು ತಮ್ಮ ದೊಡ್ಡತನ ಮೆರೆಯುವ ಒಂದು ಹೇಳಿಕೆ ನೀಡುವ ಬಗ್ಗೆ ತಲೆಯೆ ಕೆಡಿಸಿಕೊಂಡಿಲ್ಲ.


ತಮಿಳರು ಎಂದಿಗೂ ಸ್ವಾಭಿಮಾನಿಗಳು, ದೊಡ್ಡತನ ಮೆರೆದು ದಡ್ಡರಾಗುವವರಲ್ಲ ಎಂದು ಮಾತ್ರ ಇದರಿಂದ ಸಾಬೀತಾಗುತ್ತಿದೆ.

ಯಾವ ಕಾರಣಕ್ಕಾಗಿ ನಮ್ಮನ್ನಾಳುತ್ತಿರುವವರು ಅವರ ಹಿಂಬಾಲಕರು ಈ ನಿಲುವಿಗೆ ತಲೆಬಾಗಿದ್ದಾರೆ? ಉತ್ತರವಿದೆಯೇ


*****